ಕಾಂಗ್ರೆಸ್ ಸದಸ್ಯತ್ವಕ್ಕೆ ಸಚಿವ ಶಂಕರ್ ಹಿಂದೇಟು ನಿಗೂಢ ನಡೆಯ ಗುಟ್ಟೇನು?
Recommended Video

ಬೆಂಗಳೂರು, ಅಕ್ಟೋಬರ್ 16: ಕಾಂಗ್ರೆಸ್ ಸದಸ್ಯತ್ವಕ್ಕೆ ಸಚಿವ ಶಂಕರ್ ಹಿಂದೇಟು ಹಾಕಿದ್ದು ಅವರ ನಡೆಯ ಬಗ್ಗೆ ಪಕ್ಷದಲ್ಲಿ ಇದೀಗ ಗುಸುಗುಸು ಆರಂಭವಾಗಿದೆ. ಹಾಗಾದರೆ ಈ ನಿಗೂಢ ನಡೆಯ ಹಿಂದಿನ ಗುಟ್ಟು ಏನು ಎನ್ನುವುದು ಪ್ರಶ್ನೆಯಾಗಿದೆ.
ಕಾಂಗ್ರೆಸ್ ಕೋಟಾದಲ್ಲಿ ಸಚಿವರಾಗಿರುವ ಅವರು ಅಧಿಕಾರದಲ್ಲಿ ಮುಂದುವರೆಯಬೇಕಾದರೆ, ಒಂದು ಷರತ್ತು ಒಪ್ಪುವಂತೆ ಕಾಂಗ್ರೆಸ್ ನಿರ್ದೇಶನ ನೀಡಿತ್ತು. ಆಪರೇಷನ್ ಕಮಲದ ಪಾಲಾಗದಂತೆ ತಡೆಯಲು ಮೈತ್ರಿ ಸರ್ಕಾರದ ಸುರಕ್ಷತೆ ಸೃಷ್ಟಿಯಿಂದ ಒಂದು ಸೂಚನೆ ನೀಡಲಾಗಿತ್ತು.
ಇದೀಗ ಶಾಸಕಾಂಗ ಪಕ್ಷದ ಸಹ ಸದಸ್ಯತ್ವ ಪಡೆಬೇಕೆಂಬ ಕಾಂಗ್ರೆಸ್ ಸೂಚನೆಗೆ ಮೈತ್ರಿ ಸರ್ಕಾರದಲ್ಲಿ ಅರಣ್ಯ ಖಾತೆ ಪಡೆದುಕೊಂಡಿದ್ದ ಪಕ್ಷೇತರ ಶಾಸಕ ಶಂಕರ್ ನಕಾರ ಸೂಚಿಸಿದ್ದಾರೆ. ಕಾಂಗ್ರೆಸ್ ಸಹ ಸದಸ್ಯತ್ವ ಪಡೆದುಕೊಂಡರೆ ಆ ಪಕ್ಷದ ವಿಪ್ ಪಾಲನೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಒಂದು ವೇಳೆ, ಸಮ್ಮಿಶ್ರ ಸರ್ಕಾರ ಉರುಳಿದರೂ ಕಾಂಗ್ರೆಸ್ ಗೆ ನಿಷ್ಠೆ ಉಳಿಸಿಕೊಂಡೇ ಉಳಿಯಬೇಕಾಗುತ್ತದೆ. ಸಮೀಪದ ಬಂಧುವಾದ ಬಿಜೆಪಿ ನಾಯಕರೊಬ್ಬರ ಸಲಹೆಯಂತೆ ಕಾಂಗ್ರೆಸ್ನ ಈ ನಿಯಮ ಪಾಲಿಸಲು ಶಂಕರ್ ಒಪ್ಪಿಲ್ಲ ಎನ್ನಲಾಗುತ್ತಿದೆ. ಪ್ರಜಾಕೀಯ ಪಕ್ಷದಿಂದ ಆಯ್ಕೆಯಾಗಿ ಬಂದಿರುವ ತಮಗೂ, ಕಾಂಗ್ರೆಸ್ಗೂ ಸಂಬಂಧವಿಲ್ಲ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿ ಸಚಿವನಾಗಿದ್ದು, ಕಾಂಗ್ರೆಸ್ ಸಹ ಸದಸ್ಯತ್ವ ಹೇಗೆ ಪಡೆದುಕೊಳ್ಳಲಿ ಎಂದು ಶಂಕರ್ ಪ್ರಶ್ನಿಸಿದ್ದಾರೆ.
ಭವಿಷ್ಯದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಶಂಕರ್ ಅವರು ಕಾಂಗ್ರೆಸ್ ಸೂಚನೆ ಪಾಲನೆ ಮಾಡದಿರಲು ನಿರ್ಧರಿಸಿದ್ದಾರೆ.

ಮಹೇಶ್ ರಾಜಿನಾಮೆ ಬೆನ್ನಲ್ಲೇ ಹಠ ಹಿಡಿದ ಶಂಕರ್
ಒಂದೆಡೆ ಜೆಡಿಎಸ್ ನ ಭಾಗವಾಗಿದ್ದ ಬಿಎಸ್ಪಿಯ ಎನ್ ಶಂಕರ್ ಪಕ್ಷದ ಮುಖ್ಯಸ್ಥೆ ಮಾಯಾವತಿಯ ನಿರ್ದೇಶನದ ಮೇರೆಗೆ ರಾಜಿನಾಮೆ ನೀಡಿರುವುದು ಈಗಾಗಲೇ ಸಮ್ಮಿಶ್ರ ಸರ್ಕಾರಕ್ಕೆ ಸಂದಿಗ್ದತೆಯಲ್ಲಿ ಸಿಲುಕಿಸಿದೆ. ಈ ಮಧ್ಯೆ ಪಕ್ಷೇತರರಾಗಿ ಆಯ್ಕೆಯಾಗಿರುವ ಆರ್ ಶಂಕರ್ ಕಳೆದ ನಾಲ್ಕು ತಿಂಗಳಿಂದ ಸಚಿವ ಸ್ಥಾನ ಅನುಭವಿಸಿಯೂ ಕಾಂಗ್ರೆಸ್ ನ ಸದಸ್ಯತ್ವ ಪಡೆಯದಿರುವುದು ಕಾಂಗ್ರೆಸ್ ಗೆ ಮುಳ್ಳಾಗಿ ಪರಿಣಮಿಸಿದೆ. ಕಾಂಗ್ರೆಸ್ ನಿಂದ ಸಚಿವ ಸ್ಥಾನಕ್ಕಾಗಿ ದಶಕಗಳ ಕಾಲದಿಂದ ಪಕ್ಷದಲ್ಲಿರುವ ಕಾಂಗ್ರೆಸಿಗರೇ ಪರಿತಪಿಸುತ್ತಿರುವಾಗ ನಿನ್ನೆ-ಮೊನ್ನೆ ಬಂದ ಶಂಕರ್ ಗೆ ಅನಾಯಾಸವಾಗಿ ದೊರೆತಿರುವ ಸಚಿವ ಸ್ಥಾನ ಹೊರತಾಗಿಯೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯದಿರುವುದು ಪಕ್ಷದ ಮುಖಂಡರ ಕಣ್ಣನ್ನು ಕೆಂಪಗಾಗಿಸಿದೆ.

ಬಿಜೆಪಿಯಲ್ಲೂ ಅಧಿಕಾರದ ಕಣ್ಣಿಟ್ಟಿದ್ದಾರಾ ಶಂಕರ್
ಕಳೆದ ನಾಲ್ಕು ತಿಂಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಶಂಕರ್ ಒಂದು ವೇಳೆ ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಂತರ ಸರ್ಕಾರ ಪತನಗೊಂಡರೆ ಬಿಜೆಪಿಗೆ ಬೆಂಬಲ ಸೂಚಿಸಿ ಅಲ್ಲಿಯೂ ಸಚಿವರಾಗಬೇಕೆಂಬ ಆಲೋಚನೆಯಿದ್ದಾರೆ ಕಾಂಗ್ರೆಸ್ ಪಕ್ಷದ ಮೂಲಗಳು ಹೇಳುತ್ತಿವೆ. ಒದು ವೇಳೆ ಶಂಕರ್ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡರೆ, ಬಿಜೆಪಿಗೆ ಸೇರ್ಪಡೆಗೊಂಡು ಮುಂದೆ ರಚನೆಯಾಗಬಹುದಾದ ಸರ್ಕಾರದಲ್ಲಿ ಒಳ್ಳೆಯ ಸ್ಥಾನ ಪಡೆಯಬೇಕಾದರೆ ಅವರು ಕಾಂಗ್ರೆಸ್ ಸದಸ್ಯತ್ವವನ್ನು ಪಡೆಯುವಂತಿಲ್ಲ, ಈ ತಾಂತ್ರಿಕ ಕಾರಣಕ್ಕಾಗಿಯೇ ಕಾಂಗ್ರೆಸ್ ನ ಸದಸ್ಯತ್ವ ಪಡೆಯಲು ಶಂಕರ್ ಹಿಂದೇಟು ಹಾಕುತ್ತಿದ್ದು, ಲೋಕಸಭೆ ಚುನಾವಣೆಯವರೆಗೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಶಂಕರ್ ಹಠವನ್ನು ಸಹಿಸುತ್ತಾರಾ ಸಿದ್ದರಾಮಯ್ಯ
ಒಂದೆಡೆ ಸಚಿವ ಆರ್ ಶಂಕರ್ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಹಿಂದೇಟು ಹಾಕುತ್ತಿದ್ದರೂ ಕಾಂಗ್ರೆಸ್ ನ ಹಿರಿಯ ಮುಖಂಡ ಸಿದ್ದರಾಮಯ್ಯ ಶಂಕರ್ ಅವರನ್ನು ತಾಕೀತು ಮಾಡದಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆ ಸಿದ್ದರಾಮಯ್ಯ ಅವರ ಮಾತನ್ನು ಕೇಳಿಯೇ ಪಕ್ಷೇತರರಾಗಿದ್ದ ಆರ್ ಶಂಕರ್ ಅವರಿಗೆ ಸಚಿವ ಸ್ಥಾನವನ್ನು ಕೊಟ್ಟಿದೆ. ರಾಜ್ಯದಲ್ಲಿ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರೂ ಆ ಪೈಕಿ ಶಂಕರ್ ಅವರಿಗೆ ಸಚಿವ ಸ್ಥಾನಕೊಟ್ಟು ಮತ್ತೊಬ್ಬ ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಈವರೆಗೂ ಸಚಿವ ಸ್ಥಾನ ನೀಡದಿರುವುದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆರ್ ಶಂಕರ್ ಅವರಉ ಕಾಂಗ್ರೆಸ್ ಸದಸ್ಯತ್ವ ಪಡೆಯುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.

ಸಹಸದಸ್ಯತ್ವ ಪಡೆಯದಿರಲು ಬಿಜೆಪಿ ಕಾರಣವೇ
ಶಂಕರ್ ಈವರೆಗೂ ಕಾಂಗ್ರೆಸ್ ನ ಸಹ ಸದಸ್ಯತ್ವ ಪಡೆಯದಿರುವುದು ಬಿಜೆಪಿಯಲ್ಲಿರುವ ಶಂಕರ್ ದೂರದ ಸಂಬಂಧಿಯೊಬ್ಬರೇ ಕಾರಣ ಎನ್ನುವ ಗುಮಾನಿ ಇದೆ. ಈ ಹಿಂದೆ2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಆಪರೇಷನ್ ಕಮಲದ ಮೂಲಕ ಕೆಲವು ಶಾಸಕರನ್ನು ಸೆಳೆಯಲಾಗಿತ್ತು. ಆ ವೇಳೆ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯುವ ವಿಚಾರದಲ್ಲಿ ಆರು ಜನ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈಗಲೂ ಕೂಡ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬಿಗಡಾಯಿಸದರೆ ಸರ್ಕಾರದಿಂದ ಹೊರಬಂದು ಬೇರೊಂದು ಸರ್ಕಾರದೊಂದಿಗೆ ಕೈ ಜೋಡಿಸಲು ತಾಂತ್ರಿಕ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಸಚಿವ ಆರ. ಶಂಕರ್ ಅವರನ್ನು ಕಾಡುತ್ತಿದೆ. ಈ ಕುರಿತಂತೆ ಬಿಜೆಪಿ ಹಿರಿಯ ನಾಯಕರೊಬ್ಬರು ಶಂಕರ್ ಅವರಿಗೆ ಸಲಹೆ ಮಾಡಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications