ಪೇಜಾವರ ಶ್ರೀಗಳ ಬೆಂಬಲಕ್ಕೆ ಸಂಸದ ಪ್ರತಾಪ್ ಸಿಂಹ
ಬೆಂಗಳೂರು, ಜೂನ್ 27: ಉಡುಪಿ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ರಂಜಾನ್ ನ ಇಫ್ತಾರ್ ಕೂಟ ನೀಡಿದ್ದನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಮರ್ಥನೆ ಮಾಡಿಕೊಂಡಿದ್ದಾರೆ. ಮತ್ತು ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಈ ಬಗ್ಗೆ ಚರ್ಚೆಯನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ಪೇಜಾವರ ಶ್ರೀಗಳ ಹಿಂಸಿಸಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲ
ಮುಸ್ಲಿಮರಿಗೆ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಏರ್ಪಡಿಸಿದ್ದರು. ಈ ವೇಳೆ ಮುಸ್ಲಿಮರು ನಮಾಜು ಕೂಡ ಸಲ್ಲಿಸಿದ್ದರು. ಇದಕ್ಕೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ನಂತರ ಪರ-ವಿರೋಧವಾದ ಚರ್ಚೆ ಇನ್ನೂ ಮುಂದುವರಿದಿದೆ. ಸ್ವತಃ ಮುತಾಲಿಕ್ ಅವರೇ ಪೇಜಾವರ ಶ್ರೀಗಳ ಜತೆ ಚರ್ಚೆ ನಡೆಸಿದ ನಂತರವೂ ಸಮಾಧಾನ ಆಗಿರಲಿಲ್ಲ.
ಇದೀಗ ತಮ್ಮ ಫೇಸ್ ಬುಕ್ ನಲ್ಲಿ ಪೇಜಾವರ ಶ್ರೀಗಳಿಗೆ ಬೆಂಬಲ ಸೂಚಿಸಿರುವ ಪ್ರತಾಪ್ ಸಿಂಹ, 'ಪೇಜಾವರ ಶ್ರೀಗಳು ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸುವ ಸಲುವಾಗಿ ಒಂದು ಸಾಹಸವೆನ್ನಬಹುದಾದ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನದ ಹಿಂದಿರುವ ಸದುದ್ದೇಶವನ್ನು ಅರ್ಥಮಾಡಿಕೊಂಡು ಹುಳುಕು ಹುಡುಕುವುದನ್ನು ಬಿಟ್ಟರೆ ಒಳಿತು. ಹಿಂದೂ ಧರ್ಮ, ರಾಷ್ಟ್ರೀಯತೆ ಬಗ್ಗೆ ಪೇಜಾವರ ಶ್ರೀಗಳಿಗಿರುವ ಬದ್ಧತೆಯನ್ನು ಪ್ರಶ್ನಿಸುವ ಕನಿಷ್ಠ ಅರ್ಹತೆ ನಮಗ್ಯಾರಿಗೂ ಇಲ್ಲ' ಎಂದಿದ್ದಾರೆ.