Weather Today: ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರ: 3 ಸಾವು, ತೇಲಿದ ವಸ್ತುಗಳು, ಊಟ ನೀರು ನಿದ್ದೆ ಬಿಟ್ಟ ಜನ
Bengaluru Rains: ಕಳೆದ ಎರಡು ದಿನ ಸುರಿದ ಭಾರೀ ಮಳೆಗೆ ಗ್ರೇಟರ್ ಬೆಂಗಳೂರು ಬದಲಿಗೆ ವಾಟರ್ ಬೆಂಗಳೂರು ಆಗಿದೆ. ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಜಲಾವೃತಗೊಂಡಿದ್ದು, ವರುಣನ ಅಬ್ಬರಕ್ಕೆ ಜನ ಜೀವನವೇ ಮೂರಾಬಟ್ಟೆಯಾಗಿದೆ. ಜನ ಊಟ ನೀರು ನಿದ್ದೆ ಬಿಟ್ಟು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮೂರು ಕಡೆ ಜೀವ ಹಾನಿಯಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳೇನು?
ಬೆಂಗಳೂರಿನಲ್ಲಿ ಎಲ್ಲೇ ನೋಡಿದರೂ ಕೂಡ ನೀರೇ ನೀರು. ಕಣ್ಣು ಹಾಯಿಸಿದಲೆಲ್ಲಾ ಮಳೆ ನೀರು ಆವೃತಗೊಂಡಿದೆ. ಮನೆ, ಮಂದಿರ, ರಸ್ತೆಗಳಲ್ಲಿ ನೀರು ತುಂಬಿ ಜನ ಕುಳಿತುಕೊಳ್ಳುವುದಿರಲಿ ನಿಲ್ಲಲೂ ಕೂಡ ಕಷ್ಟವಾಗಿದೆ. ಒಂದೇ ಒಂದು ಮಳೆಗೆ ಬೆಂದಕಾಳೂರು ಮಳೆಗೆ ತತ್ತರಿಸಿ ಹೋಗಿದೆ. ಒಂದೇ ದಿನ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗಿದ್ದು ಜನ ಸಾಕಪ್ಪ ಮಳೆ ಅನ್ನೋ ಹಂತಕ್ಕೆ ಬಂದಿದ್ದಾರೆ.

ಮಳೆಯಿಂದಾಗಿ 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. 20 ಕೆರೆಗಳು ಉಕ್ಕಿ ಹರಿದು ಬಡಾವಣೆಗಳನ್ನು ಜಲಾವೃತವಾಗಿಸಿವೆ. ಮಧುವನ ಅಪಾರ್ಟ್ಮೆಂಟ್, ಡಾಲರ್ಸ್ ಕಾಲೋನಿ, ಬಿಟಿಎಂ ಲೇಔಟ್ನಲ್ಲಿ ಎಲ್ಲಿ ನೊಡಿದರೂ ನೀರೆ ಕಾಣುತ್ತಿದೆ. ಮಳೆಯಿಂಗಾಗಿ 63 ವರ್ಷದ ಮನಮೋಹನ್ ಕಾಮತ್, ಭದ್ರತಾ ಸಿಬ್ಬಂದಿ ಮಗ 12 ವರ್ಷದ ದಿನೇಶ್ ಸೇರಿ ಮೂವರು ಮೃತ ದುರ್ದೈವಿಗಳಾಗಿದ್ದಾರೆ.
ವರುಣನ ಅರ್ಭಟಕ್ಕೆ ಸಾಯಿಲೇಔಟ್ನ ಜನರು ಹೈರಾಣಾಗಿ ಹೋಗಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿದ್ದು ಹೊರಬರಲಾಗದೆ ಪರದಾಡುತ್ತಿದ್ದಾರೆ. ಜಾಲಾವೃತಗೊಂಡ ಮನೆಯಲ್ಲಿ ಸಿಲುಕಿದ್ದ ಜನರನ್ನು ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಶ್ವಾನಗಳು, ಹಸುಗಳು ಮಳೆ ನೀರಿನಲ್ಲಿ ಪರದಾಡುವಂತಹ ದೃಶ್ಯಗಳು ಹೃದಯ ವಿದ್ರಾವಕವಾಗಿವೆ. ಅಲ್ಲದೆ ಮಳೆ ನೀರಿನಲ್ಲಿ ವಿಷಜಂತುಗಳು ಕೂಡ ಮನೆಯೊಳಗೆ ನುಗ್ಗುತ್ತಿದ್ದು, ಬಿಬಿಎಂಪಿ ಸಿಬ್ಬಂದಿ ಬೋಟ್ನಲ್ಲಿ ತೆರಳಿ ಮನೆಯಲ್ಲಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡುವುದರ ಜೊತೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ಕೆರೆಯಂತಾದ ರಸ್ತೆಗಳು, ಜನ ಸಂಚಾರ ಕಷ್ಟ ಕಷ್ಟ
ಇನ್ನೂ ನಂದಗೋಕುಲ ಲೇಔಟ್ನಲ್ಲೂ ಮಳೆ ಹೊಡೆತಕ್ಕೆ ಜನರು ಕುಸಿದು ಬಿದ್ದಂತಾಗಿದೆ. ವರುಣನ ಅರ್ಭಟಕ್ಕೆ ಅಕ್ಷರಶ: ನಂದಗೋಕುಲ ತೋಯ್ದು ತೊಪ್ಪೆಯಾಗಿದೆ. ನಾಗವಾರ ಎಲಿಮೆಂಟ್ಸ್ ಮಾಲ್ ಎದುರು ಕೆರೆಯಂತಾಗಿದ್ದು ಜನರು ಓಡಾಡಲು ಪರದಾಡುತ್ತಿದ್ದಾರೆ. ಹೀಗೆ ಬೆಂದಕಾಳೂರು ನೆನೆದಕಾಳೂರು ಆಗಿ ಪರಿವರ್ತನೆಗೊಂಡಿದೆ.
ಅಲ್ಲದೆ ನಗರದ ಪ್ರತಿಷ್ಠಿತ ಹೆಚ್ಎಸ್ಆರ್ ಲೇಔಟ್ನಲ್ಲೂ ಜಲಪ್ರವಾಹ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಕಟ್ಟಡಗಳಿಗೆ ಮಳೆ ನೀರು ನುಗ್ಗಿದ್ದು, ನೆಲಮಹಡಿಯಲ್ಲಿ ವಾಸವಾಗಿದ್ದ ಕುಟುಂಬಸ್ಥರ ಗೋಳು ಕೇಳುವವರಿಲ್ಲದಂತಾಗಿದೆ. ಮೂರು ಜನರೇಟರ್, ಎರಡು ಬೈಕ್, ಇನ್ನಿತರ ಪ್ರಮುಖ ದಾಖಲೆಗಳು ನೀರುಪಾಲಾಗಿವೆ.

ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಭರ್ತಿ
ಕೋರಮಂಗಲ ಕೂಡ ಮಳೆಯ ಅರ್ಭಟಕ್ಕೆ ನಲುಗಿ ಹೋಗಿದೆ. ತಗ್ಗುಪ್ರದೇಶದ ನೆಲಮಹಡಿಯಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ಟಿವಿ, ಫ್ರಿಡ್ಜ್, ಸೋಫಾ ಸೇರಿದಂತೆ ಮನೆಯಲ್ಲಿ ಇರುವ ಅನೇಕ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿವೆ. ಕೆಲ ಭಾರವಾದ ವಸ್ತುಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ಕಂಡು ಬಂದಿವೆ. ಇದರಿಂದ ಮನೆ ಮಾಲೀಕರು ದಿಕ್ಕೇ ತೋಚದಂತಾಗಿದ್ದಾರೆ.
ಇನ್ನೂ ದೀಪಿಕಾ ಲೇಔಟ್ನಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಮೇಘರಾಜನ ಮುನಿಸಿಗೆ ದೀಪಿಕಾ ಲೇಔಟ್ನ ಜನರು ನಲುಗಿ ಹೋಗಿದ್ದಾರೆ. ಎರಡು ದಿನ ಧಾರಾಕಾರವಾಗಿ ಸುರಿದ ಮಳೆರಾಯ ದೀಪಿಕಾ ಲೇಔಟ್ಗೆ ಜಲದಿಗ್ಭಂದನ ಹಾಕಿದ್ದಾನೆ. ಮನೆ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದು, ಅದನ್ನೆಲ್ಲಾ ರಕ್ಷಣೆಗೆ ಜನ ಸುಸ್ತಾಗಿ ಹೋಗಿದ್ದಾರೆ.
ಇತ್ತ ಅಧಿಕ ಮಳೆಗೆ ಹೆಣ್ಣೂರು ಕೂಡ ಜಲಾವೃತಗೊಂಡಿದೆ. ಮನೆ, ರಸ್ತೆ ಮಾತ್ರವಲ್ಲದೆ ಅನಾಥಾಶ್ರಮ ಕೂಡ ಜಲಾವೃತಗೊಂಡಿದೆ. ಮಳೆ ನೀರಿನಲ್ಲಿ ವೃದ್ಧ ಜೀವಿಗಳು ಕಾಲ ಕಳೆಯುವಂತಾಗಿದೆ. ಅಡುಗೆ ಮನೆಗೂ ನೀರು ನುಗ್ಗಿದ್ದು ಪರಿಸ್ಥಿತಿ ಕರಳು ಹಿಂಡುವಂತಿದೆ. ಜೊತೆಗೆ ಕೆಆರ್ ಸರ್ಕಲ್ ಕೂಡ ಜಲಾವೃತಗೊಂಡಿದ್ದು, ವಿಶ್ವೇಶ್ವರ್ ಕಾಲೇಜು ಬಳಿ ಬಸ್ಸ್ಟಾಂಡ್ ಧರಗೆ ಉರುಳಿದೆ. ಬೆಳಗ್ಗೆ ಈ ಘಟನೆ ನಡೆದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಜೊತೆಗೆ ವೈಟ್ ಫೀಲ್ಡ್ನಲ್ಲಿ ಮಳೆಗೆ ಮೊದಲ ಬಲಿ ಉಂಟಾಗಿದೆ. ಗೋಡೆ ಕುಸಿದು 35 ವರ್ಷದ ಶಶಿಕಲ ಎಂಬಾಕೆ ಮೃತಪಟ್ಟಿದ್ದಾರೆ. ಲ್ಯಾಬ್ ಸ್ಟೋನ್ ಎಂಬ ಕಂಪನಿಯಲ್ಲಿ ಶಶಿಕಲ್ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಬಿಬಿಎಂಪಿ ಕಮೀಷ್ನರ್ ಮಹೇಶ್ವರ್ ರಾವ್ ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಎರಡು ದಿನದಿಂದ ಸುರಿದ ಭಾರೀ ಮಳೆ ಅಕ್ಷರಶ: ಬೆಂಗಳೂರನ್ನು ನಡುಗಡ್ಡೆಯಾಗಿಸಿದೆ. ಒಂದೇ ದಿನ ಸುರಿದ ಮಳೆಗೆ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಿದ್ದು ಈ ಸ್ಥಿತಿಗೆ ಕಾರಣ ಎಂದು ಜನ ದೂರುತ್ತಿದ್ದಾರೆ. ಇನ್ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಮಳೆಯಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವತ್ತಾ ಕಾದು ನೋಡಬೇಕಿದೆ.












Click it and Unblock the Notifications