'ನಾವಿಲ್ಲದೆ ಬೆಂಗ್ಳೂರು ಖಾಲಿ..' ಎಂದ ಯುವತಿಗೆ ಬಿಸಿ ಮುಟ್ಟಿಸಿದ ಕರವೇ
ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲೇ ಬದುಕು ಕಟ್ಟಿಕೊಂಡರೂ ಈ ನೆಲದ ಬಗ್ಗೆ ಹೊರಗಿನವರಿಗೆ ಈಗಲೂ ಅಸಡ್ಡೆ ಎನ್ನುವ ಆರೋಪ ಕನ್ನಡಿಗರದ್ದು. ಇನ್ನು ಇತ್ತೀಚೆಗಂತೂ ಬೆಂಗಳೂರಲ್ಲೇ ನಿಂತು ಬೆಂಗಳೂರನ್ನು ಬೈಯುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಇದರಿಂದ ಸೋಶಿಯಲ್ ಮೀಡಿಯಾಗಳಲ್ಲಿ ಕನ್ನಡಿಗರು ಹಾಗೂ ಇಲ್ಲಿಗೆ ಬಂದಿರುವ ಹೊರ ರಾಜ್ಯದವರ ನಡುವೆ ಟಾಕ್ ವಾಕ್ ನಡೆಯುತ್ತಲೇ ಇರುತ್ತದೆ.
ಈಗಲೂ ಅಂತದ್ದೇ ಮತ್ತೊಂದು ವಾರ್ ಶುರುವಾಗಿದ್ದು ಒಂದು ಇನ್ಸ್ಟಾಗ್ರಾಂ ರೀಲ್ಸ್ನಿಂದ. ಉತ್ತರ ಭಾರತದ ಸುಗಂಧ್ ಶರ್ಮಾ ಎನ್ನುವ ಯುವತಿ ಮಾಡಿರುವ ರೀಲ್ಸ್ನಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದನ್ನು ಅವರು ಕಾಮಿಡಿಯಾಗಿ ಹೇಳಿದರೂ ಕನ್ನಡಿಗರನ್ನು ಕೆರಳಿಸುವಂತೆಯೇ ಇತ್ತು ಆಕೆಯ ಮಾತುಗಳು.

ರೀಲ್ಸ್ನಲ್ಲಿ ಯುವತಿ ಹೇಳಿದ್ದೇನು?: ರೀಲ್ಸ್ನಲ್ಲಿ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಯುವತಿ, ನಾವು ಉತ್ತರ ಭಾರತೀಯರೇ ಇಲ್ಲ ಅಂದ್ರೆ ಇಡೀ ಬೆಂಗಳೂರು ಖಾಲಿ ಖಾಲಿ ಹೊಡೆಯುತ್ತೆ.. ಇಲ್ಲಿರುವ ಪಿ.ಜಿಗಳೆಲ್ಲ ಭಣಗುಡುತ್ತವೆ. ಅದರಲ್ಲೂ ಕೋರಮಂಗಲದ ಪಬ್ಗಳೆಲ್ಲವೂ ಬಿಕೋ ಎನ್ನುತ್ತವೆ. ಹಾಗಾಗಿ, ನಮ್ಮ ಬಗ್ಗೆ ಮಾತನಾಡುವಾಗ ಹುಷಾರ್ ಎಂದು ರೀಲ್ಸ್ನಲ್ಲಿ ಆಕೆ ಕೊಬ್ಬಿನಿಂದ ವಾರ್ನಿಂಗ್ ಕೊಟ್ಟಿದ್ದರು.
ಈ ರೀಲ್ಸ್ ನೋಡಿದ ಹಲವರು ಆಕೆಯ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಕೆ ಇಲ್ಲದಿದ್ರೆ ಬೆಂಗಳೂರಿಗೆ ಏನೂ ನಷ್ಟ ಇಲ್ಲ. ಮೊದಲು ಈಕೆಯನ್ನು ಇಲ್ಲಿಂದ ಕಳಿಸಿ ಎಂಬ ಕೂಗು ಜೋರಾಗಿ ಎದ್ದಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ, ವಾದ ವಿವಾದಕ್ಕೂ ಕಾರಣವಾಗಿದೆ. ತೊಲಗ್ರೋ ಬೇಗ ಎಂದು ಹ್ಯಾಶ್ಟ್ಯಾಗ್ ಹಾಕಿ ಅಭಿಯಾನ ಕೂಡ ಶುರುವಾಗಿದೆ.
ಈ ವಿಚಾರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ನಾರಾಯಣಗೌಡ ಅವರವರೆಗೂ ತಲುಪಿದ್ದು, ಅವರ ಖಡಕ್ ಆಗಿ ಯುವತಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇಲ್ಲಿಗೆ ಬಂದ ಮೇಲೆ ಸುಮ್ಮನಿರಬೇಕು..ಆಗದಿದ್ರೆ ಗಂಟು ಮೂಟೆ ಕಟ್ಟಿಕೊಂಡು ನಿಮ್ಮೂರಿಗೆ ಹೊರಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಯುವತಿಯ ವಿಡಿಯೋಗೆ ಸ್ಯಾಂಡಲ್ವುಡ್ನ ಕೆಲವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಗ್ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಕೂಡ ಪ್ಲೀಸ್ ಇಲ್ಲಿಂದ ಹೊರಡಿ ಎಂದು ಈ ರೀಲ್ಸ್ಗೆ ಕಾಮೆಂಟ್ ಮಾಡಿದ್ದಾರೆ. ನಟಿ ಚೈತ್ರಾ ಆಚಾರ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದು, ನೀವು ಹೇಳಿದಂತೆ ನಾವು ನಿಮ್ಮಂತವರು ಇಲ್ಲದ ಖಾಲಿ ಬೆಂಗಳೂರನ್ನು ನೋಡಲು ಇಚ್ಛಿಸುತ್ತೇವೆ. ನಾವು ಹಾಗೆಯೇ ಜೀವನ ನಡೆಸಲು ಇಷ್ಟ ಪಡುತ್ತೇವೆ. ಬೇರೆಯವರ ಬಗ್ಗೆ ನಾನು ಮಾತನಾಡುತ್ತಿಲ್ಲ, ಮೊದಲು ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಸಿಡಿದಿದ್ದಾರೆ.
So these northies are calling themselves as just bar/club dancers in Bengaluru 😭
— Rekha 🌸 (@detached_98) September 21, 2024
ತಿರ್ಬೋಕಿಗಳು😂pic.twitter.com/1skCEBFZ2S
ಕನ್ನಡತಿ, ಟಾಲಿವುಡ್ ನಟಿ ವರ್ಷ ಬೊಲ್ಲಮ್ಮ ಕೂಡ, ಆದಷ್ಟು ಬೇಗನೇ ಅಲ್ಲಿಂದ ಹೊರಡಿ, ನೀವು ಹೇಳಿದ್ದು ಆದ್ರೆ ತುಂಬಾ ಚೆನ್ನಾಗಿರುತ್ತೆ! ಎಂದು ಕಾಮೆಂಟ್ನಲ್ಲಿ ಆಕೆಯ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಕಿರುತೆರೆ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲೇ ಯೂಟರ್ನ್ ಹೊಡೆದ ಯುವತಿ: ಇನ್ನು ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ, ಕಾಮೆಂಟ್ಗಳಲ್ಲಿ ಕೂಡ ವಿರೋಧ ವ್ಯಕ್ತವಾಗಿದ್ದೇ ತಡ...ಆ ಯುವತಿ ಎಚ್ಚೆತ್ತುಕೊಂಡು ಯೂಟರ್ನ್ ಹೊಡೆದಿದ್ದಾರೆ. ಹಳೆಯ ರೀಲ್ಸ್ನಲ್ಲಿ ಬೆಂಗಳೂರಿನ ಬಗ್ಗೆ ಕೇವಲವಾಗಿ ಮಾತನಾಡಿದ್ದ ಯುವತಿ, ಮತ್ತಷ್ಟು ರೀಲ್ಸ್ ಮಾಡಿ ಅದರಲ್ಲಿ ಐ ಲವ್ ಬೆಂಗಳೂರು ಎನ್ನುವ ಮೂಲಕ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
ಇನ್ನೊಂದು ರೀಲ್ಸ್ನಲ್ಲಿ ಆಕೆ, ನಾನು ಕಾಮಿಡಿಗಾಗಿ ಮಾಡಿದ ರೀಲ್ಸ್ ನೋಡಿ ಹಲವರು ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. "ನಾನು ಬೆಂಗಳೂರನ್ನೇ ಪ್ರೀತಿಸುತ್ತೇನೆ" ಎಂದು ಕನ್ನಡದಲ್ಲೇ ಮಾತನಾಡಿರುವ ಯುವತಿ, ನಾನೊಬ್ಬ ಟ್ರಾವೆಲರ್, ಎಲ್ಲ ಊರಿನ ಸಂಸ್ಕೃತಿ ನನಗೆ ಇಷ್ಟ. ಎಲ್ಲ ಊರನ್ನೂ ನಾನು ಗೌರವಿಸುತ್ತೇನೆ. ನಾವು ಒಡೆದು ಆಳುವುದು ಬೇಡ. ನಾವೆಲ್ಲ ಒಂದು, ಇದು ಇಂಡಿಯಾ, ನಾನು ಭಾರತೀಯಳು ಎಂದೆಲ್ಲ ಭಾಷಣ ಬಿಗಿದಿದ್ದಾರೆ.
ಬೆಂಗಳೂರು ನಿನ್ನೊಬ್ಬಳಿಂದ ನಡೆಯುತ್ತಿಲ್ಲ. ಹಾಗೇನಾದ್ರೂ ತಪ್ಪಾಗಿ ಅನ್ಕೊಂಡಿದ್ರೆ ಮೊದಲು ಇಲ್ಲಿಂದ ನೀವು ತೊಲಗಿ ನೋಡಿ.. ಬೆಂಗಳೂರು ಎಷ್ಟು ಚೆನ್ನಾಗಿರುತ್ತೆ ಅನ್ನೋದನ್ನೇ ರೀಲ್ಸ್ ಮಾಡಿ ನಿನಗೇ ಕಳಿಸುತ್ತೇವೆ ಎಂದು ಕನ್ನಡಿಗರು ಸವಾಲು ಹಾಕಿದ್ದಾರೆ. ಅಲ್ಲದೆ, ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಕುತ್ತಿಗೆಗೆ ಬಂದಾಗ ಈ ರೀತಿ ಉಲ್ಟಾ ಹೊಡೆದು, ಶೇಪ್ಔಟ್ ಆಗೋದು ಬೇಕಾ? ಎಂದೆಲ್ಲ ನೆಟ್ಟಿಗರು ಆಕೆಯ ಡಬಲ್ ಗೇಮ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.












Click it and Unblock the Notifications