ನಲಪಾಡ್ ಪ್ರಕರಣ: ಕೋರ್ಟ್ನಲ್ಲಿ ಏನೇನು ನಡೆಯಿತು
ಬೆಂಗಳೂರು, ಫೆಬ್ರವರಿ 26 : ವಿದ್ವತ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ನಲಪಾಡ್ (ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಮಗ)ನ ಜಾಮೀನು ಅರ್ಜಿ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ನಾಳೆ ಮಂಗಳವಾರಕ್ಕೆ (ಫೆ.27) ಮುಂದೂಡಿತು.
ನ್ಯಾಯಾಲಯದಲ್ಲಿ ಸುಮಾರು 2 ಗಂಟೆ ನಡೆದ ವಾದ ವಿವಾದ ರೋಚಕವಾಗಿದ್ದವು. ವಿದ್ವತ್ ಪರ ವಿಶೇಷ ಸಾರ್ವಜನಿಕ ಅಭಿಯೋಜಕ (Special public prosecutor) ಶ್ಯಾಮ್ ಸುಂದರ್ ಅತ್ಯುತ್ತಮ ವಾದ ಮಂಡಿಸಿದರು. ನಲಪಾಡ್, ವಿದ್ವತ್ ನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ಮಾಡಿದ್ದ, ಹಾಗಾಗಿ ಆತನಿಗೆ ಜಾಮೀನು ನೀಡಬಾರದೆಂದು ಅವರು ಪ್ರಬಲವಾದ ವಾದ ಮಂಡಿಸಿದರು.
ಮೊಹಮ್ಮದ್ ನಲಪಾಡ್ಗೆ ಇಂದು ಜಾಮೀನು ಭಾಗ್ಯವಿಲ್ಲ!
ನಲಪಾಡ್ ಪರ ವಕೀಲ ಟ್ಯಾಮಿ ಸೆಬಾಸ್ಟಿಯನ್ ಕೂಡ ಜಾಮೀನು ದೊರಕಿಸಲೇ ಬೇಕೆಂದು ಪ್ರತಿ ವಾದ ಮಂಡಿಸಿದರು. 'ವಿದ್ವತ್ ಗೆ ಆರೋಗ್ಯ ಚೇತರಿಕೆ ಕಂಡಿದೆ, ಆತನನ್ನು ಮಲ್ಯ ಆಸ್ಪತ್ರೆಯ ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ, ಹಾಗಾಗಿ ಆತನ ಮೇಲೆ ನಡೆದಿರುವುದು ಗಂಭೀರ ಹಲ್ಲೆ ಅಲ್ಲ' ಎಂಬುದು ಅವರ ವಾದ.
ಹಲ್ಲೆಗೆಂದೇ ತಯಾರಿಸಿದ ಬೆರಳಾಯುಧ
ನಲಪಾಡ್ ಪರ ವಕೀಲರು 'ಕೊಲ್ಲುವ ಉದ್ದೇಶದಿಂದ ಮಾಡಿದ ಹಲ್ಲೆ ಅಲ್ಲ ಹಾಗಿದ್ದಿದ್ದರೆ ಅವರು ಆಯುಧಗಳನ್ನು ಬಳಸುತ್ತಿದ್ದರು ಎಂದು ವಾದ ಮಂಡಿಸಿದರು ಇದನ್ನು ವಿರೋಧಿಸಿದ ಶ್ಯಾಮ್ಸುಂದರ್ ನಲಪಾಡ್ ಮತ್ತು ಸದಸ್ಯರು ನಕ್ಕಲ್ ರಿಂಗ್ ಎಂಬ ಬೆರಳುಗಳಿಗೆ ತೊಡುವ ಆಯುಧ ಬಳಸಿ ಹೊಡೆದಿದ್ದಾರೆ, ಅಷ್ಟೆ ಅಲ್ಲದೆ ಆತನ ಮೇಲೆ ಐಸ್ ಬಕೆಟ್ನಿಂದಲೂ ಹಲ್ಲೆ ಆಗಿದೆ' ಎಂದು ವಾದ ಮಂಡಿಸಿದರು.
ವಿದ್ವತ್ ಹೇಳಿಕೆ ಪಡೆಯದೇ ಪೊಲೀಸರು ವಾಪಸ್
ಶ್ಯಾಮ್ಸುಂದರ್ ಅವರನ್ನು ನೇಮಿಸಿದ್ದಾರೆ
ಶ್ಯಾಮ್ ಸುಂದರ್ ಅವರು ಆರೋಪಿಯ ತಂದೆ ಪ್ರಭಾವಿ ಆಗಿದ್ದು, ಸಾಕ್ಷಿ ತಿರುಚುವ ಸಾಧ್ಯತೆ ಇದೆ ಹಾಗಾಗಿ ಜಾಮೀನು ನಿರಾಕರಿಸಬೇಕು ಎಂದಿದ್ದರು. ಇದಕ್ಕೆ ಸೆಬಾಸ್ಟಿಯನ್ ಅವರು 'ವಿದ್ವತ್ ತಂದೆ ಲೋಕನಾಥ್ ಕೂಡಾ ಪ್ರಭಾವಿಯೇ, ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ಶ್ಯಾಮ್ ಸುಂದರನ್ ಅವರನ್ನೇ ನೇಮಿಸಿಬಿಟ್ಟಿದ್ದಾರೆ' ಎಂದರು. ಇದಕ್ಕೆ ಪ್ರತಿವಾದಿಸಿದ ಶ್ಯಾಮ್ಸುಂದರ್ 'ಲೋಕನಾಥ್ ಪ್ರಭಾವಿ ಆಗಿದ್ದರೆ ನನ್ನ ವಿರುದ್ಧ ಏಕೆ ನಲಪಾಡ್ ಚೇಲಾಗಳು ಕತ್ತಿ ಮಸೆಯುತಿದ್ದರು' ಎಂದರು.
ಬಾಟಲಿಯಿಂದ ಹಲ್ಲೆಗೆ ಸಾಕ್ಷಿ ಇಲ್ಲ
ಸತ್ಯಾಂಶ ಹೊರ ಬರಬೇಕಾದರೆ ಪೂರ್ಣ ಪ್ರಮಾಣದ ವಿಚಾರಣೆ ಆಗಬೇಕು. ಆದರೆ ಅಭಿಯೋಜಕರು ಇದನ್ನು ಆಕ್ಷೇಪಣೆಯಲ್ಲಿ ಉಲ್ಲೇಖಿಸಿಲ್ಲ. ಯಾವುದೇ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿಲ್ಲ ಹಾಗಿದಿದ್ದರೆ ವೆಪನ್ಸ್ ಇಟ್ಟುಕೊಳುತ್ತಾ ಇದ್ದರು. ಐಸ್ ಕ್ಯೂಬ್ ಗಳನ್ನು ತಲೆಯ ಮೇಲೆ ಬಿಸಾಡಿದ್ದಾರೆ. ಇದರಿಂದ ವಿದ್ವತ್ ಗಾಯಗೊಂಡಿದ್ದಾನೆ. ಬಿಯರ್ ಬಾಟಲ್ ಗಳಿಂದ ವಿದ್ವತ್ ಮೇಲೆ ಹಲ್ಲೆ ನಡೆಸಿರೋದಕ್ಕೆ ಸಾಕ್ಷಗಳಿಲ್ಲ. ಅದಲ್ಲದೇ ಪೊಲೀಸರನ್ನು ಅಮಾನತು ಮಾಡಿದ್ದಾರೆ. ಅಮಾನತ್ತಿಗೆ ಸರಿಯಾದ ಉತ್ತರ ನೀಡಿಲ್ಲ. ಇದು ರಾಜಕೀಯ ಪ್ರೇರಿತ 307. ಎಲೆಕ್ಷನ್ ಟೈಮ್ ಆಗಿರುವ ಕಾರಣ ಮಾಧ್ಯಮಗಳು ಸುದ್ದಿಯನ್ನು ಹೈಪ್ ಮಾಡ್ತಿವೆ ಎಂದು ಸೆಬಾಸ್ಟಿಯನ್ ವಾದಿಸಿದರು.
ಆಸ್ಪತ್ರೆಗೆ ಹೋಗಿದ್ದೇಕೆ?
ನಲಪಾಡ್ನಿಗೆ ವಿದ್ವತ್ನನ್ನು ಕೊಲ್ಲುವ ಉದ್ದೇಶ ಇತ್ತು ಎಂದು ಪದೇ ಪದೇ ವಾದಿಸಿದ ಶ್ಯಾಮ್ಸುಂದರ್, ಹಲ್ಲೆ ನಡೆದ ನಂತರ ಪುನಃ ಆಸ್ಪತ್ರೆಗೆ ತೆರಳಿ ಅಲ್ಲಿಯೂ ದಾಂದಲೆ ನಡೆಸಲು ಮುಂದಾಗಿದ್ದಾನೆ ಇದರ ಅರ್ಥ ಆತನಿಗೆ ವಿದ್ವತ್ನನ್ನು ಕೊಲ್ಲುವ ಉದ್ದೇಶ ಇತ್ತು. ಆಸ್ಪತ್ರೆಗೆ ಹಿಂಬಾಲಿಸಿ ನಲಪಾಡ್ ತನ್ನ ಉದ್ದೇಶದ ತೋರ್ಪಡಿಕೆ ಮಾಡಿದ್ದಾನೆ ಎಂದು ಶ್ಯಾಮ್ಸುಂದರ್ ವಾದಿಸಿದರು.
ವಿದ್ವತ್ನ ಹೇಳಿಕೆ ಪಡೆದಿಲ್ಲ
ಹಲ್ಲೆ ಪ್ರಕರಣದ ಒಬ್ಬ ಆರೋಪಿ ಶ್ರೀಕೃಷ್ಣ ಇನ್ನೂ ಪೊಲೀಸರ ಕೈಗೆ ಸಿಕ್ಕಲ್ಲ, ಅದಲ್ಲದೆ ವಿದ್ವತ್ ನ ಹೇಳಿಕೆ ಕೂಡಾ ಪಡೆದಿಲ್ಲ, ವಿದ್ವತ್ಗೆ ಹೊಡೆದು ಎಂಟು ದಿನ ಆಗಿಲ್ಲ ಆತ ಇನ್ನೂ ನೋವಿನಲ್ಲಿದ್ದಾನೆ, ನಲಪಾಡ್ನನ್ನು ಇಷ್ಟು ಬೇಗ ಜೈಲಿನಿಂದ ಹೊರತಂದರೆ ಹೇಗೆ?, ನಲಪಾಡ್ ಹೊರ ಬಂದರೆ ವಿದ್ವತ್ ಜೀವಕ್ಕೆ ಅಪಾಯ ಇದೆ ಶ್ಯಾಮ್ಸುಂದರ್ ವಾದಿಸಿದರು.
ಮತ್ತಷ್ಟು ವಾದಕ್ಕೆ ಮನವಿ
ನಲಪಾಡ್ ಪರ ವಕೀಲ ಟ್ಯಾಮಿ ಸಬಾಸ್ಟಿಯನ್ ಅವರು ಮತ್ತಷ್ಟು ವಾದಕ್ಕೆ ಅವಕಾಶ ಕೇಳಿದ್ದಕ್ಕೆ ಹಾಗೂ ನ್ಯಾಯಾಲಯ ಸಮಯ ಅಂತ್ಯಗೊಂಡ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು. ಟ್ಯಾಮಿ ಸೆಬಾಸ್ಟಿಯನ್ ಅವರ ವಾದ ಆಲಿಸಿದ ನಂತರ ನಾಳೆ ಜಾಮೀನು ಅರ್ಜಿಯ ತೀರ್ಪು ಬರುವ ಸಾಧ್ಯತೆ ಇದೆ.