ನನ್ನನ್ನು ಬಿಟ್ಟು ಬಿಡಿ ಎಂದು ಮಾಧ್ಯಮದೆದುರು ಕಣ್ಣೀರಿಟ್ಟ ನಲಪಾಡ್
ಬೆಂಗಳೂರು, ಫೆಬ್ರವರಿ 12: ಮೇಖ್ರಿ ವೃತ್ತದಲ್ಲಿ ನಡೆದ ಲಂಬೋರ್ಗಿನಿ ಕಾರು ಅಪಘಾತದ ಕುರಿತು ಮೊಹಮ್ಮದ್ ನಲಪಾಡ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಆ ಕಾರಿನಲ್ಲಿ ನಾನು ಇರಲಿಲ್ಲ, ಕೈಮುಗಿದು ಕೇಳುತ್ತೇನೆ, ನನ್ನನ್ನು ಬಿಟ್ಟುಬಿಡಿ ಎಂದು ಮಾಧ್ಯಮದವರ ಮುಂದೆ ಕೇಳಿದ್ದಾರೆ.
ನಾನು ಆ ಕಾರು ಓಡಿಸಿಲ್ಲ, ಬಾಲು ಎನ್ನುವವರು ಆ ಕಾರು ಓಡಿಸಿದ್ದರು. ನಾನು ಲಂಬೋರ್ಗಿನಿ ಕಾರಿನಲ್ಲಿದ್ದೆ, ಅಪಘಾತಕ್ಕೀಡಾಗಿದ್ದು ಬೆಂಟ್ಲೆ ಕಾರು ಎಂದು ಹೇಳಿದರು.
ನೆಯಲ್ಲಿ 87 ವರ್ಷದ ಅಜ್ಜ, ಅಜ್ಜಿ ಇದ್ದಾರೆ. ಅಪಘಾತ ಆದಾಗ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತದೆ. ಕೆಳಗೆ ಅಪಘಾತದಲ್ಲಿ ಇಬ್ಬರು ಸಾವು ಎಂದು ಹಾಕಿರುತ್ತಾರೆ. ಅದನ್ನು ಓದಿದವರು ಏನಂದುಕೊಳ್ಳಬೇಕು? ನನ್ನ ಬಗ್ಗೆ ಯಾಕೆ ಈ ರೀತಿ ಸುದ್ದಿ ಬಿತ್ತರ ಮಾಡುತ್ತಿದ್ದೀರಿ ಎಂದು ನಲಪಾಡ್ ಬೇಸರಪಟ್ಟರು.
ಯಾರ ಕೈವಾಡವಿದೆ ಎಂದು ಗೊತ್ತಿದೆ
ಈ ಬೆಳವಣಿಗೆಯ ಹಿಂದೆ ಯಾವ ವ್ಯಕ್ತಿಗಳು ಇದ್ದಾರೆ ಎಂಬುದು ಗೊತ್ತಿದೆ. ನಾನು ನ್ಯಾಯಾಲಯದಲ್ಲಿ ಫೈಟ್ ಮಾಡುತ್ತೇನೆ ಎಂದು ಈ ವೇಳೆ ನಲಪಾಡ್ ಸ್ಪಷ್ಟಪಡಿಸಿದ್ದಾರೆ.
ನಾನೇನು ಗೂಂಡಾನಾ, ಮೊದಲ ಘಟನೆಯಿಂದ ನಾನು ಎಚ್ಚೆತ್ತುಕೊಂಡಿದ್ದೇನೆ, ಯಾರೋ ನನ್ನ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ, ನಾನು ಸಾಕಷ್ಟು ಬದಲಾಗಿದ್ದೇನೆ, ಪದೇ ಪದೇ ತಪ್ಪು ಮಾಡುವುದಿಲ್ಲ, ನನ್ನದೇನೂ ತಪ್ಪಿಲ್ಲ ನನ್ನ ಬಿಟ್ಟುಬಿಡಿ, ಒಂದೊಮ್ಮೆ ನನ್ನದೇ ತಪ್ಪು ಎಂದು ಹೇಳುವುದುದ್ದರೆ ಅದನ್ನು ಸಾಬೀತುಪಡಿಸಿ ನನ್ನ ಮೇಲೆ ದ್ವೇಷ ಯಾಕೆ ಎಂದು ಪ್ರಶ್ನಿಸಿದರು.
ಮೇಖ್ರಿ ವೃತ್ತದಲ್ಲಿ ಕಾರು ಅಪಘಾತ
ಕೆಲ ದಿನಗಳ ಹಿಂದೆ ಮೇಖ್ರಿ ಸರ್ಕಲ್ ಬಳಿ ಕೋಟ್ಯಂತರ ಮೌಲ್ಯದ ಬೆಂಟ್ಲಿ ಕಾರು ಅಪಘಾತವಾಗಿತ್ತು. ಒಂದು ಬೈಕ್ ಸೇರಿ ಮೂರು ವಾಹನಗಳಿಗೆ ಗುದ್ದಿತ್ತು. ಬೈಕ್ ಸವಾರ ಪ್ರಫುಲ್ಲಾಗೆ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ವೆಚ್ಚವನ್ನು ತಾವೇ ಭರಿಸಿದ್ದಾಗಿ ನಲಪಾಡ್ ಹೇಳಿಕೊಂಡಿದ್ದಾರೆ.
ಆ ಕಾರಿನಲ್ಲಿ ಮೊಹಮ್ಮದ್ ಕಾರಿನಲ್ಲಿದ್ರಾ?
ಆ ಕಾರಿನಲ್ಲಿ ಮೊಹಮ್ಮದ್ ನಲಪಾಡ್ ಕೂಡ ಇದ್ದರು. ಅಪಘಾತವಾದ ಕೂಡಲೇ ಅವರು ಬೇರೊಂದು ಕಾರಿಗೆ ಹತ್ತಿ ತಪ್ಪಿಸಿಕೊಂಡು ಹೋಗಿದ್ದರು. ನಂತರ, ಅವರ ಗನ್ ಮ್ಯಾನ್ ಬಾಲು ಅವರು ತಾನೇ ಆ ಕಾರು ಚಲಾಯಿಸುತ್ತಿದ್ದುದು ಎಂದು ಪೊಲೀಸರಲ್ಲಿ ಶರಣಾಗಲು ಹೋಗಿದ್ದರು. ಆದರೆ, ಅವರೇ ಕಾರು ಚಲಾಯಿಸುತ್ತಿದ್ದುದಕ್ಕೆ ಪೊಲೀಸರಲ್ಲಿ ಆಧಾರ ಸಿಕ್ಕಿಲ್ಲ.
ನಲಪಾಡ್ಗೂ ಅಪಘಾತಕ್ಕೂ ಸಂಬಂಧವಿಲ್ಲ
ವಕೀಲ ಉಸ್ಮಾನ್ ಮಾತನಾಡಿ, ಫೆಬ್ರವರಿ 9ರಂದು ಮೇಖ್ರಿ ವೃತ್ತದಲ್ಲಿ ನಡೆದ ಅಪಘಾತಕ್ಕೂ ನಲಪಾಡ್ಗೂ ಸಂಬಂಧವಿಲ್ಲ. ಅವರ ವಿರುದ್ಧ ಷಡ್ಯಂತ್ರ ರಚಿಸಲಾಗುತ್ತಿದೆ.
ನಲಪಾಡ್ಗೆ ಬಾಂಡ್ ಬರೆಸಿಕೊಂಡು ಬೇಲ್ ನೀಡಿದ್ದೇವೆ ಎಂದು ಸಂಚಾರಿ ವಿಭಾಗದ ಜೆಸಿಪಿ ರವಿಕಾಂತೇಗೌಡ ಹೇಳಿದ್ದರೆ, ಜಾಮೀನು ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ವಕೀಲರು ಹೇಳಿದ್ದಾರೆ.