Vishnuvardhan memorial: ನಟ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ದಿನ ನಿಗದಿ
ಬೆಂಗಳೂರು, ಜ. 12: ಕನ್ನಡದ ಮೇರು ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಇಷ್ಟು ದಿನಗಳ ಕಾಲ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದ ಈ ಸ್ಮಾರಕ ಲೋಕಾರ್ಪಣೆ ವಿಚಾರ ಕೊನೆಗೂ ಮುಗಿಯುವ ಹಂತಕ್ಕೆ ಬಂದಿದ್ದು, ದಾದಾ ಅಭಿಮಾನಿಗಳ ಖುಷಿ ಇಮ್ಮಡಿಯಾಗಿದೆ.
ಸ್ಮಾರಕ ಉದ್ಘಾಟನೆ ಬಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಜತ್ಕರ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಇದೇ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ವಿಷ್ಣುವರ್ಧನ್ ಸ್ಮಾರಕದ ಉದ್ಘಾಟನಾ ಸಮಾರಂಭ ನಡೆಯಲಿದೆ.
ವಸಿಷ್ಠ ಸಿಂಹ-ಹರಿಪ್ರಿಯಾ ಗಟ್ಟಿಮೇಳಕ್ಕೆ ದಿನಗಣನೆ ಆರಂಭ, ಮಹೂರ್ತ ಫಿಕ್ಸ್
ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು ಎಂದು ಅಭಿಮಾನಿಗಳ ಬೇಡಿಕೆಗಳಿದ್ದವು, ಅವುಗಳ ನಡುವೆಯೇ ಮೈಸೂರಿನಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಉದ್ಘಾಟನೆಯ ಅದ್ದೂರಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ.
ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಸುಮಾರು ಎರಡು ಮುಕ್ಕಾಲು ಎಕರೆ ಜಾಗದಲ್ಲಿ 11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ ಹಲವು ವಿಶಿಷ್ಟತೆಯಿಂದ ಕೂಡಿದೆ.
ಈ ಸ್ಮಾರಕದಲ್ಲಿ ನಟ ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಅಪರೂಪದ ಫೋಟೊ ಗ್ಯಾಲರಿ, ಅವರು ಬಳಸುತ್ತಿದ್ದ ಬಟ್ಟೆ, ವಸ್ತುಗಳುಮ, ಪ್ರಶಸ್ತಿಗಳಿರುವ ಮ್ಯೂಸಿಯಂ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಯಾಂಟೀನ್ ಏರಿಯಾ ಸೇರಿ ಹಲವು ವಿಶೇಷಗಳಿರಲಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದಂತೆ ಡಿಸೆಂಬರ್ ತಿಂಗಳಿನಲ್ಲೇ ಸ್ಮಾರಕ ಉದ್ಘಾಟನೆ ಆಗಬೇಕಿತ್ತು. ಕಾರಣಾಂತರಗಳಿಂದ ಈ ತಿಂಗಳು ಅದ್ದೂರಿಯಾಗಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಯಾಗಲಿದೆ.