ಬಿಡಿಎ 'ಮಾಸ್ಟರ್ ಪ್ಲಾನ್ 2031'ಕ್ಕೆ ಛೀಮಾರಿ ಹಾಕಿದ ರಾಜೀವ್ ಚಂದ್ರಶೇಖರ್
ಬೆಂಗಳೂರು, ನವೆಂಬರ್ 30 : ನಾಲ್ಕೂವರೆ ವರ್ಷಗಳ ನಿರ್ಲಕ್ಷ್ಯ ಮತ್ತು ಶೋಷಣೆಯ ನಂತರ ರಾಜ್ಯ ಸರಕಾರವು ತನ್ನ ನೆಚ್ಚಿನ ಬಿಡಿಎ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ.
ತಮ್ಮ ಆಕ್ರೋಶಕ್ಕೆ ಕಾರಣವಾದ ಅಂಶಗಳ ಬಗ್ಗೆ ಕೂಡ ಗಮನ ಸೆಳೆದಿರುವ ಅವರು, ಬಿಡಿಎ ರಾಜ್ಯ ಸರಕಾರದ ಅಧೀನದಲ್ಲಿರುವ ಒಂದು ಭ್ರಷ್ಟ ಸಂಸ್ಥೆ. ಈ ಹಿಂದೆ ಸ್ಟೀಲ್ ಫ್ಲೈಓವರ್, ಡಿನೋಟಿಫಿಕೇಶನ್ ಹೀಗೆ ಸಾರ್ವಜನಿಕ ಹಣವನ್ನು ಪೋಲು ಮಾಡುವಂತಹ ಭ್ರಷ್ಟ ಕೆಲಸಗಳನ್ನು ಬಿಡಿಎ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

ಸಾಂವಿಧಾನಿಕ ಸಂಸ್ಥೆಯಾದ ಬೆಂಗಳೂರು ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ(ಬಿಎಂಪಿಸಿ) ಈ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಬೇಕಿರುವ ಅಧಿಕೃತ ಸಂಸ್ಥೆ. ಆದರೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುವ ಈ ಸಮಿತಿ ಸಭೆ ಸೇರುವುದೇ ಬಹಳ ವಿರಳ. ಸಾರ್ವಜನಿಕರು ಹಾಗೂ ನನ್ನಂತಹವರು ಕೋರ್ಟ್ ಮೆಟ್ಟಿಲೇರಿದಾಗ ಮಾತ್ರ ವಿಧಿಯಿಲ್ಲದೆ ಸಭೆ ಸೇರಿದೆ ಎಂದು ಹೇಳಿದ್ದಾರೆ.
ಬಿಡಿಎ ತನ್ನನ್ನು ಬಿಎಂಪಿಸಿಯ ಸಚಿವಾಲಯ ಎಂದು ಕರೆದುಕೊಂಡರೂ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಅದಕ್ಕೆ ಯಾವುದೇ ಅಧಿಕಾರವಿಲ್ಲ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಯಾವ ರೀತಿ ರಾಜ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲವೋ, ಅದೇ ರೀತಿ ಬಿಡಿಎ ಸಹ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಅರ್ಹವಲ್ಲ. ಬಿಎಂಪಿಸಿ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಬೇಕು ಎಂದಿದ್ದಾರೆ.
ಭೂ ಪರಿವರ್ತನೆಗೆ ದಾರಿ ಮಾಡಿಕೊಟ್ಟು, ಬಿಲ್ಡ್ ರ್ ಗಳಿಗೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಸಿದ್ಧಪಡಿಸಲಾಗಿರುವ ಕಡತವೇ ಈ ಮಾಸ್ಟರ್ ಪ್ಲಾನ್. ಇದರ ಹೊರತಾಗಿಯೂ ಮಾಸ್ಟರ್ ಪ್ಲಾನ್ ನಲ್ಲಿ ಹಲವಾರು ಒಳ್ಳೆಯ ಅಂಶಗಳಿವೆ. ಅವುಗಳಲ್ಲಿ ಬಹುತೇಕವನ್ನು ಹಿಂದಿನ ವರದಿಗಳಾದ ಅಬೈಡ್ ನ ಪ್ಲಾನ್ ಬೆಂಗಳೂರು 2020 ವರದಿಯಿಂದ ಆಯ್ದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ನಿಜವಾದ ಕಳಕಳಿಯೇನಂದರೆ, ಇಷ್ಟು ವರ್ಷಗಳವರೆಗೆ ಅದನ್ನು ಜಾರಿಗೊಳಿಸದೆ ಸುಮ್ಮನಿದ್ದ ಸರಕಾರ ಚುನಾವಣೆಯ ಹೊಸ್ತಿಲಲ್ಲಿರುವ ಈಗ ದೊಡ್ಡ ಮಟ್ಟದ ಭೂ ಪರಿವರ್ತನೆಗೆ ಅನುಕೂಲ ಮಾಡಿಕೊಡಲು ಈ ಮಾಸ್ಟರ್ ಪ್ಲಾನ್ ಅನ್ನು ಮುಂದಿಡುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಗೃಹ ಖರೀದಿದಾರರಿಗೆ ರಕ್ಷಣೆ ಒದಗಿಸಬೇಕಿದ್ದ ರೇರಾ ಕಾಯ್ದೆಯ ನಿಯಮಗಳನ್ನು ದುರ್ಬಲಗೊಳಿಸಿರುವ ಸರಕಾರದ ನೀತಿಯನ್ನು ಗಮನಿಸಿದರೆ ಈ ಅನುಮಾನ ಇನ್ನೂ ಬಲಗೊಳ್ಳುತ್ತದೆ ಎಂದಿದ್ದಾರೆ.
ಆದ್ದರಿಂದ ನಮ್ಮ ಬೆಂಗಳೂರಿನ ಎಲ್ಲಾ ಜವಾಬ್ದಾರಿಯುತ ನಾಗರಿಕರು ಹಾಗೂ ಮಾಧ್ಯಮಗಳು ಈ ದಾರಿತಪ್ಪಿಸುವ ಬಿಡಿಎ ಮಾಸ್ಟರ್ ಪ್ಲಾನ್ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಒತ್ತಾಯಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಹಾಗೆ ಮಾಸ್ಟರ್ ಪ್ಲಾನ್ ಅಂದರೆ, ಬೆಂಗಳೂರಿನ ಅಭಿವೃದ್ಧಿಗೆ ಅವಶ್ಯಕವಿರುವ ಮೂಲಸೌಕರ್ಯ ಹಾಗೂ ನಾಗರೀಕ ಸೇವೆಗಳನ್ನು ಅಂದಾಜಿಸಿ, ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು, ಈ ಮಾಸ್ಟರ್ ಪ್ಲಾನ್ ಮುಂಬರುವ 15 ವರ್ಷಗಳಿಗೆ ನಗರದ ಯೋಜನೆಯನ್ನು ರೂಪಿಸಬೇಕಾಗುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನಗರದ ಯೋಜನಾತ್ಮಕ ಅಭಿವೃದ್ಧಿಗೆ ದೀರ್ಘ ಕಾಲದಿಂದ ಹೋರಾಡುತ್ತಿರುವ ನನ್ನಂಥವರಿಗೆ ಇದೊಂದು ಸ್ವಾಗತಾರ್ಹ ಕ್ರಮ. ಆದರೆ ಈ ಮಾಸ್ಟರ್ ಪ್ಲಾನ್ ನಮ್ಮ ನಗರದ ಅಭಿವೃದ್ಧಿಗಾಗಿ ಉದ್ದೇಶಿಸಿರುವ ಯೋಜನೆಯಲ್ಲ, ಬದಲಾಗಿ ಅದು ಭಯಾನಕ ಹಾಗೂ ವಂಚನೆಭರಿತ ದುರುದ್ದೇಶದಿಂದ ಕೂಡಿದೆ ಎಂದು ಆರೋಪ ಮಾಡಿದ್ದಾರೆ.












Click it and Unblock the Notifications