ಕಾಂಗ್ರೆಸ್ ನಿಂದ ಇನ್ನೂ ಆರೇಳು ಶಾಸಕರ ರಾಜೀನಾಮೆ ಸಾಧ್ಯತೆ; ಯಾರವರು?
Recommended Video
ಬೆಂಗಳೂರು, ಜುಲೈ 8: ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಒಟ್ಟು ಹನ್ನೆರಡು ಶಾಸಕರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದು, ಸೋಮವಾರ ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಬಗ್ಗೆ ಸುದ್ದಿ ಆಗಿದೆ.
ಭಾನುವಾರ ಇಡೀ ದಿನ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಸರಣಿ ಸಭೆಗಳನ್ನು ನಡೆಸಲಾಯಿತು. ಅಮೆರಿಕಕ್ಕೆ ತೆರಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಜೆ ನಂತರ ಹಿಂತಿರುಗಿ, ಕಾಂಗ್ರೆಸ್ ನ ನಾಯಕರು ಹಾಗೂ ಜೆಡಿಎಸ್ ನ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಜೆಡಿಎಸ್ ಶಾಸಕಾಂಗ ಸಭೆಗೆ ರವೀಂದ್ರ ಶ್ರೀಕಂಠಯ್ಯ ಹಾಗೂ ಎ.ಟಿ.ರಾಮಸ್ವಾಮಿ ಗೈರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ ದೇವೇಗೌಡರೇ ಖುದ್ದು ಫೋನ್ ಮಾಡಿ ಕರೆದಿದ್ದರು.
'ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಲ್ಲ, ರಾಜೀನಾಮೆ ನಿರ್ಧಾರ ಅಚಲ'
ಶನಿವಾರದಂದು ಹನ್ನೆರಡು ಶಾಸಕರು ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಸರಕಾರವು ಅಲ್ಪ ಮತಕ್ಕೆ ಕುಸಿದಿದ್ದು, ಸೋಮವಾರದಂದು ಐದರಿಂದ ಆರು ಶಾಸಕರು ರಾಜೀನಾಮೆ ನೀಡಬಹುದು ಎಂಬ ಅಂದಾಜಿದೆ. ಸಂಭವನೀಯರ ವಿವರ ಹೀಗಿದೆ. ಎಲ್ಲ ಶಾಸಕರೂ ಕಾಂಗ್ರೆಸ್ ನವರಾಗಿದ್ದು, ಕ್ಷೇತ್ರ ಸಮೇತ ಮಾಹಿತಿ ಹೀಗಿದೆ.
ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ
ಖಾನಾಪುರ ಅಂಜಲಿ ನಿಂಬಾಳ್ಕರ್
ಹಗರಿಬೊಮ್ಮನಹಳ್ಳಿ ಭೀಮಾನಾಯ್ಕ
ಬಾಗೇಪಲ್ಲಿ ಎಸ್.ಎನ್.ಸುಬ್ಬಾರೆಡ್ಡಿ
ಚಿಕ್ಕೋಡಿ-ಸದಲಗ ಗಣೇಶ ಹುಕ್ಕೇರಿ
ರಾಯಚೂರು ಗ್ರಾಮೀಣ ಬಸವರಾಜ ದದ್ದಲ
ಇವರೆಲ್ಲರ ಜತೆಗೆ ರಾಮಲಿಂಗಾ ರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಸಹ ರಾಜೀನಾಮೆ ಸಲ್ಲಿಸಬಹುದು ಎನ್ನಲಾಗುತ್ತಿದೆ.