ಮೂರು ವರ್ಷದ ಕಂದಮ್ಮನಿಗೆ ನೇಣು ಬಿಗಿದು ಹತ್ಯೆ
ಬೆಂಗಳೂರು, ಜು. 01: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ತನ್ನ ಮೂರುವರೆ ವರ್ಷದ ಕಂದಮ್ಮನಿಗೆ ನೇಣು ಹಾಕಿ ಕೊಲೆ ಮಾಡಿ ತಾನೂ ಅತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜರಾಜೇಶ್ವರಿ ನಗರದ ನಿವಾಸಿ ದೀಪಾ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ರಿಯಾ ಜನ್ಮ ಕೊಟ್ಟ ತಾಯಿಯಿಂದಲೇ ಕೊಲೆಯಾದ ಕಂದಮ್ಮ.
ಪತಿ ಅದರ್ಶ ಅವರೊಂದಿಗೆ ದೀಪಾ ಅವರು ಆರ್. ಅರ್. ನಗರದ ಚನ್ನಸಂದ್ರದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಆದರ್ಶ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದೀಪಾ ಅವರು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಆದರೂ ವಾಸಿಯಾಗಿರಲಿಲ್ಲ. ಜೂ. 30 ರಂದು ರಾತ್ರಿ ಮಗಳು ರಿಯಾಗೆ ವೇಲ್ ನಿಂದ ಫ್ಯಾನಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಆ ಬಳಿಕ ಆಕೆಯೂ ವೇಲ್ ನಿಂದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ದೀಪಾ ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನ ತುಂಬಾ ಬೇಸರಗೊಂಡಿದ್ದೇನೆ. ಅಮ್ಮಾ ಸಾರಿ, ದಿವ್ಯಾ ಲವ್ ಯೂ ಎಂದು ಸಹೋದರಿಯನ್ನು ನೆನಪಿಸಿಕೊಂಡಿದ್ದಾಳೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಳಾ ? ಇಲ್ಲವೇ ಪತಿಯ ನಡವಳಿಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದೀಪಾ ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ. ಅರ್.ಅರ್. ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದೀಪಾ ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪತಿ ಆದರ್ಶ ಜತೆಗೂ ಅನೋನ್ಯವಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ವೇಳೆಯಲ್ಲಿ ಪತಿ ಆದರ್ಶ ಇರಲಿಲ್ಲ. ಅಕೆ ಆತ್ಮಹತ್ಯೆ ಮಾಡಿಕೊಳ್ಳುವ ಜತೆಗೆ ಏನೂ ಅರಿಯದ ಮೂರುವರೆ ವರ್ಷದ ಕಂದಮ್ಮನನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಇದೀಗ ಕುಟುಂಬಸ್ಥರಲ್ಲಿ ಕಣ್ಣೀರು ಸುರಿಸುವಂತಿದೆ.












Click it and Unblock the Notifications