ನಾಲ್ಕನೇ ದಿನಕ್ಕೆ ಪ್ರತಿಭಟನೆ, ಪಟ್ಟು ಬಿಡದ ಬಿಸಿಊಟ ಕಾರ್ಯಕರ್ತೆಯರು
ಬೆಂಗಳೂರು, ಫೆಬ್ರವರಿ 09: ನೌಕರಿ ಖಾಯಂ, ವೇತನ ಹೆಚ್ಚಳ, ಉದ್ಯೋಗ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಬಿಸಿಊಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ನಲ್ಲಿ ಮಾಡುತ್ತಿರುವ ಅಹೊರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದದಾದ್ಯಂತದಿಂದ ನಗರದ ಫ್ರೀಡಂ ಪಾರ್ಕ್ಗೆ ಆಗಮಿಸಿರುವ ಬಿಸಿಊಟ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದು, ರಸ್ತೆಯಲ್ಲೇ ಮಲಗಿ, ರಸ್ತೆಯಲ್ಲೇ ಉಂಡು ಕಠಿಣ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಸರ್ಕಾರ, ಕಾರ್ಮಿಕರ ಮಧ್ಯದ ಬಿಕ್ಕಟ್ಟು: ಮಕ್ಕಳಿಗೆ ಉಪವಾಸ
ನಿನ್ನೆ ವಿಧಾನಸೌಧ ಮುತ್ತಿಗೆಗೆ ಪ್ರಯತ್ನ ಮಾಡಿದ್ದ ಕಾರ್ಯಕರ್ತೆಯರು ಇಂದೂ ಸಹ ಮಧ್ಯಾಹ್ನದ ಒಳಗೆ ಮುಖ್ಯಮಂತ್ರಿಗಳು ಬೇಡಿಕೆ ಆಲಿಸಲು ಬರದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಫ್ರೀಡಂ ಪರ್ಕ್ನಲ್ಲಿ 1000 ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಿದೆ. 3 ಡಿಸಿಪಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, 10 ಮಂದಿ ಪಿಎಸ್ಐಗಳು, ಹಾಗೂ 5 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಹಾಗೂ ಎರಡು ವಾಟರ್ ಜೆಟ್ಗಳನ್ನು ಸ್ಥಳಕ್ಕೆ ಕರೆಸಲಾಗಿದೆ.
ಇಂದು ಮುಂಜಾನೆಯಿಂದ ಇಬ್ಬರು ಪ್ರತಿಭಟನಾಕಾರರು ಅಸ್ವಸ್ಥರಾಗಿದ್ದು, ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಾರೆ ನಾಲ್ಕು ದಿನದಿಂದ 24 ಮಂದಿ ಮಹಿಳೆಯರು ಅಸ್ವಸ್ಥರಾಗಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರಿಗೆ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಹಲವು ಸಂಘ ಸಂಸ್ಥೆಗಳು ರಾತ್ರಿ ಮಲಗಲು ಹಾಸಿಗೆ ದಿಂಬುಗಳನ್ನು ನೀಡಿ ಮಾನವೀಯತೆ ಮೆರೆದಿವೆ. ಇಂದು ಜೆಡಿಎಸ್ ಎಂಎಲ್ಸಿ ಶರವಣ ಅವರು ಪ್ರತಿಭಟನಾ ನಿರತ ಮಹಿಳೆಯರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿಯೂ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಮಾರ್ಧನಿಸಿದ್ದು, ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಗಳು ಪ್ರತಿಭಟನಾ ನಿರತರೊಂದಿಗೆ ಮಾತನಾಡಲು ಆಹ್ವಾನ ನೀಡಿದ್ದಾರೆ.
ಮಧ್ಯಾಹ್ನದ ವೇಳೆಗೆ, ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಕರ್ನಾಟಕ ಅಕ್ಷರದಾಸೋಹ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಿಐಟಿಯು ಸದಸ್ಯರು ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.