ರೆಡ್ ಜೋನ್ ಪಾದರಾಯನಪುರಕ್ಕೆ ಸಚಿವ ಡಾ. ಸುಧಾಕರ್ ಭೇಟಿ
ಬೆಂಗಳೂರು, ಮೇ 8: ಬೆಂಗಳೂರಿನಲ್ಲಿ ಕೆಂಪುವಲಯದಲ್ಲಿರುವ ಪಾದರಾಯನಪುರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಇಂದು ಭೇಟಿ ನೀಡಿ ಕೋವಿಡ್-19 ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.
ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಷಾ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರ ಜತೆ ಸಮಾಲೋಚಿಸಿ ಸೋಂಕು ಹರಡದಂತೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಕಂಟೈನ್ಮೆಂಟ್ ಪ್ರದೇಶದಲ್ಲಿರುವ ಏಳೂವರೆ ಸಾವಿರ ಮನೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವುದರಿಂದ ಸೋಂಕು ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದಾಗ, ಪ್ರತಿಕ್ರಿಯಿಸಿದ ಸಚಿವರು, ಸೋಂಕು ಹರಡುವಿಕೆ ಸರಪಳಿಯನ್ನು ತುಂಡರಿಸಲು ಟೆಸ್ಟ್ ಸಂಖ್ಯೆ ಹೆಚ್ಚಿಸುವುದು, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಅನಗತ್ಯ ತಿರುಗಾಟಕ್ಕೆ ಕಟ್ಟುನಿಟ್ಟಾಗಿ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಂಪು ವಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಏಳು ಸಾವಿರದ ಐನೂರು ಮನೆಗಳಲ್ಲಿರುವ ಹಿರಿಯ ನಾಗರಿಕರನ್ನು ಸೋಂಕು ತಪಾಸಣೆಗೆ ಒಳಪಡಿಸುವಂತೆ ಸೂಚನೆ ನೀಡಿದ ಸಚಿವ ಡಾ.ಸುಧಾಕರ್, ಹೆಚ್ಚಿನ ಸ್ಯಾಂಪಲ್ ಪರೀಕ್ಷೆಗೆ ಅವಕಾಶ ಇರುವ ಕಿದ್ವಾಯಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆದೇಶ ನೀಡಿದರು. ಸ್ಯಾಂಪಲ್ ಸಂಗ್ರಹಕ್ಕೆ ಮೊಬೈಲ್ ಕಿಯಾಸ್ಕ್ ಗಳನ್ನು ಆ ವಾರ್ಡಿಗೆ ಕಳಿಸುವಂತೆ ಅಧಿಕಾರಿಗಳಿಗೆ ಡಾ.ಸುಧಾಕರ್ ಸ್ಥಳದಲ್ಲಿಯೇ ಆದೇಶಿಸಿದರು.












Click it and Unblock the Notifications