ಕಲಬುರ್ಗಿ ಹತ್ಯೆ ಕೇಸ್: ಸಿಸಿಟಿವಿಯಿಂದ ಮಹತ್ವದ ಸುಳಿವು ಪತ್ತೆ
ಬೆಂಗಳೂರು, ಸೆ.01: ಸಾಹಿತಿ ಎಂಎಂ ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ತಂಡಕ್ಕೆ ಮಂಗಳವಾರ ಮಹತ್ವದ ಸುಳಿವು ಸಿಕ್ಕಿದೆ. ಆರೋಪಿಗಳನ್ನು ಹುಡುಕಿಕೊಂಡು ಒಂದು ತಂಡ ಕೊಲ್ಹಾಪುರಕ್ಕೆ ತೆರಳಿದರೆ, ಮತ್ತೊಂದು ತಂಡಕ್ಕೆ ಸಿಸಿಟಿವಿ ದೃಶ್ಯಾವಳಿಗಳಿಂದ ಮಹತ್ವದ ವಿಷಯ ತಿಳಿದು ಬಂದಿದೆ. ಹತ್ಯೆ ದಿನದಂದು ಕಲಬುರ್ಗಿ ಅವರ ಮನೆಗೆ ಇಬ್ಬರಲ್ಲ, ನಾಲ್ವರು ಬಂದಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಪ್ರೊ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಅವರ ಹತ್ಯೆ ನಡೆದ ದಿನದಂದು ಮೋಟರ್ ಸೈಕಲ್ ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳಲ್ಲದೆ ಇನ್ನಿಬ್ಬರು ವ್ಯಕ್ತಿಗಳು ಸಾಹಿತಿಗಳ ಮನೆಯ ಬಳಿ ಸುಳಿದಾಡಿರುವುದು ಕಂಡು ಬಂದಿದೆ. ಅಲ್ಲದೆ, ಬೈಕಿನಲ್ಲಿ ಬಂದಿದ್ದ ವ್ಯಕ್ತಿಗಳು ಹತ್ಯೆ ಮಾಡಿದ ನಂತರ ಹೊರಗಡೆ ಕಾರಿನಲ್ಲಿ ಕಾದಿದ್ದ ಇಬ್ಬರಿಗೆ ಕೆಲಸ ಆಯಿತು ಎಂಬಂತೆ ಸೂಚಿಸಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಗಿದೆ. [ಸಿಐಡಿ ಪೊಲೀಸರ ತಂಡ ಕೊಲ್ಹಾಪುರಕ್ಕೆ]

ಸಿಸಿಟಿವಿ ದೃಶ್ಯಾವಳಿಗಳು ಈ ಪ್ರಕರಣದಲ್ಲಿ ಮಹತ್ವದ ಪಾತ್ರವಹಿಸಲಿವೆ. ಸಾಹಿತಿಗಳನ್ನು ಕೊಲೆ ಮಾಡಲು ಬಾಡಿಗೆ ಹಂತಕರನ್ನು ಬಳಸಿಕೊಂಡಿದ್ದರೂ ಘಟನೆ ನಡೆದ ಸಮಯದಲ್ಲಿ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಯಾರು ಎಂಬುದು ತಿಳಿಯಲು ಸಿಸಿಟಿವಿ ದೃಶ್ಯಾವಳಿ ಸಹಾಯಕವಾಗಲಿದೆ ಎಂದು ಸಿಐಡಿ ತನಿಖಾ ತಂಡದವರು ಒನ್ ಇಂಡಿಯಾ ಪ್ರತಿನಿಧಿಗೆ ಹೇಳಿದ್ದಾರೆ. [ಕಲಬುರ್ಗಿ ಹತ್ಯೆ, ಸಿಬಿಐ ತನಿಖೆಗೆ ನಿರ್ಧಾರ]
ಧಾರವಾಡದ ನಿವಾಸದಲ್ಲಿ ಆಗಸ್ಟ್ 30ರಂದು ಹತ್ಯೆಯಾದ ಪ್ರೊ.ಎಂಎಂ ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಕೈಗೆತ್ತಿಕೊಂಡಿದ್ದು, ನಾಲ್ಕು ತಂಡಗಳು ವಿವಿಧ ಕೋನಗಳಿಂದ ತನಿಖೆ ಕೈಗೊಂಡಿವೆ.
ಕೌಟುಂಬಿಕ ಹಿನ್ನಲೆ, ಆಸ್ತಿ ಕಲಹ, ಕಲಬುರ್ಗಿ ಅವರು ಸುತ್ತಿಕೊಂಡಿದ್ದ ವಿವಾದಗಳು, ಬಾಡಿಗೆ ಹಂತಕರನ್ನು ಗೊತ್ತು ಮಾಡಿದ್ದು ಯಾರು ಸೇರಿದಂತೆ ಹಲವು ಪ್ರಶ್ನೆಗಳನ್ನು ಹೊತ್ತುಕೊಂಡು ತನಿಖೆ ಮುಂದುವರೆಸಲಾಗಿದೆ. ಈ ನಡುವೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಡ ಹೆಚ್ಚಾಗುತ್ತಿದೆ.(ಒನ್ ಇಂಡಿಯಾ ಸುದ್ದಿ)












Click it and Unblock the Notifications