Namma Metro: ಜಿಲ್ಲೆಗಳು ಆಯ್ತು ಈಗ ತಾಲೂಕುಗಳಿಗೂ 'ಮೆಟ್ರೋ ಜಾಲ' ವಿಸ್ತರಣೆ: ಡಿಕೆಶಿ ಮಾಹಿತಿ
ಬೆಂಗಳೂರು, ನವೆಂಬರ್ 09: ಐಟಿ ಕೇಂದ್ರವಾಗಿರುವ ಉದ್ಯಾನ ನಗರಿ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ (Namma Metro) ಹಾಲಿ ಒಟ್ಟು 73 ಕಿಲೋ ಮೀಟರ್ ಜಾಲ ಹೊಂದಿದೆ. ಇತ್ತೀಚೆಗಷ್ಟೇ ಐಟಿ ಕಾರಿಡಾರ್ಗೆ ಯಶಸ್ವಿ ಸಂಪರ್ಕ ಕಲ್ಪಿಸಿದೆ. ಈ ಮಧ್ಯೆ ರಾಜ್ಯ ಸರ್ಕಾರ ಭವಿಷ್ಯದಲ್ಲಿ ಸ್ಯಾಟ್ಲೈಟ್ ಟೌನ್ಗಳಾಗುವ ತಾಲೂಕುಗಳಿಗೂ ಮೆಟ್ರೋ ಜಾಲ ವಿಸ್ತರಿಸಲಿದೆ.
ಈ ಬಗೆಗಿನ ಮಾಹಿತಿಯೊಂದನ್ನು ಗುರುವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ್ದಾರೆ. ರಾಮನಗರ ಜಿಲ್ಲೆ ಸೇರಿದಂತೆ ಅದರ ಸುತ್ತಮುತ್ತಲಿನ ತಾಲೂಕುಗಳಿಗೆ ನಮ್ಮ ಮೆಟ್ರೋ ವಿಸ್ತರಣೆಗೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡಿದ ಬಳಿಕ ರಾಮನಗರ ಜಿಲ್ಲೆ ಸೇರಿದಂತೆ ಅದರ ಸುತ್ತಲಿನ ಕನಕಪುರ, ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳನ್ನು ಸ್ಯಾಟ್ಲೈಟ್ ಟೌನ್ಗಳನ್ನಾಗಿ ಮಾಡುವ ಯೋಜನೆ ನಮ್ಮ ಸರ್ಕಾರಕ್ಕೆ ಇದೆ. ಈ ಎಲ್ಲ ಭಾಗಗಳಿಗೂ ಮೆಟ್ರೋ ಜಾಲ ವಿಸ್ತರಣೆಗೆ ಸರ್ಕಾರ ಸಮೀಕ್ಷೆ ನಡೆಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಮೆಟ್ರೋ ಜಾಲ ವಿಸ್ತರಣೆಗೆ ₹31,328 ಕೋಟಿ ಅನುದಾನ
ಇದೇ ಕಾಂಗ್ರೆಸ್ ಪ್ರಸಕ್ತ ಬಜೆಟ್ನಲ್ಲಿ (Karnataka budget 2023-24) ಮೆಟ್ರೋ ಜಾಲ ವಿಸ್ತರಣೆಗೆಂದೆ ಒಟ್ಟು ಸುಮಾರು 31,328 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದೆ. ಅಲ್ಲದೇ ಎರಡು ಪ್ರತ್ಯೇಕ ಮೆಟ್ರೋ ಯೋಜನೆಗಳನ್ನು ಸಹ ಪ್ರಸ್ತಾಪ ಮಾಡಿದೆ.
ಮೆಟ್ರೋ ನೇರಳೆ ಮಾರ್ಗದ ಪೂರ್ಣ ಕಾರ್ಯಾಚರಣೆ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಒಟ್ಟು 73 ಕಿಲೋ ಮೀಟರ್ ಜಾಲ ಹೊಂದಿದೆ. ಇದನ್ನು 176 ಕಿಲೋ ಮೀಟರ್ಗೆ ವಿಸ್ತರಣೆಯ ಗುರಿ ಸರ್ಕಾರ ಹೊಂದಿದೆ.
ಇತ್ತೀಚೆಗೆ ನೇರಳೆ ಮಾರ್ಗವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರು ಆದಷ್ಟು ಶೀಘ್ರವೇ ಮೈಸೂರಿನಲ್ಲೂ ಮೆಟ್ರೋ ರೈಲು ಓಡಲಿವೆ. ಮೆಟ್ರೋ ಜಾಲ ವಿಸ್ತರಣೆಗೆ ಅಗತ್ಯ ಸಹಕಾರ ಕೇಂದ್ರ ಸರ್ಕಾರ ನೀಡಲಿದೆ ಎಂದಿದ್ದರು. ಈ ಮೂಲಕ ಅವರು ಬೆಂಗಳೂರಿನಿಂದ ಮೈಸೂರುವರೆಗೆ ಮೆಟ್ರೊ ಮಾರ್ಗ ವಿಸ್ತರಣೆ ಸುಳಿವು ನೀಡಿದ್ದರು.
ವಿವಿಧ ಯೋಜನೆಗಳು ಪ್ರಸ್ತಾವನೆ ಕೇಂದ್ರದ ಮುಂದೆ
ಪ್ರಧಾನಿ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆ ಸೇರಿದಂತೆ ಮೂರು ತಾಲೂಕುಗಳಿಗೆ ಮೆಟ್ರೋ ಜಾಲ ವಿಸ್ತರಿಸುವ ಕುರಿತು ಮಾಹಿತಿ ನೀಡಿದ್ದಾರೆ. ಆ ಭಾಗದ ನಿವಾಸಿಗಳು ತಮ್ಮ ನಾಯಕನ ಈ ಮಾತು ಆದಷ್ಟು ಶೀಘ್ರವೇ ಈಡೇರಿಸಲಿ ಎಂದು ಪ್ರಾರ್ಥಿಸಿದ್ದಾರೆ.

ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅಡಿಯಲ್ಲಿ ಒಟ್ಟು ಸುಮಾರು 16,328 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಪಾಪುರದಿಂದ ಜೆಪಿ ನಗರ 4ನೆ ಹಂತದವರೆಗಿನ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆ ಪಶ್ಚಿಮ ಒಆರ್ಆರ್ ಮಾರ್ಗ ಒಳಗೊಂಡ ಸುಮಾರು 45 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗದ ವಿಸ್ತೃತ ವರದಿಯನ್ನು ಕರ್ನಾಟಕ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಅಲ್ಲದೇ ಹೆಬ್ಬಾಳದಿಂದ ಸರ್ಜಾಪುರದವರೆಗೆ 37ಕಿಮೀ ಉದ್ದದ ಹೊಸ ಮೆಟ್ರೊ ಮಾರ್ಗ ನಿರ್ಮಾಣಕ್ಕೆ 15,000 ಕೋಟಿ ರೂ.ಗಳ ಅಂದಾಜಿನಲ್ಲಿ ಹೊಸ ಯೋಜನೆ ಪ್ರಸ್ತಾಪಿಸಿದ್ದು, ಇದನ್ನು ಅನುಮೋದನೆ ಕಳುಹಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.
ಭರದಿಂದ ಸಾಗಿರುವ ಮೆಟ್ರೋ ಕಾಮಗಾರಿ
ಸದ್ಯ ಬೊಮ್ಮಸಂದ್ರದಿಂದ ಆರ್ ವಿರಸ್ತೆ (Metro Yellow line) ಮಾರ್ಗ, ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರ ಮಾರ್ಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ (Metro Blue line) ಮಾರ್ಗದ ಕಾಮಗಾರಿಗಳು ಭರದಿಂದ ಸಾಗಿವೆ. ನಾಗರವಾರದಿಂದ ಕಾಳೇನ ಅಗ್ರಹಾರವರೆಗಿನ (Metro Pink line) ನಲ್ಲಿ ಸುರಂಗ ಕೊರೆಯುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ.
ಈ ಹಿಂದೆ ಇದೇ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದಿಂದ ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್, ತುಮಕೂರು ಸೇರಿದಂತೆ ಇನ್ನಿತರ ಭಾಗಗಳಿಗೆ ಮೆಟ್ರೋ ಜಾಲ ವಿಸ್ತರಣೆಗೆ ಚಿಂತನೆ ಇದೆ ಎಂದು ತಿಳಿಸಿತ್ತು.












Click it and Unblock the Notifications