ಮನ್ಸೂರ್ ಸ್ಫೋಟಕ ವಿಡಿಯೋ ಆರೋಪ ಅಲ್ಲಗೆಳೆದ ಟಿಎ ಶರವಣ
ಬೆಂಗಳೂರು, ಜೂನ್ 23: ಐಎಂಎ ಹಗರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ಅವರು ದುಬೈನಿಂದ ವಿಡಿಯೋ ಬಿಡುಗಡೆ ಮಾಡಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾನೆ. ವಿಡಿಯೋದಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ, ಎಂಎಲ್ಸಿ, ಆರ್ಯು ವೈಶ್ಯ ಮಂಡಳಿ ಅಧ್ಯಕ್ಷ ಟಿ.ಎ ಶರವಣ ಅವರ ಹೆಸರನ್ನು ಪ್ರಸ್ತಾಪಿಸಿದ್ದಾನೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎ ಶರವಣ, ನಾನು ಆತನನ್ನು ಒಮ್ಮೆ ಕೂಡಾ ಭೇಟಿ ಮಾಡಿಲ್ಲ. ನಾನು ಯಾವುದೇ ರೀತಿ ವಂಚನೆಗೆ ಸಹಕರಿಸಿಲ್ಲ ಎಂದಿದ್ದಾರೆ.
ಈ ಮುಂಚೆ ಆಡಿಯೋ ರಿಲೀಸ್ ಮಾಡಿದ್ದು ನಾನೇ, ರಾಜಕಾರಣಿಗಳು ನನ್ನ ಜೀವಕ್ಕೆ ಕುತ್ತು ತರುವಂಥ ಸನ್ನಿವೇಶ ಸೃಷ್ಟಿಸಿದ್ದರಿಂದ ನಾನು ಭಾರತ ತೊರೆಯಬೇಕಾಯಿತು. ನಾನು ಯಾರು ಯಾರಿಗೆ ಹಣ ಕೊಟ್ಟಿದ್ದೇನೆ ಎಂಬುದರ ಬಗ್ಗೆ ಸಂಪೂರ್ಣ ಪಟ್ಟಿಯಿದೆ. ಕಳೆದ 13 ವರ್ಷಗಳಲ್ಲಿ ಗ್ರಾಹಕರಿಗೆ 12 ಸಾವಿರ ಕೋಟಿ ಲಾಭಂಶ ನೀಡಿದ್ದೇನೆ. ನನ್ನ ಬಳಿ 1,350 ಕೋಟಿ ರು ಮಾತ್ರ ಆಸ್ತಿ ಇದೆ.

ನನಗೆ ಜೀವ ಬೆದರಿಕೆ ಇದೆ: ನಾನು ಭಾರತಕ್ಕೆ ಬಂದರೆ ನನ್ನನ್ನು ಉಳಿಸುವುದಿಲ್ಲ. ನಾನು ಪಟ್ಟಿಯಲ್ಲಿರುವ ಹೆಸರುಗಳನ್ನು ಬಹಿರಂಗಪಡಿಸಿದರೆ ನನ್ನ ಕುಟುಂಬವನ್ನು ನಾಶ ಮಾಡುತ್ತಾರೆ. ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನನಗೆ ರಕ್ಷಣೆ ನೀಡುವ ಭರವಸೆ ಕೊಟ್ಟರೆ ಭಾರತಕ್ಕೆ ಬರುತ್ತೇನೆ, ಸಾರ್ವಜನಿಕರಿಗೆ ಹಣ ಹಿಂತಿರುಗಿಸುತ್ತೇನೆ, ತನಿಖೆಗೆ ಸಹಕರಿಸುತ್ತೇನೆ ಎಂದಿದ್ದಾನೆ.
ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್, ಪ್ರೆಸ್ಟೀಜ್ ಗ್ರೂಪ್ ನ ಇರ್ಫಾನ್, ಮಾಜಿ ರಾಜ್ಯಸಭಾ ಸದಸ್ಯರಾದ ರಹಮಾನ್ ಖಾನ್, ಶಬೀದ್ ಉಲ್ಲಾ, ಟಾಡಾ ಉಗ್ರ ಮುಖ್ತಿಯಾರ್ ಸೇರಿದಂತೆ ಹಲವರಿಗೆ ಧನ್ಯವಾದ ಅರ್ಪಿಸಿದ್ದಾನೆ.












Click it and Unblock the Notifications