ಜಯದೇವ ಬಳಿ ಮೆಟ್ರೋ ಕಾಮಗಾರಿ ಆರಂಭ: ಹೆಚ್ಚಿದ ಸಂಚಾರ ದಟ್ಟಣೆ
ಬೆಂಗಳೂರು, ಡಿಸೆಂಬರ್ 20: ಜಯದೇವ ಆಸ್ಪತ್ರೆ ಬಳಿ ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಿದ್ದು, ಮೊದಲ ದಿನವೇ ಸಂಚಾರ ದಟ್ಟಣೆ ವಿಪರೀತವಾಗಿತ್ತು.
ಗೊಟ್ಟಿಗೆರೆ-ನಾಗವಾರ ಮಾರ್ಗದ ಕಾಮಗಾರಿಗಾಗಿ ಜಯದೇವ ಆಸ್ಪತ್ರೆ ಬಳಿ ಸಂಚಾರ ಮಾರ್ಗ ಬದಲಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಜಯದೇವ ಆಸ್ಪತ್ರೆ ಬಳಿಯ ಅಂಡರ್ ಪಾಸ್ ಮೇಲಿನ ಒಂದು ಬದಿಯ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿಲ್ಲ, ಇಲ್ಲಿ ಬ್ಯಾರಿಕೇಡ್ ಅಳವಡಿಸಿ ಪಿಲ್ಲರ್ ನಿರ್ಮಿಸುವ ಕೆಲಸ ಆರಂಭಿಸಲಾಗುತ್ತಿದೆ.

ವಾಹನ ಸಂಚರಿಸಬೇಕಾದ ಮಾರ್ಗ
ಈ ಮೂಲಕ ಜಯದೇವ ಫ್ಲೈಓವರ್ ಕೆಡವಲು ಕಾಲ ಸನ್ನಿಹಿತವಾಗಿದೆ. ಜಯದೇವ ಜಂಕ್ಷ್ ಬಳಿಯ ಬಲ ತುದಿಯಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಮೆಟ್ರೋ ಎತ್ತರಿಸಿದ ಮಾರ್ಗಕ್ಕೆ ಅಗತ್ಯವಿರುವ ವಯಾಡಕ್ಟ್ಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೈರಿ ವೃತ್ತದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಮ ಬನಶಂಕರಿಗೆ ಹೋಗುವ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಡೈರಿ ವೃತ್ತದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಗುರಪ್ಪನಪಾಳ್ಯ ಜಂಕ್ಷನ್ ಬಳಿ ಬಲ ತಿರುವು ಪಡೆದು 39ನೇ ಕ್ರಾಸ್ನಲ್ಲಿ ಹಾದು, ನಂತರ ಎಡಕ್ಕೆ ತಿರುಗಿ ಈಸ್ಟ್ ಎಂಡ್ ಮುಖ್ಯರಸ್ತೆ ಮೂಲಕ ಹೋಗಬೇಕಾಗುತ್ತದೆ.

ಎಲ್ಲೆಲ್ಲಿ ಸಂಚಾರ ದಟ್ಟಣೆ
ಹೊಸೂರು ರಸ್ತೆ ಕಡೆ ಕಡೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ಇಲ್ಲದಿರುವವರು ಈ ರಸ್ತೆಗೆ ಬಂದು ತೊಂದರೆ ಅನುಭವಿಸಿದ್ದರು. ಕಚೇರಿ, ಶಾಲೆ, ಹಾಗೂ ಇನ್ನಿತರೆ ಕೆಲಸದ ನಿಮಿತ್ತ ಧಾವಂತದಲ್ಲಿರುವವರು ಸುತ್ತಿ ಬಳಸಿ ಹೋಗಬೇಕಾಗಿದ್ದರಿಂದ ತಡವಾಯಿತು.

ಬ್ಯಾರಿಕೇಡ್ ಅಳವಡಿಸಿ ಸಿದ್ಧತೆ
ಸಧ್ಯಕ್ಕೆ ಬಿಎಂಆರ್ಸಿಎಲ್ ಸರ್ವೀಸ್ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ, ಇದಾದ ಬಳಿಕ ಪಿಲ್ಲರ್ ನಿರ್ಮಿಸಲು ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ.

ಸುತ್ತಲಿರುವ ಅಂಗಡಿಗಳು, ಹೋಟೆಲ್ಗಳಿಗೆ ಸಂಕಷ್ಟ
ಸುತ್ತಮುತ್ತಲಿರುವ ಅಂಗಡಿ ಹಾಗೂ ಹೋಟೆಲ್ಗಳಿಗೆ ಸಂಕಷ್ಟ ಎದುರಾಗಿದೆ. ಈ ಹಿಂದೆ ಜಯದೇವ ಫ್ಲೈಓವರ್ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ಸ್ಥಳದ ಬಾಡಿಗೆ ನೀಡಬೇಕು, ಕೆಲಸಗಾರರಿಗೆ ವೇತನ ನೀಡಬೇಕು, ಇದೀಗ ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಅಂಗಡಿ ಮಾಲೀಕರು ಒನ್ ಇಂಡಿಯಾ ಬಳಿ ಅಳಲು ತೋಡಿಕೊಂಡರು.












Click it and Unblock the Notifications