ಬಿಜೆಪಿ ಅಸಮಾಧಾನ ಸ್ಫೋಟ, ಬಿಎಸ್ವೈ ಬಗ್ಗೆ 2 ಪುಟಗಳ ಪತ್ರ ಬರೆದ ನಾಯಕರು
ಬಿಜೆಪಿ ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿಯ ಐವರು ಶಾಸಕರೂ ಸೇರಿ 24 ಮಂದಿ ಪತ್ರ ಬರೆದಿದ್ದಾರೆ
Recommended Video
ಬೆಂಗಳೂರು, ಜನವರಿ 14: ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಧ್ವನಿ ಎತ್ತಿರುವ ಕೆ.ಎಸ್.ಈಶ್ವರಪ್ಪ ಮತ್ತಷ್ಟು ಬೆಂಬಲ ಪಡೆಯುವ ಸಾಧ್ಯತೆ ಇದೆ. ಬಿಜೆಪಿಯ ಎರಡನೇ ಹಂತದ ನಾಯಕರು, ಕೆಲವು ಹಾಲಿ ಶಾಸಕರು ಸೇರಿ 24 ಮಂದಿ ಪತ್ರ ಬರೆದಿದ್ದು, ಯಡಿಯೂರಪ್ಪನವರ ಕಾರ್ಯವೈಖರಿಯಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿರುವುದಾಗಿ ತಿಳಿದುಬಂದಿದೆ.
ಬಿಎಸ್ ವೈ ಹಾಗೂ ಈಶ್ವರಪ್ಪ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದ ವೇಳೆಯಲ್ಲೇ ಈ ಪತ್ರ ಬರೆದಿರುವುದು ಗಮನ ಸೆಳೆಯುತ್ತಿದೆ. ಎರಡು ಪುಟಗಳ ಪತ್ರಕ್ಕೆ ಶಾಸಕರಾದ ಎಂ.ಬಿ.ಭಾನುಪ್ರಕಾಶ್, ರಘುನಾಥ್ ರಾವ್ ಮಲ್ಕಾಪುರೆ, ಸೋಮಣ್ಣ ಬೇವಿನಮರದ್, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಶಿವಣ್ಣ, ಎಸ್.ಎ.ರವೀಂದ್ರನಾಥ್ ಮತ್ತಿತರರು ಸಹಿ ಹಾಕಿರುವುದಾಗಿ ತಿಳಿದುಬಂದಿದೆ.[ಪ್ರಾಣ ಹೋದರೂ ಬಿಜೆಪಿ ಬಿಡುವ ಮಾತಿಲ್ಲ: ಈಶ್ವರಪ್ಪ]
ಪಕ್ಷದ ಪದಾಧಿಕಾರಿಗಳ ಆಯ್ಕೆ, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಮತ್ತಿತರ ಆಯ್ಕೆಗಳಲ್ಲಿ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಿದಂತಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ. ಪಕ್ಷದ ಕೋರ್ ಸಮಿತಿ ಒಪ್ಪಿಗೆ ಪಡೆಯದೆ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇವೇ ಪ್ರಶ್ನೆಗಳನ್ನು ಈಶ್ವರಪ್ಪ ಸಹ ಎತ್ತಿದ್ದರು.
ಬರಪರಿಸ್ಥಿತಿ ಅಧ್ಯಯನ ತಂಡದಿಂದ ಈಶ್ವರಪ್ಪನವರಂಥ ಹಿರಿಯ ನಾಯಕರನ್ನು ಕೈ ಬಿಟ್ಟ ನಿರ್ಧಾರದ ಹಿಂದೆ ಎಇರುವ ಕಾರಣಗಳನ್ನು ಕೇಳಲಾಗಿದೆ. ಅದೇ ರೀತಿ, ನಿರ್ಧಾರ ತೆಗೆದುಕೊಳ್ಳುವಾಗ ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಪಕ್ಷದ ಪದಾಧಿಕಾರಿಗಳ ಆಯ್ಕೆಯನ್ನು ಪುನರ್ ಪರಿಶೀಲಿಸಬೇಕು, ಪದಾಧಿಕಾರಿಗಳ ಆಯ್ಕೆ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಪ್ರಾಶಸ್ತ್ಯ ನೀಡಬೇಕು.[ಬ್ರಿಗೇಡ್: ಯಡ್ಡಿ-ಈಶು ಜಗಳ, ಬಿಜೆಪಿ ಸದಸ್ಯರು ವಿಲವಿಲ]
ಸೊಗಡು ಶಿವಣ್ಣ ಹಾಗೂ ಎಂ.ಬಿ.ನಂದೀಶ್ ಅವರಿಗೆ ನೀಡಿದ ಶೋಕಾಸ್ ನೋಟಿಸ್ ಹಿಂಪಡೆಯಬೇಕು, ಬಿಜೆಪಿ ಹೊನ್ನಾಳಿ ಘಟಕದ ಅಧ್ಯಕ್ಷರಾಗಿದ್ದ ಹನುಮಂತಪ್ಪ ಅವರ ಅಮಾನತು ನಿರ್ಧಾರ ಹಿಂಪಡೆಯಬೇಕು ಎಂದು ಪತ್ರದಲ್ಲಿ ಬರೆಯಲಾಗಿತ್ತು ಮಲ್ಕಾಪುರೆ ಒಪ್ಪಿಕೊಂಡಿದ್ದಾರೆ. ಆದರೆ ಈ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರಲಿಲ್ಲ ಎಂದಿದ್ದಾರೆ.
ಆದರೆ, ಮಾಧ್ಯಮದ ಮೂಲಕ ಭಾನುಪ್ರಕಾಶ್ ತಮ್ಮ ಅಸಮಾಧಾನ ತೋಡಿಕೊಂಡಿರುವುದಕ್ಕೆ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ರಾಜ್ಯ ಕೋರ್ ಸಮಿತಿಯು ಜನವರಿ 21ರಿಂದ 23ರವರೆಗೆ ಬೆಳಗಾವಿಯಲ್ಲಿ ಸಭೆ ಕರೆದಿದೆ. ಸಮಸ್ಯೆಗಳಿದ್ದಲ್ಲಿ ಭಾನುಪ್ರಕಾಶ್ ಅಲ್ಲಿ ಹೇಳಬಹುದಿತ್ತು. ಮಾಧ್ಯಮಗಳ ಬಳಿಗೆ ಹೋಗಿದ್ದು ಸರಿಯಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಯಾವುದೇ ಕಾರಣಕ್ಕೆ ಪದಾಧಿಕಾರಿಗಳ ಬದಲಾವಣೆ ಮಾಡುವುದು ಸಾಧ್ಯವಿಲ್ಲ. ಅವರಿಗೆ ಅಸಮಾಧಾನವಿದ್ದರೆ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಅವರ ಬಳಿ ಹೇಳಿಕೊಳ್ಳಲಿ ಎಂದಿದ್ದಾರೆ ಯಡಿಯೂರಪ್ಪ.