Breaking: ಶಾಸಕ ಭೈರತಿ ಬಸವರಾಜು ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಶೀಘ್ರ ಶರಣಾಗತಿ ಸಾಧ್ಯತೆ
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೈವಾಡ ಇದೆ ಎಂಬ ಆರೋಪ ಹೊತ್ತಿದ್ದ ಶಾಸಕ ಭೈರತಿ ಬಸವರಾಜ್ ಅವರು ಕೋರ್ಟ್ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ. ಶೀಘ್ರವೇ ಅವರು ಶರಣಾಗುವ ಸಾಧ್ಯತೆ ಇದೆ. ಈ ಮೂಲಕ ಕೋರ್ಟ್ ಬೈರತಿ ಬಸವರಾಜ್ ಅವರಿಗೆ ಶಾಕ್ ನೀಡಿದೆ. ಹೀಗಾಗಿ ಬಂಧನ ಭೀತಿ ಎದುರಾಗಿದೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ್ದನ್ನು ಮಾಜಿ ಸಚಿವ ಭೈರತಿ ಬಸವರಾಜ್ ಅವರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅವರ ಅರ್ಜಿ ವಜಾಗೊಳಿಸಿದ ದೇಶದ ಉನ್ನತ ನ್ಯಾಯಾಲಯ, ಆರೋಪಿ ಬೈರತಿ ಬಸವರಾಜ್ ಕೂಡಲೇ ಪೊಲೀಸರ ಮುಂದೆ ಶರಣಾಗಬೇಕು ಎಂದು ಸೂಚಿಸಿದೆ. ಈ ಮೂಲಕ ಅವರು ಭಾರೀ ಹಿನ್ನಡೆ ಅನುಭವಿಸುವಂತಾಗಿದೆ.

ಬಿಕ್ಲು ಶಿವ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಭೈರತಿ ಬಸವರಾಜ ಸದ್ಯ ಕರ್ನಾಟಕದಲ್ಲಿಲ್ಲ. ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗಾಗಿ ಶೋಧ ನಡೆದಿದೆ. ಇದೀಗ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪರ್ಡಿವಾಲ ಮತ್ತು ನ್ಯಾಯಮೂರ್ತಿ ಮಹದೇವನ್ ಅವರಿದ್ದ ವಿಭಾಗೀಯ ಪೀಠವು ಶಾಸಕರಿಗೆ ರಿಲೀಫ್ ನೀಡಲು ನಿರಾಕರಿಸಿದೆ. ಅರ್ಜಿ ವಜಾಗೊಳಿಸಿ ಆಘಾತ ನೀಡಿದೆ.
ಕರ್ನಾಟಕ ಹೈಕೊರ್ಟ್ ಜಾಮೀನು ಅರ್ಜಿಯನ್ನು ಇದೇ ಫೆಬ್ರವರಿ 10ರಂದು ತಿರಸ್ಕರಿಸಿತ್ತು. ಅದರ ಬೆನ್ನಲ್ಲೆ ಫೆಬ್ರವರಿ 11ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಭೈರತಿ ಬಸವರಾಜ್ಗೆ ಹಿನ್ನೆಡೆ ಆಗಿದೆ. ವಿಚಾರಣೆಗೆ ಹಾಜರಾಗುವಂತೆ ಸರ್ವೋಚ್ಚ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
ಬೆಂಗಳೂರಿನ ಹಲಸೂರು ಕೆರೆ ಬಳಿ 2025 ಜುಲೈ 15 ರಂದು ರೌಡಿಶೀಟರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂಚ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಗೆ ಭೂಮಿ ವ್ಯಾಜ್ಯ ಕಾರಣವಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿತ್ತು. ಸಿಐಡಿ ತನಿಖೆಯಲ್ಲಿ ಕೆ.ಆರ್.ಪುರಂನ ಬಿಜೆಪಿ ಶಾಸಕ ಬೈರತಿ ಬಸವರಾಜ್ರನ್ನು 5ನೇ ಆರೋಪಿಯಾಗಿ ಮಾಡಲಾಗಿತ್ತು. ಮಾಜಿ ಸಚಿವರು ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನ ಜತೆ ಸಂಪರ್ಕದಲ್ಲಿದ್ದರು. ಹೀಗಾಗಿ ಅವರ ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಿ ಹುಡುಕಲಾಗುತ್ತಿದೆ. ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿವೆ. ವಿಚಾರಣೆಗೆ ಹಾಜರಾಗುವುದೊಂದೆ ಅವರಿಗೆ ಪರಿಹಾರ ಮಾರ್ಗವಾಗಿದೆ.












Click it and Unblock the Notifications