ನವೆಂಬರ್ಗೆ ಗಡುವು ಮೀರಲಿದೆ ಮೆಟ್ರೋ ಮೊದಲ ಹಂತ
ಬೆಂಗಳೂರು, ಸೆಪ್ಟೆಂಬರ್ 02 : 'ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಅವಕಾಶಗಳ ತವರೂರು. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ನಮ್ಮ ಮೆಟ್ರೋದ ಮೊದಲ ಹಂತದ ಎಲ್ಲಾ ಕಾಮಗಾರಿಗಳೂ ಇದೇ ವರ್ಷದ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿವೆ'.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 70ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನಡೆಸಿ ರಾಜ್ಯವನ್ನು ಉದ್ದೇಶಿಸಿ ಮಾಡಿದ ಭಾಷಣದ ಹೇಳಿಕೆ ಇದು. ಆದರೆ, ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ 2016ರ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳುವುದು ಅನುಮಾನ.[ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು]
ಚಿಕ್ಕಪೇಟೆಯಿಂದ-ಮೆಜೆಸ್ಟಿಕ್ಗೆ ಸುರಂಗ ಕೊರೆಯುತ್ತಿರುವ 'ಕೃಷ್ಣ' ಟಿಬಿಎಂ ಇನ್ನೂ ತನ್ನ ಕೆಲಸ ಪೂರ್ಣಗೊಳಿಸಿಲ್ಲ. ಆಗಸ್ಟ್ ಅಂತ್ಯ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಕೃಷ್ಣ ಕೆಲಸ ಮುಗಿಸುವ ನಿರೀಕ್ಷೆ ಇತ್ತು. ದಿನಕ್ಕೆ 2 ಮೀಟರ್ ಸುರಂಗ ಕೊರೆಯುತ್ತಿದ್ದ ಕೃಷ್ಣ ಈಗ ಒಂದು ಮೀಟರ್ಗೆ ಇಳಿದಿದೆ. ಕೃಷ್ಣ ಮೆಜೆಸ್ಟಿಕ್ಗೆ ಬರಲು ಕನಿಷ್ಠ 1 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.[ಶೀಘ್ರದಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ]
ಸುರಂಗ ಕೊರೆದು ಮುಗಿದ ಬಳಿಕ ಹಳಿ ಜೋಡಣೆ, ಪ್ರಾಯೋಗಿಕ ಸಂಚಾರ ಎಲ್ಲವೂ ಪೂರ್ಣಗೊಂಡು ಜನರ ಸಂಚಾರಕ್ಕೆ ಮಾರ್ಗ ಮುಕ್ತವಾಗಲು ಇನ್ನೂ ಮೂರು ತಿಂಗಳು ಬೇಕಾಗಲಿದೆ ಎಂಬುದು ಸದ್ಯದ ನಿರೀಕ್ಷೆ. ಆದ್ದರಿಂದ, 2017ರ ಜನವರಿ ವೇಳೆಗೆ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.[ಮಹಿಳೆಯರು, ಹಿರಿಯ ನಾಗರಿಕರ ನೆರವಿಗೆ ನಿಂತ ನಮ್ಮ ಮೆಟ್ರೋ]
ಈ ಮಾರ್ಗ ಮುಖ್ಯ : ಪುಟ್ಟೇನಹಳ್ಳಿ- ನ್ಯಾಷನಲ್ ಕಾಲೇಜು ನಡುವಿನ ಮಾರ್ಗ ಮೆಜೆಸ್ಟಿಕ್ಗೆ ಸಂಪರ್ಕಿಸಲು ಈ ಮಾರ್ಗ ಮುಕ್ತಾಯಗೊಳ್ಳುವುದು ಅನಿವಾರ್ಯ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಲು ಪೀಣ್ಯದಿಂದ ಮೆಟ್ರೋ ಬೋಗಿ ತರಬೇಕು.
ಆದರೆ, ಸಂಪಿಗೆ ರಸ್ತೆಯಿಂದ ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ ಯಿಂದ ನ್ಯಾಷನಲ್ ಕಾಲೇಜಿನವರೆಗಿನ ಹಳಿ ನಿರ್ಮಾಣವಾಗದೆ ಬೋಗಿಗಳನ್ನು ತೆಗೆದುಕೊಂಡು ಬರುವುದು ಸಾಧ್ಯವಿಲ್ಲ.