ಕಾಂಗ್ರೆಸ್ಸಿಗೆ ನಂದನ್ ನಿಲೇಕಣಿ ಅಧಿಕೃತವಾಗಿ ಸೇರ್ಪಡೆ
ಬೆಂಗಳೂರು, ಮಾ.9 : ಇನ್ಫೋಸಿಸ್ ಸಹ ಸ್ಥಾಪಕ, ವಿಶಿಷ್ಟ ಗುರುತಿನ ಚೀಟಿ 'ಆಧಾರ್' ಯೋಜನೆ ನಿರ್ಮಾತೃ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಘೋಷಿತಾ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಭಾನುವಾರ, ಮಾ.9ರಂದು ಕಾಂಗ್ರೆಸ್ ಪಕ್ಷವನ್ನು ವಿಧ್ಯುಕ್ತವಾಗಿ ಸೇರಿದ್ದಾರೆ.
ಭಾನುವಾರ ಬೆಳಗ್ಗೆ 11.25 ರ ಸುಮಾರಿಗೆ ನಗರದ ಕ್ವೀನ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ನಂದನ್ ನಿಲೇಕಣಿ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಒಂದು ದಿನ ಮುನ್ನವೇ ನಂದನ್ ನಿಲೇಕಣಿ ಅವರ ಹೆಸರನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಘೋಷಿಸಲಾಗಿತ್ತು.[ಪಟ್ಟಿ ಇಲ್ಲಿದೆ ನೋಡಿ]
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವ ರೆಹಮಾನ್ ಖಾನ್, ರಾಜ್ಯ ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಬಿಎಲ್ ಶಂಕರ್, ಆರ್ ವಿ ದೇವರಾಜ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಂದನ್ ನಿಲೇಕಣಿ ಮಾತುಗಳು : ನನ್ನ ಸಿದ್ಧಾಂತ ಹಾಗೂ ಕಾಂಗ್ರೆಸ್ ಸಿದ್ಧಾಂತ ಒಂದೇ ಆಗಿದೆ. ಈಗ ಎಲ್ಲೆಡೆ ಬದಲಾವಣೆಯ ಕಾಲ ಬಂದಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಬೇಕು ಅಷ್ಟೆ. ಕಳೆದ ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಏನು ನಡೆದಿದೆ ಎಂಬುದನ್ನು ಅಧ್ಯಯನ ಮಾಡಿದ್ದೇನೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಂಡೆ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. [ಕಾಂಗ್ರೆಸ್ ಸದಸ್ಯ 121789 ಪ್ರಥಮ ನುಡಿಗಳಿವು]
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನಂದನ್ ಅವರೇ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆಯಾಗುವ ಮುಂಚಿತವಾಗಿಯೇ ತಮ್ಮ ಪತ್ನಿ ರೋಹಿಣಿ ನಿಲೇಕಣಿ ಅವರೊಂದಿಗೆ ಮನೆಮನೆಗೆ, ಕಾಲೇಜುಗಳಿಗೆ ನಂದನ್ ಭೇಟಿ ಕೊಟ್ಟು ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ನಂದನ್ ನಿಲೇಕಣಿ ಮುಖ ಎಲ್ಲರಿಗೂ ಚಿರಪರಿಚಿತವಾಗಿಬಿಟ್ಟಿದೆ.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರವು ಗೋವಿಂದರಾಜನಗರ, ವಿಜಯನಗರ, ಪದ್ಮನಾಭನಗರ, ಚಿಕ್ಕಪೇಟೆ, ಬಸವನಗುಡಿ, ಬಿಟಿಎ ಲೇಔಟ್, ಜಯನಗರ, ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ, ಹಲವಾರು ಐಟಿ ಕಂಪನಿಗಳು, ಹಿರಿಯ ನಾಗರೀಕರು, ಸಕಲ ಮತ ಧರ್ಮಗಳನ್ನು ಒಳಗೊಂಡಿರುವ ಈ ಪ್ರದೇಶದ ಮೇಲೆ ಕಾಂಗ್ರೆಸ್ ಪ್ರಭುತ್ವ ಸಾಧಿಸಲು ಆಗದೆ ಹೆಣಗಾಡುತ್ತಿದೆ. ನಂದನ್ ನಿಲೇಕಣಿ ಕೂಡ ಐಟಿ ಕ್ಷೇತ್ರದ ಹಿನ್ನೆಲೆಯುಳ್ಳವರಾದ್ದರಿಂದ ಇದರ ಲಾಭ ಪಡೆಯುತ್ತಾರಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. [ನಿಲೇಕಣಿ ವಿರುದ್ಧ ಬಿಜೆಪಿ ದೂರು]
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಶನಿವಾರ ಆಯ್ಕೆ ಮಾಡಲಾಗಿದೆ. 6ನೇ ಬಾರಿ ಈ ಪ್ರತಿಷ್ಠಿತ ಕ್ಷೇತ್ರವನ್ನು ಅನಂತ್ ಉಳಿಸಿಕೊಳ್ಳುತ್ತಾರಾ ಅಥವಾ ನಂದನ್ ಅದನ್ನು ಕಿತ್ತುಕೊಳ್ಳುತ್ತಾರಾ ಎಂಬುದು ಮೇ 16ರಂದು ಚುನಾವಣೆ ಫಲಿತಾಂಶದ ದಿನ ತಿಳಿಯಲಿದೆ. [ಬಿಜೆಪಿ ಕರ್ನಾಟಕ ಮೊದಲ ಪಟ್ಟಿ]












Click it and Unblock the Notifications