ಕೆರೆ ರಕ್ಷಣೆ ಕಾರ್ಯಕ್ಕೆ ಯುನೈಟೆಡ್ ಬೆಂಗಳೂರು ಜತೆಗೆ ರಾಜೀವ್ ಚಂದ್ರಶೇಖರ್
ಬೆಂಗಳೂರು, ಜೂನ್ 17: ಯುನೈಟೆಡ್ ಬೆಂಗಳೂರು ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಬೆಂಗಳೂರಿನ ಮೂರು ಕೆರೆಗಳ ಪರಿಶೀಲನೆ ಕಾರ್ಯಕ್ರಮಕ್ಕೆ ಅದ್ಭುತ ಯಶಸ್ಸು ದೊರೆಯಿತು.
ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಷ್ಟೇ ಅಲ್ಲ, ಕೆರೆಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ಸಲ್ಲಿಸಲಾಯಿತು.
ಇದೇ ವೇಳೆ ನಟ ಗಣೇಶ್ ಅವರ ಪತ್ನಿ ಹಾಗೂ ಬಿಜೆಪಿ ಮುಖಂಡರಾದ ಶಿಲ್ಪಾ ಅವರು ಕೂಡ ಹಾಜರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ನಾಗರಿಕರು ಗುಬ್ಬಲಾಳ, ತಲಘಟ್ಟಪುರ ಹಾಗೂ ಸೋಂಪುರ ಕೆರೆಗಳ ಬಳಿ ಪರಿಶೀಲನೆ ನಡೆಸಿದರು. ನಮ್ಮ ಭವಿಷ್ಯಕ್ಕಾಗಿ ಕೆರೆಗಳನ್ನು ಉಳಿಸಿ ಎಂಬ ಘೋಷಣೆಯನ್ನು ಕೂಗುತ್ತಿದ್ದ ಮಕ್ಕಳು ಗಮನ ಸೆಳೆದರು.

ಬೆಂಗಳೂರಿನಲ್ಲಿ ಕೆರೆಗಳ ಉಳಿವಿಗಾಗಿ ಹಾಗೂ ಸ್ವಚ್ಛತೆಗಾಗಿ ಯುನೈಟೆಡ್ ಬೆಂಗಳೂರು ನಿರಂತರವಾಗಿ ಶ್ರಮಿಸುತ್ತಿದೆ. ಕೆರೆಗಳ ಸುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು, ಮರಗಳನ್ನು ನೆಡುವುದು, ಕೆರೆಗಳನ್ನು ಉಳಿಸಿಕೊಳ್ಳಲು ಹಲವು ಹೋರಾಟ ಸಹ ಸಂಸ್ಥೆ ಮಾಡಿಕೊಂಡು ಬಂದಿದೆ.

ಗುಬ್ಬಲಾಳ ಕೆರೆಯ ಒತ್ತುವರಿ ಮಾಡಿಕೊಂಡಿರುವುದು, ತ್ಯಾಜ್ಯ ಹಾಕುವುದರ ವಿರುದ್ಧ ಶನಿವಾರದಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮುಂಚೂಣಿಯಲ್ಲಿ ನಿಂತು ದೂರು ಸಲ್ಲಿಸಿದರು.
ಈ ಕಾರ್ಯಕ್ರಮದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಬರೆದುಕೊಂಡಿರುವ ರಾಜೀವ್ ಚಂದ್ರಶೇಖರ್, ನನ್ನ ಶಕ್ತಿ ಎಲ್ಲ ಸಂಪೂರ್ಣ ಬಳಸಿ ಯುನೈಟೆಡ್ ಬೆಂಗಳೂರು ಸಂಸ್ಥೆಯ ಕೆರೆಯನ್ನು ಉಳಿಸುವ ಕೆಲಸವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications