ಬಿಬಿಎಂಪಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವರು
ಬೆಂಗಳೂರು, ಮೇ 28 : ಅಂತಿಮ ಗಡುವು ಮುಗಿದರೂ ಕಸ ವಿಲೇವಾರಿ ಮಾಡುವಲ್ಲಿ ವಿಫಲವಾದ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ, ಜತೆಗೆ ನಾಲ್ಕು ಮಂದಿ ಎಂಜಿನಿಯರ್ ಗಳನ್ನು ಮಾತೃ ಇಲಾಖೆಗೆ ವಾಪಸ್ ಕಳಿಸುವಂತೆ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನ ಪೂರ್ವ ವಲಯದ ನಾನಾ ಪ್ರದೇಶಗಳಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಬಿಬಿಎಂಪಿ ಆಯುಕ್ತ ಎಂ.ಡಿ.ಲಕ್ಷ್ಮೀನಾರಾಯಣ ದಿಢೀರ್ ಭೇಟಿ ಕಸ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಕಸದ ರಾಶಿ ಬಿದ್ದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ಡಾ.ಸಂಘಮಿತ್ರಾ ಅವರನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು. [ಕಸ ವಿಲೇವಾರಿಗೆ 15 ದಿನ ಗಡುವು]
ಕಾರ್ಯಪಾಲಕ ಇಂಜಿನಿಯರ್ (ಶಾಂತಿನಗರ) ನರಸಿಂಹರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ದೊಮ್ಮಲೂರು ಉಪವಿಭಾಗ) ಲಿಂಗಣ್ಣ, ಅಗರ ವಾರ್ಡ್ ಸಹಾಯಕ ಇಂಜಿನಿಯರ್, ಹಲಸೂರು ವಾರ್ಡ್ ಸಹಾಯಕ ಇಂಜಿನಿಯರ್ ನರಸಿಂಹಮೂರ್ತಿ ಅವರನ್ನು ಮಾತೃ ಇಲಾಖೆಗೆ ವಾಪಸು ಕಳುಹಿಸುವಂತೆ ಆಯುಕ್ತರಿಗೆ ತಿಳಿಸಿದರು.
ಪರಿಶೀಲನೆಗೆ ಆಗಮಿಸಿ ತಂಡ ಮೊದಲು ಆಸ್ಟಿನ್ ಟೌನ್ನ ಈಸ್ಟ್ ರಸ್ತೆಗೆ ಭೇಟಿ ನೀಡಿದಾಗ ತ್ಯಾಜ್ಯವನ್ನು ಮೋರಿಗೆ ಸುರಿದಿದ್ದ ದೃಶ್ಯ ಕಂಡುಬಂತು. ಹಸಿ ಮಾಂಸ ತ್ಯಾಜ್ಯವಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಹುಳಗಳು ತುಂಬಿ ದುರ್ನಾತ ಬೀರುತ್ತಿರುವುದನ್ನು ನೋಡಿದ ಸಚಿವರು, ಆರೋಗ್ಯ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿ ಎಂದರು.
ನಂತರ ಆಸ್ಟಿನ್ ಟೌನ್ನ ಯರಪ್ಪ ಗಾರ್ಡನ್ನ ಬಿಬಿಎಂಪಿ ಶಾಲೆ ಕಾಂಪೌಂಡ್ ಬಳಿ ಮೂರು ದಿನಗಳಿಂದ ಕಸ ವಿಲೇವಾರಿಯಾಗದೆ ಕೊಳೆಯುತ್ತಿದ್ದ ದೃಶ್ಯ ಕಂಡುಬಂತು. ಇನ್ನು 3ನೇ ಅಡ್ಡರಸ್ತೆಯ ಬಿಡಿಎ ಕಾಂಪ್ಲೆಕ್ಸ್ ಬಳಿಯೂ ಕಸ ರಾಶಿ ಬಿದ್ದಿರುವುದನ್ನು ಕಂಡ ಸಚಿವರು, ಮೂರು ಮಂದಿ ಎಂಜಿನಿಯರ್ಗಳನ್ನು ಮಾತೃ ಇಲಾಖೆಗೆ ವಾಪಸು ಕಳುಹಿಸುವಂತೆ ಸೂಚಿಸಿದರು.
ನಂತರ ನೀಲಸಂದ್ರದ ಆನೆಪಾಳ್ಯ ಮುಖ್ಯರಸ್ತೆ, ಎಚ್ಎಎಲ್ 2ನೇ ಹಂತ, ಇಂದಿರಾ ನಗರ 2ನೇ ಹಂತದ 5ನೇ ಮುಖ್ಯರಸ್ತೆಯಲ್ಲಿ ಪರಿಶೀಲನೆ ನಡೆಸಿದ ತಂಡ, ಫುಟ್ ಪಾತ್ ನಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಸುರಿದಿದ್ದನ್ನು ಗಮನಿಸಿ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದರು.
1 ಲಕ್ಷ ರೂ. ದಂಡ : ಹಲಸೂರು ಕೆರೆ ಬಳಿ ಕಸ ರಾಶಿ ಬಿದ್ದಿರುವುದನ್ನು ನೋಡಿದ ಸಚಿವ ರಾಮಲಿಂಗಾ ರೆಡ್ಡಿ, ಸಹಾಯಕ ಇಂಜಿನಿಯರ್ ಅವರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಸೂಚಿಸಿದರು. ಡಿಕನ್ಸನ್ ರಸ್ತೆಯಲ್ಲಿ ಮಧ್ಯಾಹ್ನ 2 ಗಂಟೆಯಾದರೂ ಕಸ ವಿಲೇವಾರಿಯಾಗದಿರುವುದನ್ನು ನೋಡಿದ ಆಯುಕ್ತರು, ಗುತ್ತಿಗೆದಾರ ನಂದಕುಮಾರ್ ಅವರಿಗೆ ಒಂದು ಲಕ್ಷ ರೂ. ದಂಡ ಹಾಕುವಂತೆ ಆದೇಶಿಸಿದರು.
ದಿಢೀರ್ ಭೇಟಿ ಮುಂದುವರೆಯಲಿದೆ : ತಮ್ಮ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮೇ 5ರಂದು ಸಭೆ ನಡೆಸಿ ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗಡುವು ನೀಡಲಾಗಿತ್ತು. ಆದ್ದರಿಂದ ಇಂದು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಯಿತು ಎಂದರು.
ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಆದರೆ, ಬಿಲ್ ಮಾತ್ರ ಪಾವತಿಯಾಗುತ್ತಿದೆ. ಆದ್ದರಿಂದ ದಿಢೀರ್ ಭೇಟಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಉಳಿದ ಪ್ರದೇಶಗಳಲ್ಲೂ ಹೀಗೆ ದಾಳಿ ನಡೆಸಿ, ಕಸ ವಿಲೇವಾರಿ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.












Click it and Unblock the Notifications