ವಿಜಯೇಂದ್ರ ನಡುವೆ ಶೀತಲ ಸಮರ: ಶ್ರೀರಾಮುಲು ಆಪ್ತ ರಾಜಣ್ಣ ಬಂಧನ ನಾಟಕ
ಬೆಂಗಳೂರು, ಜೂ. 02: ಸರ್ಕಾರದ ಕೆಲಸ ಕೊಡಿಸುವ ಹೆಸರಿನಲ್ಲಿ ವಂಚನೆ ಮಾಡಿರುವ ಆರೋಪದಡಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ರಾಜಣ್ಣನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಜಣ್ಣ ಅವರ ಮೊಬೈಲ್ ಪಡೆದು ಪರಿಶೀಲನೆ ನಡೆಸಿದ್ದು, ಅವರ ಸಂಪರ್ಕದಲ್ಲಿರುವರ ವಿಚಾರಣೆಗೆ ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
Recommended Video

ಬಂಧನ ನಾಟಕ ಮುಕ್ತಾಯ: ಪ್ರಕರಣ ಕುರಿತು ಸ್ಪಷ್ಟನೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕಳೆದ ಸಂಜೆ ರಾಜಣ್ಣ ಎಂಬುವರನ್ನು ವಿಚಾರಣೆಗೆ ಒಳಪಡಿಸಲು ವಶಕ್ಕೆ ಪಡೆದಿದ್ದೆವು. ಎಸಿಪಿ ನಾಗರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ರಾಜಣ್ಣ ಧ್ವನಿ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಉದ್ಯಮಿ ಸೇರಿದಂತೆ ಹಲವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮಾತನಾಡಿರುವ ಅಡಿಯೋಗಳನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆದಿದೆ. ಅಗತ್ಯ ಬಿದ್ದರೆ ತನಿಖಾಧಿಕಾರಿ ಎದುರು ಹಾಜರಾಗಲು ಸೂಚಿಸಲಾಗಿದೆ. ಮುಂದೆ ಅಗತ್ಯ ಬಿದ್ದರೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಂತು ಗುರುವಾರ ರಾತ್ರಿಯಿಂದ ನಡೆದ ಬಂಧನದ ನಾಟಕ ಕೊನೆಗೂ ವಿಚಾರಣೆಯೊಂದಿಗೆ ಅಂತ್ಯವಾಗಿದೆ. ಮುಂದೆ ಓದಿ...

ರಾಜಣ್ಣ ತನ್ನ ಆಪ್ತ ಅಲ್ಲ.
ರಾಜಣ್ಣ ಗೊತ್ತಿರುವ ಹುಡುಗ. ಆತನ ಹೆಸರಿನಲ್ಲಿ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಆತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಿ. ವಿಚಾರವನ್ನು ನನ್ನ ಗಮನಕ್ಕೆ ತರದೇ ವಿಜಯೇಂದ್ರ ದೂರು ನೀಡಿದ್ದಾರೆ. ಪಕ್ಷದಲ್ಲಿ ಹಿರಿಯರಿಗೆ ಅವಮಾನ ಅಗುತ್ತಿದೆ ಎಂಬ ಹೇಳಿಕೆ ನೀಡುವ ಮೂಲಕ ತಮ್ಮ ಅಸಮಾಧಾನವನ್ನು ಶ್ರೀರಾಮುಲು ಹೊರ ಹಾಕಿದ್ದರು. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ. ವಿಜಯೇಂದ್ರ ಅವರ ಗಮನಕ್ಕೂ ತರುತ್ತೇನೆ ಎಂದು ರಾಮುಲು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯೆ ನೀಡಿ, ರಾಜು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮುಂದೆ ಅಗತ್ಯ ಬಿದ್ದರೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ವಂಚಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ
ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ರಾಜಣ್ಣ ವಿರುದ್ಧ ದೂರು ನೀಡಿದ್ದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ. ಸಾರ್ವಜನಿಕರು ಮೋಸ ಹೋಗಬಾರದು ಎಂಬ ಹಿತದೃಷ್ಟಿಯಿಂದ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ನನ್ನನ್ನು ಸೇರಿದಂತೆ ಸಾರ್ವಜನಿಕ ಜೀವನದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಮಾಜ ಕಲ್ಯಾಣ ಸಚಿವರಿಗೂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ವಿವಾದದ ಮೂಲವೇನು
ಉದ್ಯಮಿಯೊಬ್ಬರಿಗೆ ಸರ್ಕಾರದಿಂದ ಕೆಲಸ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರು ಹೇಳಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಬಿ. ಶ್ರೀರಾಮುಲು ಆಪ್ತ ರಾಜಣ್ಣ ನಡೆಸಿರುವ ಸಂಭಾಷಣೆ ಅಡಿಯೋ ತುಣುಕುಗಳು ಸಿಕ್ಕಿದ್ದು, ಇದನ್ನು ಆಧರಿಸಿ ಉದ್ಯಮಿ ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಜಯೇಂದ್ರ ತನ್ನ ಹೆಸರು ದುರ್ಬಳಕೆ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ರಾಜಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಮೊಬೈಲ್ ನಲ್ಲಿದ್ದ ಹಲವು ಕಾಲ್ ರೆಕಾರ್ಡ್ ಅಡಿಯೋ ತುಣುಕುಗಳು ಸಿಕ್ಕಿವೆ. ಇದರ ಜತೆಗೆ ಮೊಬೈಲ್ ಕರೆಗಳ ವಿವರ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮೂರು ಅಡಿಯೋ ವಶ
ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ವಂಚನೆ ಪ್ರಕರಣ ಸಂಬಂಧ ಮೂರು ಅಡಿಯೋಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲ ವಿಡಿಯೋದಲ್ಲಿ 70 ಲಕ್ಷ ರೂ. ಬೇಡಿಕೆ ಇಟ್ಟಿರುವ ಸಂಗತಿ ಒಳಗೊಂಡಿದೆ. ಮತ್ತೊಂದು ವಿಡಿಯೋದಲ್ಲಿ ಎರಡು ಕೋಟಿ ರೂ. ಬೇಡಿಕೆ ಮತ್ತೊಂದು ಅಡಿಯೋದಲ್ಲಿ 1 ಕೋಟಿ ರೂ. ಬೇಡಿಕೆ ಇಟ್ಟಿರುವ ಅಡಿಯೋಗಳು ಸಿಕ್ಕಿವೆ. ಗುತ್ತಿಗೆದಾರನೊಬ್ಬ ಕಾಮಗಾರಿ ಕೊಡಿಸುವ ಸಂಬಂಧ ರಾಜು ಮಾತನಾಡಿದ್ದ ಎನ್ನಲಾಗಿದೆ. ಅಡಿಯೋಗೂ ನನಗೂ ಸಂಬಂಧವಿಲ್ಲ. ವಿಜಯೇಂದ್ರ ಹೆಸರನ್ನು ಬಳಸಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.












Click it and Unblock the Notifications