ಹಿಜಾಬ್ ಕುರಿತ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಜಮೀರ್ ಅಹ್ಮದ್
ಬೆಂಗಳೂರು, ಫೆಬ್ರವರಿ 14: ಮಹಿಳೆಯರು ಹಿಜಾಬ್ ಹಾಕದಿದ್ದರೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಈಗ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ.
ಜಮೀರ್ ಅಹ್ಮದ್ ಹೇಳಿಕೆ ಸಂಬಂಧ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ನ ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡಿದ್ದರಿಂದ ಜಮೀರ್ ಕ್ಷಮೆಯಾಚನೆಗೆ ಮುಂದಾದರು ಎನ್ನಲಾಗುತ್ತಿದ್ದು, ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಟ್ವೀಟ್ ಮಾಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗಲು ಅವರ ಮೈ ಮೇಲಿನ ಬಟ್ಟೆ ಕಾರಣವಲ್ಲ. ಕೆಲ ಪುರುಷರಲ್ಲಿನ ರೇಪಿಸ್ಟ್ ಮನಸ್ಥಿತಿ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ವಿಷಾದ ವ್ಯಕ್ತಪಡಿಸಿರುವ ಶಾಸಕ ಜಮೀರ್ ಅಹ್ಮದ್, ಉದ್ದೇಶಪೂರ್ವಕವಾಗಿ ಹೇಳಿಲ್ಲ, ಹೆಣ್ಣು ಮಕ್ಕಳ ಮೇಲಿನ ಕಾಳಜಿಯಿಂದ ಹೀಗೆ ಮಾತನಾಡಿರುವೆ. ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ, ಅಗೌರವ ತೋರುವ ಉದ್ದೇಶದಿಂದ ನಾನು ಹೇಳಿಲ್ಲ, ಮನಸ್ಸಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುವೆ ಎಂದು ಟ್ವೀಟ್ ಮಾಡಿದ್ದಾರೆ.

ನಾನೇಕೆ ಕ್ಷಮೆಯಾಚಿಸಬೇಕು ಎಂದಿದ್ದ ಜಮೀರ್
ಹಿಜಾಬ್ ಕುರಿತ ಹೇಳಿಕೆಗೆ ಕ್ಷಮೆ ಕೋರುವಂತೆ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಹಿಜಾಬ್ ಬಗ್ಗೆ ನಾನು ಮಾತನಾಡುತ್ತೇನೆ, ನಾನು ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆ ನೀಡಿಲ್ಲ. ನಾನೇಕೆ ಕ್ಷಮೆಯಾಚಿಸಬೇಕು? ಎಂದು ತಿರುಗೇಟು ನೀಡಿದ್ದರು.

ಹಿಜಾಬ್ ಹಾಕಬೇಕು ಎಂದು ನಾನು ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ಹೆಲ್ಮೆಟ್ ರೀತಿ ಹಿಜಾಬ್ ಹಾಕಬೇಕು ಎಂದು ಹೇಳಿದ್ದೆ. ಹೆಲ್ಮೆಟ್ ಹೇಗೆ ಸೇಫ್ಟಿ ಕೊಡುತ್ತದೋ ಹಾಗೇ ಹಿಜಾಬ್ ನೀಡುತ್ತದೆ. ಹೆಲ್ಮೆಟ್ ಕಡ್ಡಾಯವಿದ್ದರೂ ಕೆಲ ಬೈಕ್ ಸವಾರರು ಹಾಕಲ್ಲ. ಅದೇ ರೀತಿ ಬಹಳ ಜನ ಹಿಜಾಬ್ ಕೂಡ ಹಾಕುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದರು.












Click it and Unblock the Notifications