33 ಕೋಟಿಗೆ 33 ಪ್ರಶ್ನೆ ಕೇಳಿದ್ರೇ ಹೇಗೆ ಕೆಲಸ ಮಾಡೋದು?- ಸುಧಾಕರ್
ಬೆಂಗಳೂರು, ಜುಲೈ 21: ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ '33 ಕೋಟಿಗೆ 33 ಪ್ರಶ್ನೆ ಕೇಳಿದ್ರೇ ಹೇಗೆ ಕೆಲಸ ಮಾಡೋದು?' ಎಂದು ಪ್ರಶ್ನಿಸಿದ್ದಾರೆ.
Recommended Video
'290 ಕೋಟಿಯಷ್ಟು ಇದುವೆರಗೂ ಖರೀದಿಯಾಗಿದೆ. ಇದರಲ್ಲಿ 33 ಕೋಟಿ ಯಷ್ಟು ವೈದ್ಯಕೀಯ ಇಲಾಖೆಯಿಂದ ಖರೀದಿಸಲಾಗಿದೆ. 33 ಕೋಟಿಗೆ 33 ಪ್ರಶ್ನೆ ಕೇಳಿದ್ರೇ ಹೇಗೆ ಕೆಲಸ ಮಾಡೋದು?' ಎಂದು ಕೇಳಿದ್ದಾರೆ.
ಶ್ರೀರಾಮುಲು ಲೆಕ್ಕ ಪಕ್ಕಾ ಇಲ್ಲ ಎಂದ ಸಿದ್ದರಾಮಯ್ಯ: ಮತ್ತೆ ಪ್ರಶ್ನೆಗಳ ಸುರಿಮಳೆ
'ಅಶ್ವಥ್ ನಾರಾಯಣ್, ಶ್ರೀರಾಮುಲು ಅವರು ಸರ್ಕಾರದಿಂದ ಎಲ್ಲವನ್ನೂ ಹೇಳಿದ್ದಾರೆ. ಸುದೀರ್ಘವಾಗಿ ಒಂದೂವರೆ ಗಂಟೆಗಳ ಕಾಲ ಅಂಕಿ ಅಂಶಗಳ ಸಮೇತ ತಿಳಸಿದ್ದಾರೆ. ಏನಾದ್ರೂ ತಪ್ಪಾಗಿದ್ರೇ ರಾಜೀನಾಮೆ ಕೊಡ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಮಂತ್ರಿಯಾದವರು ಇದಕ್ಕಿಂತ ಇನ್ನೇನಾಳೋಕೆ ಆಗುತ್ತೆ' ಎಂದು ತಿರುಗೇಟು ನೀಡಿದ್ದಾರೆ.
'ವೆಂಟಿಲೇಟರ್ ಇಲ್ಲ, ಅದಿಲ್ಲ ಇದಿಲ್ಲ ಅಂತಾ ಹೇಳ್ತೀರಾ. ಮಾಡೋಕೆ ಹೋದ್ರೆ ಈರೀತಿ ಹೇಳ್ತಿರಾ. ಕಾಂಗ್ರೆಸ್ ನವರು ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ. ದೇಶದಲ್ಲಿ ಯಾರು ಕೂಡ ಕೋವಿಡ್ ವಿಚಾರದಲ್ಲಿ ಈ ರೀತಿ ರಾಜಕಾರಣ ಮಾಡಿಲ್ಲ. ದುರಾದೃಷ್ಟವಶಾತ್ ಪಾಪ ಅವರಿಗೆ ಬೇರೆ ವಿಷಯ ಇಲ್ಲ. ರಾಜಕೀಯದಲ್ಲಿ ಉಳಿದುಕೊಳ್ಳಬೇಕು ಎಂದು ಈ ರೀತಿಯ ಹೇಳಿಕೆ ನೀಡ್ತಾರೆ. ಇದು ದುರಂತ' ಎಂದಿದ್ದಾರೆ.
ಕೊರೊನಾ ವೈರಸ್ ನಿರ್ವಹಣೆ ಕುರಿತು ನಿನ್ನೆ ನಡೆದ ಟಾಸ್ಕ್ ಫೋರ್ಸ್ ಅಪೂರ್ಣವಾಗಿತ್ತು. ಇವತ್ತು ಸಭೆ ಮುಂದುವರಿಯುತ್ತಿದೆ. ಸಭೆಗೆ ಹೋಗುವುದಕ್ಕೂ ಮುಂಚೆ ಪ್ರತಿಕ್ರಿಯೆ ನೀಡಿದ ಸುಧಾಕರ್ 'ಏಳೆಂಟು ವಿಷಯಗಳು ಚರ್ಚೆ ಮಾಡಬೇಕಿದೆ. ಪ್ರಮುಖವಾಗಿ ಆಂಟಿಜೆನ್ ಟೆಸ್ಟ್ ವಿಚಾರವಾಗಿ ಚರ್ಚೆ ನಡೆಸುತ್ತಿದ್ದೇವೆ. ಪ್ಲಾಸ್ಮಾ ಬ್ಯಾಂಕ್ ಮಾಡಬೇಕಿದೆ. ಖಾಸಗಿ ಸಹಭಾಗಿತ್ವದಲ್ಲಿ ಇವತ್ತು ಸ್ಥಾಪನೆ ಆಗಲಿದೆ' ಎಂದು ಮಾಹಿತಿ ನೀಡಿದ್ದಾರೆ.
ಶ್ರೀರಾಮುಲು ಅವರು ಮಾತನಾಡಿ '5 ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ ಖರೀದಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇನ್ಮುಂದೆ ಟೆಸ್ಟ್ ಗಳನ್ನು ಜಾಸ್ತಿ ಮಾಡುತ್ತೇವೆ. ಬೆಂಗಳೂರಲ್ಲೇ ೫೦ ರಷ್ಟು ಟೆಸ್ಟ್ ಮಾಡುತ್ತೇವೆ' ಎಂದಿದ್ದಾರೆ. ನಾಳೆ ಬೆಳಗ್ಗೆ ಲಾಕ್ಡೌನ್ ಅಂತ್ಯವಾಗುವ ಹಿನ್ನೆಲೆ 'ಇವತ್ತು ಸಿಎಂ ಮಾರ್ಗಸೂಚಿ ಬಿಡುಗಡೆ ಮಾಡ್ತಾರೆ. ಜನನಿಬಿಡ ಪ್ರದೇಶಗಳಿಗೆ ಪ್ರತ್ಯೇಕ ಮಾರ್ಗಸೂಚಿ ರಚಿಸಲಿದ್ದಾರೆ. ಮಾರ್ಕೆಟ್ ಪ್ರದೇಶಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ ಆಗಲಿದೆ' ಎಂದು ತಿಳಿಸಿದ್ದಾರೆ.