ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ ವಿವಾದ; ವಿಧಾನಸಭೆಯಲ್ಲಿ ವಿಪಕ್ಷ ಸದಸ್ಯರಿಂದ ಜೋರು ಚರ್ಚೆ
ಬೆಂಗಳೂರು, ಮಾರ್ಚ್ 23: ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧ ವಿಧಿಸಿರುವ ಬಗ್ಗೆ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ವಿಷಯ ಪ್ರಸ್ತಾಪಿಸಿದ್ದಾರೆ.
"ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು. ಹೆಸರು ಹಾಕದೆ ಕೆಲವರು ಭಿತ್ತಿಪತ್ರಗಳನ್ನು ಅಳವಡಿಸುತ್ತಿದ್ದಾರೆ. ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಭಿತ್ತಿಪತ್ರ ಅಳವಡಿಸುವುದು ಪೊಲೀಸರಿಗೆ ಗೊತ್ತಿಲ್ಲವಾ? ಪೊಲೀಸರು ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯುತ್ತದೆ. ಸಮಾಜದಲ್ಲಿ ವೈಮನಸ್ಸು ಸೃಷ್ಟಿಗೆ ಅವಕಾಶ ನೀಡಬಾರದು. ಭಿತ್ತಿಪತ್ರ ಹಾಕಿದವರ ಉದ್ದೇಶವೇನೆಂದು ಬಯಲಾಗಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು," ಎಂದು ಯು.ಟಿ. ಖಾದರ್ ಆಗ್ರಹಿಸಿದ್ದು, ಖಾದರ್ ಮಾತಿಗೆ ಬಿಜೆಪಿ ಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ.
"ಒಂದು ವರ್ಗದ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿದ್ದಾರೆ. ಇದು ಸಮಾಜಕ್ಕೆ ಆಘಾತಕಾರಿ. ಇತಿಹಾಸ ಗೊತ್ತಿಲ್ಲದವರು ಭಿತ್ತಿಪತ್ರಗಳನ್ನು ಹಾಕುತ್ತಿದ್ದಾರೆ. ಒಂದು ಸಮುದಾಯಕ್ಕೆ ಬಹಿಷ್ಕಾರ ಹಾಕುವುದು ಸರಿಯಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗುವುದಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ನಮಗೆ ಕೊಡಿ," ಎಂದು ವಿಧಾನಸಭೆಯಲ್ಲಿ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.

"ಯಾವುದೇ ಕಾರಣಕ್ಕೂ ವಾತಾವರಣ ಮತ್ತೆ ಕೆಡಿಸಬಾರದು. ಸಾಮರಸ್ಯ ಪರಂಪರೆ ಇತಿಹಾಸ ಇದೆ. ಅದನ್ನು ಕಾಪಾಡದಿದ್ದರೆ ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ. ಒಂದು ವರ್ಗದ ವ್ಯಾಪಾರಿಗಳು ಬರಬಾರದು ಅಂತ ಪೋಸ್ಟರ್ ಹಾಕುವುದು ಸಮಾಜಕ್ಕೆ ಆಘಾತ. ಇದು ಜಾತ್ರೆ, ಉರೂಸ್ ಸಮಯ. ಯಾವ ಸಂಘಟನೆ ಮಾಡುತ್ತಿದೆಯೋ ಅವರಿಗೆ ಇತಿಹಾಸ ಗೊತ್ತಿಲ್ಲ. ಮಾರಿಗುಡಿ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಾಪಿಸಿರುವುದೇ ಮುಸ್ಲಿಂ ಜನಾಂಗ. ಜಾನಪದ ಹಾಡುಗಳಲ್ಲಿ ಮುಸ್ಲಿಮರು ಹೇಗೆ ಜೊತೆಗಿದ್ದರು ಅನ್ನುವ ಇತಿಹಾಸ ಇದೆ. ನಾವು ಹಾಳು ಮಾಡಿದರೆ ದ್ರೋಹವಾಗಲಿದೆ," ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.
ಅಭಿವೃದ್ಧಿ ವಿಚಾರ ಚರ್ಚೆಗೆ ಬಿಜೆಪಿಯ ಬಳಿ ಸರಕೇ ಇಲ್ಲ: ಎಚ್.ಡಿ. ಕುಮಾರಸ್ವಾಮಿ
ದೇವಸ್ಥಾದಲ್ಲಿ ವ್ಯಾಪಾರ ನಿರ್ಬಂಧ ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದು, "ಇದು ಬಿಜೆಪಿ, ಅದರ ಅಂಗಸಂಸ್ಥೆಗಳು ಮಾಡುತ್ತಿರುವ ಕೆಲಸ. ಭಾವನಾತ್ಮಕ ವಿಚಾರ ಸಾರ್ವಜನಿಕವಾಗಿ ಹೊರಗೆ ತಂದು ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ಆರಂಭವಷ್ಟೇ," ಎಂದು ಹರಿಹಾಯ್ದರು.
ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆಗೆ ಬಿಜೆಪಿಯ ಬಳಿ ಸರಕೇ ಇಲ್ಲ. ಉತ್ತರ ಭಾರತದ ಚುನಾವಣಾ ವಿಚಾರವನ್ನು ಕರ್ನಾಟಕದಲ್ಲಿಯೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತದೋ ನನಗಂತೂ ಗೊತ್ತಿಲ್ಲ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದೀಗ ಅದಕ್ಕೆ ಬೆಂಕಿ ಇಡುವ ಕೆಲಸ ಆರಂಭವಾಗಿದೆ. ಕೋಮು ಸಂಘರ್ಷಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ಕರಾವಳಿ ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪರಿಶೀಲನೆ ಮಾಡುತ್ತೇವೆ ಎಂದ ಸಿಎಂ ಬೊಮ್ಮಾಯಿ
ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನ ವ್ಯಾಪ್ತಿಯಲ್ಲಿ ವ್ಯಾಪಾರ ನಿರ್ಬಂಧ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಯು.ಟಿ. ಖಾದರ್ರಿಂದ ಚರ್ಚೆ ನಡೆದಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಖಾದರ್ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದ ಜಾಗಕ್ಕೆ ತೆರಳಿ ಮನವಿ ಮಾಡಿಕೊಂಡಿದ್ದಾರೆ.
ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನಿರ್ಬಂಧವನ್ನು ದುರುದ್ದೇಶದಿಂದ ಮಾಡಿದ್ದರೆ ಸರ್ಕಾರ ಅದನ್ನು ತಡೆಯಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಕಾನೂನು ಏನಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ ಎಂದು ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದಾರೆ.

ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ ಆಗುವುದೇಕೆ?: ಎಂಎಲ್ಸಿ ಸಲೀಂ ಅಹ್ಮದ್
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಎಂಎಲ್ಸಿ ಸಲೀಂ ಅಹ್ಮದ್ ಹೇಳಿದ್ದು, ಎಲ್ಲಿ ಬೇಕಾದರೂ ಹೋಗಿ ವ್ಯಾಪಾರ ಮಾಡಬಹುದು. ಹೀಗೆಂದು ಭಾರತದ ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಕೆಲ ಸಂಘಟನೆಗಳು ಬ್ಯಾನರ್ ಹಾಕಿದ್ದು ದುರ್ದೈವ ಎಂದರು.
ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಸಿಎಂ ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ ಆಗುವುದು ಏಕೆ? ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಪಾಲಿಸಬೇಕು. ಕೆಲವರು ಮನೆಯಲ್ಲಿದ್ದು ಅಸಮಾಧಾನ ಹೊರಹಾಕಿದ್ದಾರೆ. ಷಡ್ಯಂತ್ರ ಮಾಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ ಎಂದು ಎಂಎಲ್ಸಿ ಸಲೀಂ ಅಹ್ಮದ್ ಹೇಳಿದ್ದಾರೆ.












Click it and Unblock the Notifications