ಬೆಂಗಳೂರು ಜನರು ಮಳೆ ಎಂದರೆ ಬೆಚ್ಚಿ ಬೀಳುವುದು ಏಕೆ?
ಬೆಂಗಳೂರು, ಸೆಪ್ಟೆಂಬರ್ 07: ಸಿಲಿಕಾನ್ ಸಿಟಿಯಲ್ಲಿನ ರಸ್ತೆಗಳು ಮಳೆಯಿಂದ ಸಮುದ್ರದ ರೂಪ ತಾಳುತ್ತಿವೆ. ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ನೀರು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಐಟಿ ಹಬ್ ವಲಯಗಳಲ್ಲಿ ವರುಣನ ಭಯ ಹೆಚ್ಚಾಗಿದೆ. ಬೆಂಗಳೂರಿನ ಹೊರವಲಯದ ಪ್ರದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಇದರ ಮಧ್ಯೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಸಂದೇಶವು ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ನಗರದಲ್ಲಿ ಈಗಾಗಲೇ ಸುರಿದಿರುವ ಮಳೆಯಿಂದ ಬೆಂಗಳೂರು ಮಂದಿ ಸುಧಾರಿಸಿಕೊಳ್ಳಬೇಕಿದೆ.
ವಿದ್ಯುತ್, ನೀರು ಇಲ್ಲ: ಬೆಂಗಳೂರು ಪ್ರವಾಹಕ್ಕೆ ಸಿಲುಕಿದ್ದ ಕುಟುಂಬಗಳು ಹೋಟೆಲ್ಗೆ ಶಿಫ್ಟ್
ಬೆಂಗಳೂರಿನಲ್ಲಿ ಬಿಡುವು ಕೊಡದೇ ಸುರಿಯುತ್ತಿರುವ ಮಳೆಯು ಇನ್ನೂ ಮೂರು ದಿನ ತನ್ನ ಆಟವನ್ನು ಮುಂದುವರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ವರುಣನ ಮುನಿಸಿಗೆ ರಾಜ್ಯ ರಾಜಧಾನಿಯ ಚಿತ್ರಣ ಏನಾಗಿದೆ?, ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಲ್ಲಿ ಏನನ್ನು ಉಲ್ಲೇಖಿಸಲಾಗಿದೆ? ನಗರ ಮಂದಿ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅನಾಹುತ
ಕಳೆದ ಭಾನುವಾರದಿಂದಲೂ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಮಹದೇವಪು, ಬೆಳ್ಳಂದೂರು, ವರ್ತೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೋಟ್ ಅನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿಂದ ನಿವಾಸಿಗಳು ಆತಂಕದಲ್ಲಿದ್ದಾರೆ. ನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಬೆಂಗಳೂರು ಮಳೆ: ಪ್ರವಾಹದಲ್ಲಿ ಕಾರು, ನಿಮ್ಮ ಇನ್ಷೂರೆನ್ಸ್ ಕವರ್ ಆಗುತ್ತಾ?
ಬೆಂಗಳೂರು ಮಳೆಯಿಂದ ಐಟಿ ಕಂಪನಿಗಳಿಗೆ ಆಘಾತ
ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಐಟಿ ಕಂಪನಿಗಳಿಗೆ ಅತಿಹೆಚ್ಚು ನಷ್ಟವಾಗಿದೆ. ಐಟಿ ಹಬ್ ವಲಯದಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆ ಐಟಿ ಕಂಪನಿಗಳ ಪ್ರತಿನಿಧಿಗಳನ್ನು ಉನ್ನತ ಶಿಕ್ಷಣ ಹಾಗೂ ಐಟಿ ಸಚಿವ ಅಶ್ವಥ್ ನಾರಾಯಣ್ ಭೇಟಿ ಮಾಡಿದರು. ಐಟಿ ಕಂಪನಿ ಸಮಸ್ಯೆ ಬಗ್ಗೆ ಚರ್ಚಿಸಿದರು. ಇನ್ಫೋಸಿಸ್, ವಿಪ್ರೋ, ನಾಸ್ಕಾಮ್, ಗೋಲ್ಡ್ಮನ್ ಸ್ಯಾಕ್ಸ್, ಇಂಟೆಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಫಿಲಿಪ್ಸ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು. ಇದೇ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬೆಂಗಳೂರು ಪೌರಕಾರ್ಮಿಕ ಮುಖ್ಯ ಆಯುಕ್ತ ತುಷಾರ ಗಿರಿನಾಥ್, ನಗರ ಜಲ ಪ್ರಾಧಿಕಾರ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಭಾಗವಹಿಸಿದರು.
ನಗರದ ಹಲವೆಡೆ ನೀರು, ವಿದ್ಯುತ್ ಪೂರೈಕೆ ವ್ಯತ್ಯಯ
ಸಿಲಿಕಾನ್ ಸಿಟಿಯ ಹಲವೆಡೆ ಭಾರೀ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮತ್ತು ನೀರಿನ ಸರಬರಾಜಿಗೆ ವ್ಯತ್ಯಯ ಉಂಟಾಗಿದೆ. ಮಳೆ ಪೀಡಿತ ಪ್ರದೇಶಗಳಲ್ಲಿ ಪೂರೈಕೆ ಕೊರತೆಯನ್ನು ನಿಭಾಯಿಸಲು ಬೋರ್ವೆಲ್ಗಳನ್ನು ಬಳಸಲಾಗುತ್ತಿದೆ. ಇತರ ಪ್ರದೇಶಗಳಲ್ಲಿ, ಜಲ ಮಂಡಳಿಯು ನಿಯೋಜಿಸಿದ ನೀರಿನ ಟ್ಯಾಂಕರ್ಗಳ ಮೂಲಕ ಅಗತ್ಯತೆಯನ್ನು ಪೂರೈಸಲಾಗುತ್ತಿದೆ.
ಇದರ ಮಧ್ಯೆ ನಗರದಲ್ಲಿ ನೀರಿನ ರಭಸಕ್ಕೆ 23 ವರ್ಷದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಶಾಲೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಖಿಲಾ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್ ಆಗಿದೆ. ಬೀಳುವುದನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ಈ ವೇಳೆ ವಿದ್ಯುತ್ ಶಾಕ್ ನಿಂದ ಮಹಿಳೆ ಮೃತಪಟ್ಟಿದ್ದಾರೆ.
ಬೆಂಗಳೂರಿನ ಸ್ಥಿತಿಗೆ ಹಿಂದಿನ ಸರ್ಕಾರ ಕಾರಣ ಎಂದ ಸಿಎಂ
ಸಿಲಿಕಾನ್ ಸಿಟಿಯಿಂದ ಕೊಳಚೆ ನೀರನ್ನು ಹೊರ ಹಾಕುವ ಯೋಜನೆಗಾಗಿ 1500 ಕೋಟಿ ರೂಪಾಯಿ ಅನ್ನು ಮೀಸಲು ಇಡಲಾಗಿದ್ದು, ಅತಿಕ್ರಮಣ ತೆರವಿಗೆ 300 ಕೋಟಿ ರೂಪಾಯಿಗೆ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜಿತವಲ್ಲದ ಆಡಳಿತದಿಂದಾಗಿ ಪರಿಸ್ಥಿತಿ ಹೀಗಾಗಿದೆ. ಅಂದಿನ ಸರ್ಕಾರದವರು ಕೆರೆಗಳು ಮತ್ತು ಬಫರ್ ಝೋನ್ ಬಲ, ಎಡ ಮತ್ತು ಮಧ್ಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದರು," ಎಂದು ಸಿಎಂ ಬಸವರಾಜ ಬೊಮ್ಮಾಯಿ ದೂಷಿಸಿದ್ದಾರೆ.