ಭಾನುವಾರ ಕಾಂಗ್ರೆಸ್ಸಿಗೆ ನಂದನ್ ನಿಲೇಕಣಿ ಸೇರ್ಪಡೆ
ಬೆಂಗಳೂರು, ಮಾ. 8 : ವಿಶಿಷ್ಟ ಗುರುತಿನ ಚೀಟಿ 'ಆಧಾರ್' ಸಾಧನೆಯನ್ನು ಕೈಯಲ್ಲಿ ಹಿಡಿದುಕೊಂಡೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಿರುವ ನಂದನ್ ನಿಲೇಕಣಿ ಅವರು ಭಾನುವಾರ, ಮಾ.9ರಂದು ಕಾಂಗ್ರೆಸ್ ಪಕ್ಷವನ್ನು ವಿಧ್ಯುಕ್ತವಾಗಿ ಸೇರಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಕಾಂಗ್ರೆಸ್ ವಿಧಾನಸಭಾ ಸದಸ್ಯರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಹಸ್ತ ಲಾಂಛನದ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. [ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನಂದನ್, ರಮ್ಯಾ]
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನಂದನ್ ಅವರೇ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ, ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಆದ್ದರಿಂದಲೇ ತಮ್ಮ ಪತ್ನಿ ರೋಹಿಣಿ ನಿಲೇಕಣಿ ಅವರೊಂದಿಗೆ ಮನೆಮನೆಗೆ, ಕಾಲೇಜುಗಳಿಗೆ ನಂದನ್ ಭೇಟಿ ಕೊಡುತ್ತಿದ್ದಾರೆ. [ಬದಲಾವಣೆಗೆ ರಾಜಕೀಯ ಉತ್ತಮ ವೇದಿಕೆ : ನಿಲೇಕಣಿ]
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಶನಿವಾರ ಆಯ್ಕೆ ಮಾಡಲಾಗಿದೆ. 6ನೇ ಬಾರಿ ಈ ಪ್ರತಿಷ್ಠಿತ ಕ್ಷೇತ್ರವನ್ನು ಅನಂತ್ ಉಳಿಸಿಕೊಳ್ಳುತ್ತಾರಾ ಅಥವಾ ನಂದನ್ ಅದನ್ನು ಕಿತ್ತುಕೊಳ್ಳುತ್ತಾರಾ ಎಂಬುದು ಮೇ 16ರಂದು ಚುನಾವಣೆ ಫಲಿತಾಂಶದ ದಿನ ತಿಳಿಯಲಿದೆ. [ಬಿಜೆಪಿ ಕರ್ನಾಟಕ ಮೊದಲ ಪಟ್ಟಿ]
ಈ ಕ್ಷೇತ್ರ ಗೋವಿಂದರಾಜನಗರ, ವಿಜಯನಗರ, ಪದ್ಮನಾಭನಗರ, ಚಿಕ್ಕಪೇಟೆ, ಬಸವನಗುಡಿ, ಬಿಟಿಎ ಲೇಔಟ್, ಜಯನಗರ, ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಹಲವಾರು ಐಟಿ ಕಂಪನಿಗಳು ಈ ಪ್ರದೇಶಗಳಲ್ಲಿ ಬೀಡಿಬಿಟ್ಟಿವೆ. ನಂದನ್ ನಿಲೇಕಣಿ ಕೂಡ ಐಟಿ ಕ್ಷೇತ್ರದ ಹಿನ್ನೆಲೆಯುಳ್ಳವರಾದ್ದರಿಂದ ಇದರ ಲಾಭ ಪಡೆಯುತ್ತಾರಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. [ನಿಲೇಕಣಿ ವಿರುದ್ಧ ಬಿಜೆಪಿ ದೂರು]
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ (4,37,953 ಮತಗಳು) ಅವರು ಕಾಂಗ್ರೆಸ್ ಪಕ್ಷದ ನಾಯಕ ಕೃಷ್ಣ ಭೈರೇಗೌಡ (4,00,341 ಮತಗಳು) ಅವರನ್ನು ಕೇವಲ 37 ಸಾವಿರ ಮತಗಳಿಂದ ಸೋಲಿಸಿದ್ದರು. ಅನಂತ್ ಅವರು 1996ರ ಚುನಾವಣೆಯಿಂದ ಈ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಆದರೆ, ಈ ಬಾರಿ ನಂದನ್ ಅವರು ಅನಂತ್ ಅವರಿಗೆ ತುರುಸಿನ ಸ್ಪರ್ಧೆ ನೀಡುವುದು ಖಚಿತ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.