ಮಹಿಳೆಯ ಮೇಲೆ ಶಾಸಕ ಅರವಿಂದ್ ಲಿಂಬಾವಳಿಯ ದರ್ಪ: ಕ್ರಮ ಯಾವಾಗ ಎಂದ ಕಾಂಗ್ರೆಸ್?
ಬೆಂಗಳೂರು ಸೆಪ್ಟೆಂಬರ್ 3: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ ಎಂದು ಕಾಂಗ್ರೇಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ.
ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 'ಮಹಿಳೆಗೆ ನಿಂದಿಸಿದ್ದರು ಮಾಧುಸ್ವಾಮಿ, ಮಹಿಳೆಗೆ ಹಲ್ಲೆ ಮಾಡಿದ್ದರು ಸಿದ್ದು ಸವದಿ, ಉದ್ಯೋಗ ಕೇಳಿದಾಕೆಯನ್ನು ಮಂಚ ಹತ್ತಿಸಿದ್ದರು ರಮೇಶ್ ಜಾರಕಿಹೊಳಿ, ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪು ಎಂದಿದ್ದರು ಅರಗ ಜ್ಞಾನೇಂದ್ರ, ಮಹಿಳೆಯ ಮೇಲೆ ದರ್ಪ ಮೆರೆದರು ಅರವಿಂದ್ ಲಿಂಬಾವಳಿ, ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ? ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿ ಕಾರಿದೆ.
ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ.. ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ? ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ? ನಳಿನ ಕಟೀಲ್ ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ? ಎಂದು ಕಾಂಗ್ರೆಸ್ ಕಟುವಾಗಿ ಪ್ರಶ್ನೆ ಮಾಡಿದೆ.
ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ.
— Karnataka Congress (@INCKarnataka) September 3, 2022
ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ @BJP4Karnataka.@BSBommai ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? pic.twitter.com/QFM14hve3N
ಮೇರಿ ಸಗಾಯ್ ಎಂಬ ಮಹಿಳೆಯ ಮೇಲೆ ಶಾಸಕ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಮೇರಿ ಸಗಾಯ್ ಮಾತನಾಡಿ, 'ಕ್ಷೇತ್ರಕ್ಕೆ ಬಂದ ಶಾಸಕರು ನಮ್ಮ ಕಟ್ಟಡದ ಕಾಂಪೌಂಡ್ ಕೆಡವಿ ಹಾಕಿದ್ದರು. ಇದನ್ನು ಪ್ರಶ್ನಿಸಲು ನಾನು ಅಲ್ಲಿಗೆ ತೆರಳಿದ್ದೆ. ಒಂದು ನಿಮಿಷ ಮಾತನಾಡಬೇಕು ಅಂತ ಹೇಳಿದ್ದಕ್ಕೆ, ಕೋಪದಿಂದ ಹಲ್ಲು ಕಚ್ಚಿ, ಕೋಪದಿಂದ ಏಕವಚನದಿಂದ ಮಾತನಾಡಿದರು. ಕೈಯಲ್ಲಿರುವ ದಾಖಲೆ ತೆಗೆದುಕೊಳ್ಳಲು ಬಂದಾಗ ನಾನು ನೀಡಲಿಲ್ಲ. ಕೊನೆಗೆ ಕೈಯಲ್ಲಿರುವ ದಾಖಲೆ ಪತ್ರ ತೆಗೆದುಕೊಂಡರು. ನಾವು ಬಿಬಿಎಂಪಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದೇವೆ. ಕಾಂಪೌಂಡ್ ಬೀಳಿಸುವ ಮೊದಲು ನಮಗೆ ನೋಟಿಸ್ ನೀಡಬೇಕಿತ್ತು ಅಥವಾ ನಮ್ಮ ಗಮನಕ್ಕೆ ತರಬೇಕಿತ್ತು. ಏಕಾಏಕಿ ಕಾಂಪೌಂಡ್ ಬೀಳಿಸಿದ್ದೇಕೆ' ಎಂದು ಮೇರಿ ಸಗಾಯಿ ಪ್ರಶ್ನೆ ಮಾಡಿದ್ದಾರೆ.
ಲಿಂಬಾವಳಿ ಪ್ರತಿಕ್ರಿಯೆ
ಶಾಸಕ ಲಿಂಬಾವಳಿ ಮೇರಿ ಸಗಾಯ್ ಮಾಡಿರುವ ಆರೋಪಗಳನ್ನ ತಳ್ಳಿ ಹಾಕಿದರು. ಮೇರಿ ಸಗಾಯ್ ಅವರು ಸ್ಥಳೀಯ ಕಾಂಗ್ರೆಸ್ ನಾಯಕಿ. ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಒಂಬತ್ತು ತಿಂಗಳಿಂದ ಮೂರು ಬಾರಿ ನೋಟಿಸ್ ನೀಡಿದ್ದರೂ ಒತ್ತುವರಿ ತೆರವು ಮಾಡುತ್ತಿಲ್ಲ. ರಾಜ ಕಾಲುವೆ ಒತ್ತುವರಿಯಿಂದ ಮಳೆ ಸಂದರ್ಭದಲ್ಲಿ ಸುತ್ತಮುತ್ತಲ ಲೇಔಟ್ನಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ಅವರು ನನ್ನ ಮೇಲೆ ಏನೇ ಆರೋಪ ಮಾಡಲಿ. ಒತ್ತುವರಿ ತೆರವುಗೊಳಿಸಿ ಅಂತ ಮನವಿ ಮಾಡಿಕೊಳ್ಳುತ್ತೇನೆ ಎಂದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಮಹಿಳೆಯ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರ ಮಹಿಳೆ ಮೇಲಿನ ದರ್ಪ ಪ್ರದರ್ಶನದ ವಿರುದ್ಧ ಖಂಡಿಸಿ ಇಂದು 3/09/2022ರ ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಕ್ವೀನ್ಸ್ ರಸ್ತೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದೆ.