Namma Metro; ವರ್ಷಾಂತ್ಯಕ್ಕೆ ಹೊಸ ಮಾರ್ಗದಲ್ಲಿ ರೈಲು, ನಿಲ್ದಾಣಗಳು
ಬೆಂಗಳೂರು, ಆಗಸ್ಟ್ 07; ನಮ್ಮ ಮೆಟ್ರೋ ಬೆಂಗಳೂರು ನಗರದಲ್ಲಿ ಜನರ ಜೀವನಾಡಿಯಾಗಿ ಬದಲಾಗುತ್ತಿದೆ. ಬಿಎಂಟಿಸಿ ಬಸ್ ಬಿಟ್ಟರೆ ಅತಿ ಹೆಚ್ಚಿನ ಜನರು ಸಂಚಾರಕ್ಕಾಗಿ ನಮ್ಮ ಮೆಟ್ರೋ ರೈಲು ಅವಲಂಬಿಸಿದ್ದಾರೆ. ಆದರೆ ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ರೈಲುಗಳು ಸಂಚಾರ ನಡೆಸುತ್ತಿವೆ.
2023ರ ವರ್ಷಾಂತ್ಯಕ್ಕೆ ಹೊಸ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ಗುರಿ ಇಟ್ಟುಕೊಂಡಿದೆ. ನಮ್ಮ ಮೆಟ್ರೋ ಯೋಜನೆಗೆ 'ಹಳದಿ' ಮಾರ್ಗದ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ವರ್ಷಾಂತ್ಯಕ್ಕೆ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಆರ್. ವಿ. ರಸ್ತೆ-ಬೊಮ್ಮಸಂದ್ರ (18.82 ಕಿ. ಮೀ.) ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗದ ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಹಸಿರು ಮತ್ತು ನೇರಳೆ ಮಾರ್ಗಕ್ಕಿಂತ ಇದು ಹಲವು ವಿಶೇಷತೆಗಳನ್ನು ಹೊಂದಿರುವ ನಮ್ಮ ಮೆಟ್ರೋ ಮಾರ್ಗವಾಗಿದೆ.
ಸಂಪರ್ಕ ಸೇತು ಮಾರ್ಗ; ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗ ಹಸಿರು-ಹಳದಿ, ಹಸಿರು-ಗುಲಾಬಿ, ಹಳದಿ-ನೀಲಿ ಮಾರ್ಗಗಳನ್ನು ಸಂಪರ್ಕಿಸುವ ಸೇತುವಾಗಲಿದೆ. ಡಬಲ್ ಡೆಕ್ಕರ್ ಮಾರ್ಗ ಕೂಡಾ ಇದರ ವ್ಯಾಪ್ತಿಯಲ್ಲಿಯೇ ಸೇರಿದ್ದು, ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಮಾರ್ಗಗೂ ಸಂಚಾರಕ್ಕೆ ಮುಕ್ತವಾಗಲಿದೆ.
ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ (3.3 ಕಿ. ಮೀ.) ಉದ್ದದ ಒಂದೇ ಮಾರ್ಗದಲ್ಲಿ ನಮ್ಮ ಮೆಟ್ರೋ, ವಾಹನಗಳು ಸಂಚಾರ ನಡೆಸುವಂತೆ ಡಬಲ್ ಡೆಕ್ಕರ್ ಸೇತುವೆ ನಿರ್ಮಾಣ ಮಾಡಲಾಗಿದೆ. ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾದರೆ ಸುಮಾರು 3 ಲಕ್ಷ ಜನರು ಈ ಮಾರ್ಗದಲ್ಲಿ ಸಂಚಾರ ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಜಯದೇವ ಬಳಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಆರ್. ವಿ. ರಸ್ತೆಯ ನಿಲ್ದಾಣ ಹಸಿರು, ಹಳದಿ ಮಾರ್ಗವನ್ನು ಸಂಪರ್ಕಿಸುತ್ತದೆ. ಜಯದೇವ ನಿಲ್ದಾಣ ಹಸಿರು ಮತ್ತು ಗುಲಾಬಿ ಮಾರ್ಗ ಸಂಪರ್ಕಿಸುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಹಳದಿ ಮತ್ತು ನೀಲಿ ಸಂಪರ್ಕಿಸುತ್ತದೆ.
ನಿಲ್ದಾಣದ ವಿವರಗಳು; ಸುಮಾರು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ 16 ನಿಲ್ದಾಣ ಒಳಗೊಂಡಿರುವ ಆರ್. ವಿ. ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಮೊದಲು ಬಿಎಂಆರ್ಸಿಎಲ್ ಎರಡು ಹಂತದಲ್ಲಿ ಈ ಮಾರ್ಗವನ್ನು ಲೋಕಾರ್ಪಣೆ ಮಾಡಲು ನಿರ್ಧರಿಸಿತ್ತು.
ಬೊಮ್ಮಸಂದ್ರ-ಸಿಲ್ಕ್ಬೋರ್ಡ್ ಮತ್ತು ಸಿಲ್ಕ್ಬೋರ್ಡ್-ಆರ್. ವಿ. ರಸ್ತೆ ನಡುವೆ ಎರಡು ಹಂತದಲ್ಲಿ ಮಾರ್ಗ ಲೋಕಾರ್ಪಣೆ ಮಾಡಲು ಅಂದಾಜಿಸಲಾಗಿತ್ತು. ಆದರೆ ಈಗ ಎರಡೂ ಒಟ್ಟಿಗೆ ಸೇರಿಸಿ ವರ್ಷಾಂತ್ಯದಲ್ಲಿ ಮೆಟ್ರೋ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದ್ದು, ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ.
ಈ ಮಾರ್ಗದಲ್ಲಿ ಆರ್. ವಿ. ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ, ಹೊಸೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ನಿಲ್ದಾಣಗಳಿವೆ.
ಇದು ಬೆಂಗಳೂರು ನಗರದ ಪ್ರಮುಖ ಐಟಿ-ಬಿಟಿ ಕಂಪನಿಗಳನ್ನು ಸಂಪರ್ಕಿಸುವ ಮಾರ್ಗವಾಗಿದೆ. ಆದ್ದರಿಂದ ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪ್ರತಿ ದಿನ ಸುಮಾರು 3 ಲಕ್ಷ ಜನರು ಸಂಚಾರ ನಡೆಸಬಹುದು ಎಂದು ಬಿಎಂಆರ್ಸಿಎಲ್ ಅಂದಾಜಿಸಿದೆ. 2031ರ ವೇಳೆಗೆ ಈ ಮಾರ್ಗದಲ್ಲಿ 4.55 ಲಕ್ಷ ಮತ್ತು 2041ರ ವೇಳೆಗೆ 5.02 ಲಕ್ಷ ಜನರು ಪ್ರಯಾಣಿಸಲಿದ್ದಾರೆ ಎಂದು ಯೋಜನಾ ವರದಿ ಅಂದಾಜಿಸಿದೆ.
2023ರಲ್ಲಿ ನಮ್ಮ ಮೆಟ್ರೋ ಸಂಪರ್ಕ ಜಾಲಕ್ಕೆ 30.09 ಕಿ. ಮೀ. ಸೇರ್ಪಡೆಗೊಳಿಸಿ, ನಗರದ ಸಂಚಾರ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡುವ ಗುರಿಯನ್ನು ಬಿಎಂಆರ್ಸಿಎಲ್ ಇಟ್ಟುಕೊಂಡಿದೆ. ಆದ್ದರಿಂದ ಹಸಿರು ಮತ್ತು ನೇರಳೆ ಮಾರ್ಗದ ಜೊತೆಗೆ ಹಳದಿ ಮಾರ್ಗದಲ್ಲಿಯೂ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications