ಎಸ್ಎಸ್ಎಲ್ಸಿ ಮಾರ್ಗದರ್ಶಿ - ಪ್ರೊ.ಜಿ.ವಿ.ಮೆಚ್ಚುಗೆ
ಬೆಂಗಳೂರು, ಡಿ. 12 : ವಿದ್ಯಾರ್ಥಿಗಳ ಪಾಲಿಗೆ ಎಸ್ಎಸ್ಎಲ್ಸಿ ಬಹಳ ಮಹತ್ವದ ಘಟ್ಟ. ಅವರ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ಮಾರ್ಗದರ್ಶಿ ಪುಸ್ತಕಗಳು ಅಗತ್ಯವಾಗಿದ್ದು, "ಮಾರ್ಕ್ಸ್ ಸ್ಕೋರರ್" ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗುವ ಆಶಯ ಇದೆ ಎಂದು ಸಾಹಿತಿ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದ್ದಾರೆ.
ಹತ್ತು ನಿಘಂಟು ಮತ್ತು 25 ಪುಸ್ತಕಗಳನ್ನು ಸಂಪಾದಿಸಿರುವ ಶತಾಯುಷಿ ವೆಂಕಟಸುಬ್ಬಯ್ಯ ಅವರು ಕೇಂಬ್ರಿಡ್ಜ್ ಪಬ್ಲಿಷಿಂಗ್ ಕಂಪೆನಿ (ಸಿಪಿಸಿ) ಹೊರತಂದಿರುವ "ಸಿಸಿಇ ಮಾರ್ಕ್ಸ್ ಸ್ಕೋರರ್" ಎಂಬ ಮಾರ್ಗದರ್ಶಿ ಪುಸ್ತಕವನ್ನು ತಮ್ಮ ನಿವಾಸದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.
"ಶಿಕ್ಷಕರು ಬೋಧನೆ ನಡೆಸಿದ ಮೇಲೂ ವಿದ್ಯಾರ್ಥಿಗಳಿಗೆ ಕೆಲವೊಂದು ಸಮಸ್ಯೆಗಳು, ಸಂಶಯಗಳು ಉಳಿದಿರುತ್ತವೆ. ಎಲ್ಲರಿಗೂ, ಎಲ್ಲ ಸಮಯಕ್ಕೂ ಶಿಕ್ಷಕರು ಲಭ್ಯರಿರುತ್ತಾರೆ ಎನ್ನಲಾಗದು. ಕಲಿಕೆಯಲ್ಲಿ ಹಿಂದೆ ಉಳಿದ ಅದೆಷ್ಟೋ ಮಕ್ಕಳಿಗೆ ಮನೆಪಾಠಕ್ಕೆ ಸಹ ಹೋಗುವುದು ಅಸಾಧ್ಯವಾದಂತಹ ಸನ್ನಿವೇಶ ಇರುತ್ತದೆ ಎಂದು ಜಿವಿ ನುಡಿದರು.

ಎಸ್ಎಸ್ಎಲ್ಸಿ ಹಂತದ ವಿದ್ಯಾರ್ಥಿಗಳಿಗೆ ಇಂತಹ ಪುಸ್ತಕಗಳು ಬಹಳ ಪ್ರಯೋಜನಕಾರಿ. ಆದರೆ ಇಂತಹ ಮಾರ್ಗದರ್ಶಿ ಪುಸ್ತಕಗಳಿಗಷ್ಟೇ ಜ್ಞಾನ ಸೀಮಿತಗೊಳಿಸದೆ ಸಾಧ್ಯವಾದಷ್ಟು ಹೊಸ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದಕ್ಕೆ ಮುಂದಾಗಬೇಕು" ಎಂದು ವೆಂಕಟಸುಬ್ಬಯ್ಯ ಹೇಳಿದರು.
ಸಿಪಿಸಿ ಬುಕ್ಸ್ ಸಂಸ್ಥೆಯ ಮುಖ್ಯಸ್ಥ ಎ.ಆರ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, 2014-15ನೇ ಸಾಲಿನ ನೂತನ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ) ಪರೀಕ್ಷಾ ಪದ್ಧತಿಯಂತೆ ಮಾರ್ಗದರ್ಶಿ ಪುಸ್ತಕ ಸಿದ್ಧಪಡಿಸಲಾಗಿದೆ. ರೂಪಣಾತ್ಮಕ ಮೌಲ್ಯಮಾಪನ, ಕಲನಾತ್ಮಕ ಮೌಲ್ಯಮಾಪನ, ಚಟುವಟಿಕೆಗಳು, ಸಾಧನ ಪರೀಕ್ಷೆ ಜತೆಗೆ ಹೊಸ ನೀಲ ನಕ್ಷೆ, ಇಲಾಖಾ ಮಾದರಿ ಪ್ರಶ್ನೆಪತ್ರಿಕೆ, ಸಂಭವನೀಯ ಪ್ರಶ್ನೆಪತ್ರಿಕೆಗಳು ಸಂಪೂರ್ಣ ಉತ್ತರಗಳೊಂದಿಗೆ ಇವೆ ಎಂದರು.
ಎಸ್ಎಸ್ಎಲ್ಸಿ ಎದುರಿಸುವಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಪುಸ್ತಕ ಮಹತ್ವದ ಪಾತ್ರ ನಿರ್ವಹಿಸುವುದು ನಿಶ್ಚಿತ ಎಂದು ಅವರು ಹೇಳಿದರು. ಸುಧರ್ಮಾ ಸಂಸ್ಥೆಯ ಸತೀಶ್ ಆಚಾರ್ಯ ಉಪಸ್ಥಿತರಿದ್ದರು. 2015ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 30ರಿಂದ ಏಪ್ರಿಲ್ 13ರವರೆಗೆ ನಡೆಯಲಿದೆ.











Click it and Unblock the Notifications