ನಮ್ಮ ಮೆಟ್ರೋ ಪಿಲ್ಲರ್ ದುರಂತ: 10 ಕೋಟಿ ಪರಿಹಾರ ಕೋರಿದ ಪತಿ
ಬೆಂಗಳೂರು, ಜುಲೈ 26; ಬೆಂಗಳೂರು ನಗರದ ನಾಗವಾರದ ಬಳಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ನ ಕಬ್ಬಿಣದ ಸರಳುಗಳು ಉರುಳಿಬಿದ್ದು ಸಾಫ್ಟ್ವೇರ್ ಇಂಜಿನಿಯರ್ ತೇಜ್ವನಿಸಿ ಮತ್ತು ಆಕೆಯ ಪುತ್ರ ವಿಹಾನ್ ಸಾವನ್ನಪ್ಪಿದ ಘಟನೆಗೆ ಸಂಬಂಧ 10 ಕೋಟಿ ರೂ. ಪರಿಹಾರ ಕೋರಿ ಮೃತ ಮಹಿಳೆಯ ಪತಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮೃತ ಮಹಿಳೆಯ ಪತಿ ಲೋಹಿತ್ ಕುಮಾರ್ ವಿ. ಸುಲಾಖೆ ಸಲ್ಲಿಸಿದ್ದ ತಕರಾರು ಅರ್ಜಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಮೆಟ್ರೋ ಕಾಮಗಾರಿ ಗುತ್ತಿಗೆದಾರ ಕಂಪನಿಯಾದ ಮೆರ್ಸಸ್ ನಾಗಾರ್ಜುನ ಕನ್ಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅರ್ಜಿಯಲ್ಲಿನ 8 ಮಂದಿ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿತು.

ಅರ್ಜಿದಾರರ ಪರ ವಕೀಲರು, ಬಿಎಂಆರ್ಸಿಎಲ್ ಕೇವಲ 20 ಲಕ್ಷ ರೂ. ಪರಿಹಾರ ನೀಡಿದೆ. ಮೃತ ತಾಯಿ ಮಗುವಿಗೆ ಸರಿಯಾದ ಪರಿಹಾರ ನೀಡಿಲ್ಲ. ಅವರು ಬದುಕಿದ್ದರೆ ಕೋಟ್ಯಾಂತರ ರೂ. ಗಳಿಸುತ್ತಿದ್ದರು. ಹಾಗಾಗಿ ಕನಿಷ್ಠ 10 ಕೋಟಿ ರೂ.ಗಳಾದರೂ ಪರಿಹಾರ ಕೊಡಿಸಬೇಕು ಎಂದು ನ್ಯಾಯಲಯವನ್ನು ಕೋರಿದರು.
ಪ್ರಕರಣದ ವಿವರ: ಅಲ್ಲದೇ, ಬಿಎಂಆರ್ಸಿಎಲ್ ನೀಡಿರುವ ಪರಿಹಾರ ಮೊತ್ತ ಸೂಕ್ತ ಪ್ರಮಾಣದಲ್ಲಿ ಇಲ್ಲ. ಕೇವಲ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ, ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಮೆಟ್ರೋ ನಿಗಮ ನೀಡಿರುವ ಪರಿಹಾರವನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ 10 ಕೋಟಿ ರೂ. ಪರಿಹಾರ ನೀಡಬೇಕು. ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ಬಿಎಂಆರ್ಸಿಎಲ್ಗೆ ನಿರ್ದೇಶನ ನೀಡಬೇಕು ಎಂದು ಲೋಹಿತ್ ಕುಮಾರ್ ನ್ಯಾಯಾಲಯವನ್ನು ಕೋರಿದ್ದಾರೆ.
ದಾವಣೆಗೆರೆ ಮೂಲದ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. 2023ರ ಜ.1ರಂದು ಬೆಳಗ್ಗೆ 10 ಗಂಟೆಗೆ ಹೊರಮಾವುನಲ್ಲಿರುವ ತಮ್ಮ ಮನೆಯಿಂದ ಕಚೇರಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ಅರ್ಜಿದಾರ ಲೋಹಿತ್ ಕುಮಾರ್ ದ್ವಿಚಕ್ರ ವಾಹನದಲ್ಲಿ ತೆರೆಳುತ್ತಿದ್ದರು. ನಾಗವಾರದ ಎಚ್ಬಿಆರ್ ಬಡಾವಣೆಯ ವರ್ತುಲ ರಸ್ತೆಯ ಆಕ್ಸಿಕ್ ಬ್ಯಾಂಕ್ ಮುಂದೆ ಪ್ರಯಾಣಿಸುತ್ತಿದ್ದಾಗ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ನ ಕಬ್ಬಿಣದ ಸರಳುಗಳು ಅರ್ಜಿದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು.
ಘಟನೆಯಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಾಗಿದ್ದ ಪತ್ನಿ ತೇಜಸ್ವಿನಿ ಮತ್ತು ಮಗ ವಿಹಾನ್ನನ್ನು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬ್ರೈನ್ ಹ್ಯಾಮರೇಜ್ ಕಾರಣದಿಂದ ಅವರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಅರ್ಜಿದಾರರು ಮತ್ತು ಪುತ್ರಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ನಂತರ ಅಂದರೆ 2023ರ ಜ.24ರಂದು ಬಿಎಂಆರ್ಸಿಎಲ್ ಕಾರ್ಯಚರಣೆ ವಿಭಾಗದ ಎಂಜಿನಿಯರ್ ಅರ್ಜಿದಾರರಿಗೆ ಪತ್ರವನ್ನು ನೀಡಿ, ಪತ್ನಿ ಮತ್ತು ಪುತ್ರ ಸಾವಿಗೆ ನಷ್ಟ ಪರಿಹಾರವಾಗಿ 20 ಲಕ್ಷ ರೂ. ನೀಡುವುದಾಗಿ ಹೇಳಿದ್ದರು. ಆದರೆ, ಪತ್ನಿ ತೇಜಸ್ವಿನಿ ಅವರು ಕೊಡಿಯಾ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದರು.
ಮಾಸಿಕ 75,748 ರು. ವೇತನ ಹಾಗೂ ವಾರ್ಷಿಕ 9,089,76 ರೂ. ಆದಾಯ ಗಳಿಸುತ್ತಿದ್ದರು. ಪತ್ನಿಗೆ ಕೇವಲ 28 ವರ್ಷವಾಗಿದ್ದು, ಆಕೆ ಜೀವಂತವಾಗಿದ್ದರೆ 60 ವರ್ಷಕ್ಕೆ ನಿವೃತ್ತಿ ಪಡೆಯುವ ವೇಳೆಗೆ ಪ್ರತಿ ವರ್ಷವೂ ಶೇ.20ರಷ್ಟು ವೇತನ ಹೆಚ್ಚಳದೊಂದಿಗೆ ಒಟ್ಟು 4,99,20,000 ರೂ. ಆದಾಯ ಸಂಪಾದಿಸುತ್ತಿದ್ದರು. ಇನ್ನೂ ಮೃತ ಪುತ್ರನಿಗೆ ಕೇವಲ 2 ವರ್ಷ 6 ತಿಂಗಳಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.












Click it and Unblock the Notifications