ಸ್ವಚ್ಛನಗರಗಳ ಪಟ್ಟಿಯಲ್ಲಿ ಕುಸಿದ ಬೆಂಗಳೂರು, ಮೇಯರ್ ಬೇಸರ
ಬೆಂಗಳೂರು, ಜೂನ್ 25: ಸ್ವಚ್ಛ ಸರ್ವೇಕ್ಷಣ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿಗೆ ದೊರೆತ 216ನೇ ಸ್ಥಾನಕ್ಕೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತಮ ಕೆಲಸ ಮಾಡಿದ್ದರೂ ಈ ಸ್ಥಾನ ಲಭಿಸಿರುವುದು ತೀವ್ರ ಅಸಮಾಧಾನ ತಂದಿದೆ. ಕೇಂದ್ರದಿಂದ ಮಾಹಿತಿ ತರಿಸಿಕೊಂಡು ಈ ಬಗ್ಗೆ ಆಯುಕ್ತರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ನೈರ್ಮಲ್ಯ: ಬೆಂಗಳೂರು-ಮೈಸೂರು ರ್ಯಾಂಕಿಂಗ್ ಕುಸಿತ
2017ರಲ್ಲಿ 210ನೇ ಸ್ಥಾನದಲ್ಲಿತ್ತು, ಈ ಬಾರಿ 216ನೇ ಸ್ಥಾನಕ್ಕೆ ಕುಸಿದಿದೆ, ಈಗಾಗಲೇ 450 ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿದ್ದೇವೆ, ವೈಜ್ಞಾನಿಕವಾಗಿ ಕಸ ವಿಂಗಡಣೆ ಮಾಡಲಾಗುತ್ತಿದೆ, ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಯಾವ ಮಾನದಂಡದಲ್ಲಿ ಈ ಸ್ಥಾನಕ್ಕೆ ಹೋಗಿ ಎಂಬುದು ತಿಳಿಯುತ್ತಿಲ್ಲ ಇದರ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು. ಸ್ವಚ್ಛತೆ ವಿಚಾರದಲ್ಲಿ ಬೆಂಗಳೂರು ಮತ್ತೊಮ್ಮೆ ಮುಜುಗರಕ್ಕೆ ಈಡಾಗಿದೆ.
2017ರಲ್ಲಿ 210ನೇ ರ್ಯಾಂಕ್ ಪಡೆದಿದ್ದ ರಾಜಧಾನಿ ಇದೀಗ 216ನೇ ಸ್ಥಾನಕ್ಕೆ ಕುಸಿದಿದೆ. 2016ರಲ್ಲಿ ಬೆಂಗಳೂರು 16ನೇ ರ್ಯಾಂಕ್ ಪಡೆದಿತ್ತು. ಉಳಿದಂತೆ ಮೈಸೂರು5 ರಿಂದ 8ನೇ ಸ್ಥಾನಕ್ಕೆ ಕುಸಿದರೆ, ಮಂಗಳೂರು 63ರಿಂದ 52, ಹುಬ್ಬಳ್ಳಿ-ಧಾರವಾಡ 199ರಿಂದ 145, ದಾವಣಗೆರೆ 288ರಿಂದ 214ನೇ ರ್ಯಾಂಕ್ಗೆ ಜಿಗಿದಿದೆ.
ಉಡುಪಿ 143ರಿಂದ 198, ಶಿವಮೊಗ್ಗ 147ರಿಂದ 204, ತುಮಕೂರು 152ರಿಂದ 190ನೇ ಸ್ಥಾನಕ್ಕೆ ಕುಸಿದಿವೆ. ರಾಜ್ಯವಾರು ವಿಭಾಗದಲ್ಲಿ ಕರ್ನಾಟಕಕ್ಕೆ 14ನೇ ರ್ಯಾಂಕ್ ಸಿಕ್ಕರೆ, ಜಾರ್ಖಂಡ್, ಮಹಾರಾಷ್ಟ್ರ, ಛತ್ತೀಸ್ಗಢ ಕ್ರಮವಾಗಿ 1,2,3ನೇ ಸ್ಥಾನ ಪಡೆದುಕೊಂಡಿದೆ.ದೇಶದಲ್ಲಿನ 3ರಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದ ಮೈಸೂರು, ಒಟ್ಟಾರೆ ರ್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ.