ಬೆಂಗಳೂರು : ಸುರಕ್ಷಿತ ದೀಪಾವಳಿಗೆ 'ಮೇಘ'ರಿಕ್ ಸಂದೇಶ
ಬೆಂಗಳೂರು, ನವೆಂಬರ್ 07 : ಅಂಧಕಾರವನ್ನು ಮೆಟ್ಟಿನಿಂತು ಬೆಳಕನು ಚೆಲ್ಲಿ ಬಂದೇಬಂತು ದೀಪಾವಳಿ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಸಂತಸದ ಬುಗ್ಗೆಯುಕ್ಕಿಸುವ ಬೆಳಕಿನ ಹಬ್ಬವಿದು. ನವೆಂಬರ್ 10ರಿಂದ 12 ನಾಡಿನಾದ್ಯಂತ ಮನೆಗಳಲ್ಲಿ, ಬೀದಿಗಳಲ್ಲಿ, ದೇಗುಲಗಳಲ್ಲಿ ಮಿಣುಕುವ ದೀಪಗಳು ಸಂಭ್ರಮಿಸಲಿವೆ.
ಖುಷಿಪಡುವ ಭರದಲ್ಲಿ ಪ್ರತೀವರ್ಷ ಅತ್ಯಮೂಲ್ಯವಾದ ಕಣ್ಣುಗಳನ್ನು ಕಳೆದುಕೊಳ್ಳುವ ಮಕ್ಕಳೆಷ್ಟು? ಲೆಕ್ಕ ಹಾಕಿದ್ದೀರಾ? ಹೆಚ್ಚುಕಡಿಮೆಯಾದರೂ ಶುಶ್ರೂಷೆ ಮಾಡಲು ಮಿಂಟೋ, ನಾರಾಯಣ, ಅಗರವಾಲ್ ಮುಂತಾದ ಕಣ್ಣಿನ ಆಸ್ಪತ್ರೆಗಳಿವೆಯಾದರೂ ಕಣ್ಣನ್ನು ಕಳೆದುಕೊಳ್ಳುವಂಥ ಕೆಲಸ ಯಾಕೆ ಮಾಡಬೇಕು?
ವಾಯುಮಾಲಿನ್ಯದಿಂದ ಬೆಂಗಳೂರು ಉಸಿರಾಡಿಸಲು ಈಗಾಗಲೆ ಕಷ್ಟಪಡುತ್ತಿದೆ. ಮರಗಳು ಕಣ್ಮರೆಯಾಗುತ್ತಿವೆ. ರಸ್ತೆ ರಸ್ತೆಗಳಲ್ಲೆಲ್ಲಾ ಧೂಳಿನೊಂದಿಗೆ ಕಾರ್ಬನ್ ಡೈಆಕ್ಸೈಡ್ ಹಾವಳಿ. ಪರಿಸರವನ್ನು ಯಾಕೆ ಹಾಳುಗೆಡವಬೇಕು? ನಮಗೂ ಸಾಮಾಜಿಕ ಜವಾಬ್ದಾರಿ ಇರಬೇಕಲ್ಲವೆ? ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಪರಿಸರ ಉಳಿಕೆಗಾಗಿ ಪಟಾಕಿ ಹಾರಿಸುವುದನ್ನು ಕೈಬಿಡಬೇಕೆಂಬ ಜಾಗೃತಿ ಮೂಡುತ್ತಿದೆ.
ಪಟಾಕಿ ಹಾರಿಸಿ ಬೇಡವೆನ್ನುವುದಿಲ್ಲ. ಆದರೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ ಎಂದು ನಗರ ಪೊಲೀಸ್ ಆಯುಕ್ತರಾದ ಎನ್.ಎಸ್. ಮೇಘರಿಕ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

1. ರಾತ್ರಿ ಪಟಾಕಿ ಹಚ್ಚುವಂತಿಲ್ಲ
ಸಾರ್ವಜನಿಕರು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸಬಾರದು.

2. ಪಟಾಕಿಗಳಿಂದ ಪರಿಸರ ಹಾನಿ
ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಿ ಪರಿಸರ ಹಾನಿ ಮಾಡುವುದರ ಬದಲಿಗೆ ಹಣತೆಗಳನ್ನು ಹಚ್ಚಿ ಹಬ್ಬವನ್ನು ಆಚರಿಸುವುದು.

3. ಕಣ್ಣು ಕಳೆದುಕೊಳ್ಳಬೇಡಿ, ಪ್ಲೀಸ್
ಬೆಳಕಿನ ಹಬ್ಬ ಜೀವನದ ಕತ್ತಲೆಗೆ ನಾಂದಿ ಹಾಡಬಾರದು. ಕಣ್ಣುಗಳು ದೇವರು ಕೊಟ್ಟಂತಹ ಅತ್ಯುದ್ಭುತ ಅಂಗ. ಇವುಗಳನ್ನು ಕಳೆದುಕೊಂಡು ಜೀವನವು ಕತ್ತಲಿನಲ್ಲಿ ಮುಕ್ತಾಯವಾಗಬಾರದು.

4. ಸಂಭ್ರಮ ರೋದನದಲ್ಲಿ ಕೊನೆಗೊಳ್ಳಬಾರದು
ಈ ಹಿಂದೆ ಮಿಂಟೋ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯ, ಅಗರ್ವಾಲ್ ಕಣ್ಣಿನ ಆಸ್ಪತ್ರೆ ಇತ್ಯಾದಿ ಪ್ರಮುಖ ಆಸ್ಪತ್ರೆಗಳ ವೈದ್ಯರುಗಳು ಒಂದು ನಿಮಿಷದಲ್ಲಿ ಆಗಬಹುದಾದ ತೊಂದರೆಯಿಂದ ಜೀವನಪೂರ್ತಿ ಅಂಧಕಾರದಲ್ಲಿ ಮುಳುಗುವ ಬಗ್ಗೆ ನೀಡಿರುವ ಸಲಹೆಗಳನ್ನು ಅರಿತುಕೊಂಡು ಪಟಾಕಿ ಹಚ್ಚುವಾಗ ಜಾಗರೂಕತೆ ವಹಿಸುವುದು. ಸಂಭ್ರಮ ರೋದನದಲ್ಲಿ ಕೊನೆಗೊಳ್ಳಬಾರದು.

5. ಮಾಲಿನ್ಯಗಳ ಬಗ್ಗೆ ತಿಳಿವಳಿಕೆ ನೀಡಬೇಕು
ತಂದೆ ತಾಯಿಗಳು ಮಕ್ಕಳಿಗೆ ಪಟಾಕಿ ಹಚ್ಚುವುದರಿಂದ ಉಂಟಾಗುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯಗಳ ಬಗ್ಗೆ ತಿಳಿವಳಿಕೆ ನೀಡಬೇಕು.

6. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ
ಶಾಲಾ ಕಾಲೇಜುಗಳಲ್ಲಿ ಪಟಾಕಿ ಸಿಡಿಸುವುದರಿಂದ ಹಾನಿಯುಂಟಾಗುವ ಬಗ್ಗೆ ವಿದ್ಯಾರ್ಥಿಗಳಿಗೆ ತಂದೆ ತಾಯಿಗಳು ಅರಿವು ಮೂಡಿಸುವುದು.

7. ದೇಗುಲಗಳ ಮುಂದೆ ಪಟಾಕಿ ಸಿಡಿಸುವಂತಿಲ್ಲ
ಆಸ್ಪತ್ರೆಗಳು, ದೇವಸ್ಥಾನಗಳು, ಚರ್ಚ್ಗಳು ಹಾಗೂ ಮಸೀದಿಗಳ ಬಳಿ ಪಟಾಕಿ ಸಿಡಿಸುವಂತಿಲ್ಲ.

8. ಅನ್ಯ ಕೋಮಿನವರ ಮುಂದೆ ಸಿಡಿಸುವಂತಿಲ್ಲ
ಅನ್ಯ ಕೋಮಿನ ಜನರು ವಾಸಿಸುವ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿ ತೊಂದರೆ ನೀಡಬಾರದು.

9. ಹಣವನ್ನು ಅನಾಥಾಶ್ರಮಗಳಿಗೆ ದಾನ ನೀಡಿ
ಮಕ್ಕಳುಗಳಿಂದ ಪಟಾಕಿ ಸಿಡಿಸುವುದರಿಂದ ಆಕಸ್ಮಿಕವಾಗಿ ಅಂಗ ವೈಕಲ್ಯತೆಗಳುಂಟಾಗಬಹುದು. ಇದರ ಬದಲಿಗೆ ಪಟಾಕಿಗೆ ನೀಡುವ ಹಣವನ್ನು ವೃದ್ದಾಶ್ರಮ, ಅನಾಥಾಶ್ರಮ ಅಥವಾ ಇತರೆ ಸಂಘಸಂಸ್ಥೆಗಳಿಗೆ ನೀಡಿ ಸಹಕರಿಸಿ.

10. ಹಿರಿಯರಿಗೆ ತೊಂದರೆ ಕೊಡಬೇಡಿ
ಹಿರಿಯ ನಾಗರೀಕರು ಮತ್ತು ಕಾಯಿಲೆಯಿಂದ ಬಳಲುವ ನಾಗರೀಕರಿಗೆ ತೊಂದರೆ ಉಂಟಾಗದಂತೆ ಕಡಿಮೆ ಶಬ್ದಗಳುಂಟಾಗುವ ಪಟಾಕಿಗಳನ್ನು ಬಳಸಿ. ಅವರ ದಿನನಿತ್ಯ ಕೆಲಸಕಾರ್ಯಗಳಿಗೆ ತೊಂದರೆಯಾಗದಂತೆ ಸಹಕರಿಸಬೇಕು.

11. ರಸ್ತೆ ಮಧ್ಯದಲ್ಲಿ ಪಟಾಕಿ ಸಿಡಿಸಬೇಡಿ
ಸಾರ್ವಜನಿಕರು ಓಡಾಡುವ ಸ್ಧಳ, ರಸ್ತೆಗಳ ಮಧ್ಯದಲ್ಲಿ ಸಂಚಾರಕ್ಕೆ ಅಡತಡೆಯುಂಟು ಮಾಡುವ ಸ್ಧಳಗಳಲ್ಲಿ ಸಾರ್ವಜನಿಕರು ಪಟಾಕಿಯನ್ನು ಸಿಡಿಸಬಾರದು.

12. ಠಾಣಾಧಿಕಾರಿಗಳ ಸೂಚನೆ ಪಾಲಿಸಿ
ದೀಪಾವಳಿ ಹಬ್ಬದಾಚರಣೆಯ ಸಂಬಂಧ ಸ್ಧಳೀಯ ಠಾಣಾಧಿಕಾರಿಗಳು ನೀಡುವ ಸೂಚನೆಗಳನ್ವಯ ದೀಪಾವಳಿ ಹಬ್ಬವನ್ನು ಆಚರಿಸಲು ಮನವಿ ಮಾಡಲಾಗಿದೆ.

13. ಅನುಮಾನ ಬಂದಲ್ಲಿ ಪೊಲೀಸರಿಗೆ ತಿಳಿಸಿ
ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ, ವಸ್ತುಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸ್ಧಳೀಯ ಪೊಲೀಸರಿಗೆ ತಿಳಿಸಬೇಕು.

14. ಪೊಲೀಸರೊಂದಿಗೆ ಸಹಕರಿಸಿ
ಪೊಲೀಸರು ತಮ್ಮ ಕರ್ತವ್ಯವನ್ನು ಸೂಕ್ತ ರೀತಿಯಲ್ಲಿ ಪಾಲಿಸಿ ಕಾನೂನು ಸುವ್ಯವಸ್ಧೆಯನ್ನು ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕು.












Click it and Unblock the Notifications