ಬಿಜೆಪಿಯವರಿಗೆ ಲಂಗು-ಲಗಾಮು ಇಲ್ಲ: ಎಂಸಿ ಮನಗೂಳಿ ಟೀಕೆ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 19: ಬಿಜೆಪಿ ನಾಯಕರು ಲಂಗು-ಲಗಾಮಿಲ್ಲದವರು, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ನು ಮುಂದಾದರೂ ಲಂಗು-ಲಗಾಮಿನಲ್ಲಿ ವರ್ತಿಸಲಿ ಎಂದು ತೋಟಗಾರಿಕೆ ಸಚಿವ ಎಂಸಿ ಮನಗೂಳಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡುವುದು ಬಿಜೆಪಿಗೆ ಹೊಸದಲ್ಲ, ಈ ಹಿಂದೆ ಆಪರೇಷನ್ ಕಮಲ ಮಾಡಿ ಏನೇನು ನಡೆಯಿತು ಎಂದು ಜನರಿಗೆ ಗೊತ್ತಿದೆ. ಮತ್ತೆ ಎಂಟು, ಹತ್ತು ಜನರನ್ನು ಆಪರೇಷನ್ ಮಾಡಲು ಹೊರಟಿದ್ದಾರೆ, ಈ ಬಾರಿ ಅವರ ಪ್ರಯತ್ನ ಫಲ ನೀಡುವುದಿಲ್ಲ.
ಯಡಿಯೂರಪ್ಪಗೆ ಈಗ ವಯಸ್ಸಾಗಿದೆ ಇನ್ನು ಮುಂದಾದರೂ ಒಳ್ಳೆಯ ಬುದ್ಧಿ ಕಲಿಯಬೇಕು, ಯಡಿಯೂರಪ್ಪ ಮಾತ್ರವಲ್ಲ, ಬಿಜೆಪಿ ನಾಯಕರೆಲ್ಲ ಲಂಗು-ಲಗಾಮಿಲ್ಲದಂತಹ ವರ್ತನೆಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ರಾಜ್ಯದಲ್ಲಿ ರೈತರ ಪರ ತೆಗೆದುಕೊಳ್ಳುತ್ತಿರುವ ತೀರ್ಮಾನಗಳನ್ನು ಸಹಿಸಿಕೊಳ್ಳಲು ಯಡಿಯೂರಪ್ಪಗೆ ಸಾಧ್ಯವಾಗುತ್ತಿಲ್ಲ, ರೈತರ ಸಾಲ ಮನ್ನಾ ಮಾಡಿರುವುದರಿಂದ ಬಿಜೆಪಿ ನಾಯಕರಿಗೆ ಒಳಗೊಳಗೆ ಸಂಕಟವಾಗುತ್ತಿದೆ.
ದಿನಬೆಳಗಾದರೆ ಮಾಧ್ಯಮಗಳಲ್ಲಿ ಸರ್ಕಾರ ಅಸ್ಥಿರ ಎಂದು ಬೊಬ್ಬೆ ಹಾಕುತ್ತಿರುವುದು ಬಿಜೆಪಿ ನಾಯಕರೇ ಹೊರತು ಕಾಂಗ್ರೆಸ್ ಪಕ್ಷದವರಲ್ಲ. ಸಮ್ಮಿಶ್ರ ಸರ್ಕಾರದಲ್ಲಿರುವ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗೆಹರಿಸಿದ್ದಾರೆ, ಇನ್ನುಮುಂದೆ ಬಿಜೆಪಿಯ ಆಟ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.











Click it and Unblock the Notifications