ಶಾಸಕ ಗಣೇಶ್ ಗೆ ಜಾಮೀನು ನಿರಾಕರಣೆ, ಇನ್ನಷ್ಟು ದಿನ ಜೈಲೇ ಗತಿ
ಬೆಂಗಳೂರು, ಮಾರ್ಚ್ 19: ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಇಂದೂ ಸಹ ಜಾಮೀನು ದೊರೆತಿಲ್ಲ.
ಜೆ.ಎನ್.ಗಣೇಶ್ ಅವರು ಜಾಮೀನಿಗಾಗಿ ಸಿಟಿ ಸಿವಿಲ್ ಕೋರ್ಟ್ನಲ್ಲಿ ಮನವಿ ಮಾಡಿದ್ದರು, ಗಣೇಶ್ ಪರ ಹಿರಿಯ ವಕೀಲ ಹನುಮಂತರಾಯಪ್ಪ ಅವರು ವಾದ ಮಂಡಿಸಿದರು.
ಯಾವುದೇ ಪೂರ್ವಾದ್ದೇಶ ಇಲ್ಲದೆ ಇಬ್ಬರ ನಡುವೆ ಗಲಾಟೆ ಪ್ರಾರಂಭವಾಗಿದೆ. ತಾಯಿ, ತಂಗಿಯ ಬಗ್ಗೆ ಅವಾಚ್ಯವಾಗಿ ಆನಂದ್ ಸಿಂಗ್ ಮಾತನಾಡಿದ್ದಾರೆ, ಅದಾಗಲೇ ಆನಂದ್ ಸಿಂಗ್ ಅವರು ಬಾಟಲಿ ಪೂರಾ ಕುಡಿದಿದ್ದರು ಎಂದು ಗಣೇಶ್ ಹೇಳಿದ್ದಾರೆ ಎಂದು ಹನುಮಂತರಾಯಪ್ಪ ವಾದ ಮಂಡಿಸಿದರು.
ಭಿಮಾನಾಯ್ಕ್ ಅವರು ಇದ್ದ ಕೊಠಡಿಯಲ್ಲಿ ಗಲಾಟೆ ಆಗಿದೆ, ಆದರೆ ಭೀಮಾನಾಯ್ಕ್ ಅವರ ಹೇಳಿಕೆ ಪಡೆಯಲಾಗಿಲ್ಲ, ಆನಂದ್ ಸಿಂಗ್ ಈಗ ಆರಾಮವಾಗಿದ್ದಾರೆ, ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ, ಒಬ್ಬರೇ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದಾರೆ, ಜೊತೆಗೆ ಎಫ್ಐಆರ್ ದಾಖಲಿಸಲು ಸಹ ತಡ ಮಾಡಿದ್ದಾರೆ ಎಂದು ವಾದ ಮಾಡಿದರು.

ಚುನಾವಣೆಗೆ ಹಣ ಕೊಡಲಿಲ್ಲವೆಂದು ಗಲಾಟೆ
ಸರ್ಕಾರಿ ಅಭಿಯಂತರೆ ರಾಜೇಶ್ವರಿ ವಾದ ಮಂಡಿಸಿ, ಆನಂದ್ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಅವರ ಹೇಳಿಕೆ ಪಡೆದುಕೊಳ್ಳಲು ತಡವಾಗಿದೆ. ಆನಂದ್ ಸಿಂಗ್ ಅವರು ವಿಧಾನಸಭೆ ಚುನಾವಣೆ ಸಮಯದಲ್ಲಿ ಹಣ ಕೊಡಲಿಲ್ಲವೆಂದು ಗಲಾಟೆ ಪ್ರಾರಂಭವಾಗಿದೆ. ಅಕ್ಕನ ಮಗನನ್ನು ಮುಗಿಸುತ್ತೇನೆ ಎಂದು ಗಣೇಶ್ ಆನಂದ್ ಸಿಂಗ್ಗೆ ಧಮಕಿ ಹಾಕಿದಾಗ ಗಲಾಟೆ ಶುರುವಾಗಿದೆ. ಒಂದುವರೆ ಬಾಟಲಿ ಕುಡಿದಿದ್ದರೆ ಯಾರಿಗಾದರೂ ನಿಲ್ಲಲು ಆದರೂ ಸಾಧ್ಯವಾ ಎಂದು ರಾಜೇಶ್ವರಿ ಪ್ರಶ್ನೆ ಮಾಡಿದರು.

ಗಣೇಶ್ ರೌಡಿ ಶೀಟರ್ ಆಗಿದ್ದರು: ವಾದ
ಗಣೇಶ್ ಅವರು ರೌಡಿ ಶೀಟರ್ ಆಗಿದ್ದವರು, ಆನಂದ್ ಸಿಂಗ್ ಅವರ ಮೇಲೆ ಅಚಾನಕ್ ಆಗಿ ಹಲ್ಲೆ ಮಾಡಿದ್ದರೆ ಅವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯವನ್ನೂ ಸಹ ಅವರು ಮಾಡಲಿಲ್ಲ, ಗಣೇಶ್ ಅವರು ಆನಂದ್ ಸಿಂಗ್ ಅವರ ಬೆನ್ನು ಹತ್ತಿ ಹಲ್ಲೆ ಮಾಡಿದರು ಎಂದು ತನ್ವೀರ್ ಸೇಠ್ ಹೇಳಿದ್ದಾರೆ ಹಾಗಾಗಿ ಇದೊಂದು ಅಚಾನಕ್ ದಾಳಿ ಅಲ್ಲ ಎಂದು ರಾಜೇಶ್ವರಿ ಹೇಳಿದರು.

ಜಾಮೀನು ಅರ್ಜಿ ತಿರಸ್ಕಾರ
ಇಬ್ಬರ ವಾದ ಆಲಿಸಿದ ನ್ಯಾಯಮೂರ್ತಿಗಳು ಗಣೇಶ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಗಣೇಶ್ ಅವರು ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಇರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.

ಫೆಬ್ರವರಿ 21ರಂದು ಬಂಧನ
ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಈಗಲ್ ಟನ್ ರೆಸಾರ್ಟ್ನಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದರು, ಆ ನಂತರ ಒಂದು ತಿಂಗಳ ಬಳಿಕ ಗಣೇಶ್ ಅವರನ್ನು ಗುಜರಾತ್ನಲ್ಲಿ ರಾಮನಗರ ಪೊಲೀಸರು ಫೆಬ್ರವರಿ 20 ರಂದು ಬಂಧಿಸಿದ್ದರು. ಫೆಬ್ರವರಿ 21 ರಿಂದಲೂ ಗಣೇಶ್ ಅವರು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.












Click it and Unblock the Notifications