ಬೆಂಗಳೂರು ಪಾತಕ ಲೋಕಕ್ಕೆ ಕಡಲತೀರ ರೌಡಿಗಳ ಎಂಟ್ರಿ !
ಬೆಂಗಳೂರು, ಫೆಬ್ರವರಿ 26: ರಾಜಧಾನಿ ಬೆಂಗಳೂರಿನ ಪಾತಕ ಲೋಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬೆಂಗಳೂರು ಭೂಗತ ಲೋಕಕ್ಕೆ ಕಡಲ ತೀರದ ರೌಡಿಗಳು ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅಧಿಪತ್ಯಕ್ಕಾಗಿ ಸದ್ದಿಲ್ಲದೇ ಹಳೇ ಪಾತಕಿಗಳ ನಡುವೆ ಮುಸುಕಿನ ಗುದ್ದಾಟ ಶುರವಾಗಿದೆ. ಇದರ ನಡುವೆ ಬೆಂಗಳೂರಿಗೆ ಎಂಟ್ರಿ ಕೊಡುತ್ತಿರುವ ಕಡಲತೀರದ ರೌಡಿಗಳ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಪರಾಧ ಪ್ರಕರಣಗಳು ಹೊಸದೇ ಕಥೆಯನ್ನು ಹೇಳುತ್ತಿವೆ. ಬೆಂಗಳೂರು ಪಾತಕ ಲೋಕಕ್ಕೆ ಕಡಲ ತೀರದ ರೌಡಿಗಳು ಎಂಟ್ರಿ ಕೊಡುತ್ತಿದ್ದಾರೆ. ರಿಯಲ್ ಎಸ್ಟೇಟ್, ಹಪ್ತ ವಸೂಲಿ, ಲ್ಯಾಂಡ್ ಲಿಟಿಗೇಷನ್ ಗೆ ಸೀಮಿತವಾಗಿರುವ ಬೆಂಗಳೂರು ರೌಡಿಸಂಲ ನಲ್ಲಿ ಒಂದಷ್ಟು ಬೆಳವವಣಿಗೆ ಆಗುತ್ತಿವೆ.
ಮಂಗಳೂರು ರೌಡಿಗಳ ಎಂಟ್ರಿ
ರಾಜ್ಯದಲ್ಲಿ ಸ್ಲಂ ಭರತ್ ಎನ್ ಕೌಂಟರ್ ಬಳಿಕ ಸುಪಾರಿ ಹಂತಕ ಪಾತಕಿಗಳು ಚದುರಿ ಹೋಗಿದ್ದಾರೆ. ಚಿಲ್ಲರೆ ಅಪರಾಧ ಕೃತ್ಯಗಳನ್ನು ಹೆಸರಿ ರೌಡಿ ಪಟ್ಟ ಧರಿಸಿಕೊಂಡು ಹವಾ ನಿರ್ವಹಣೆ ಮಾಡುತ್ತಿದ್ದವರು ಅಪರಾಧ ಕೃತ್ಯಗಳಲ್ಲಿ ಸಿಕ್ಕಿ ಗುಂಡೇಟು ತಿಂದು ಹಾಸಿಗೆ ಹಿಡಿಯುತ್ತಿದ್ದಾರೆ. ಹೀಗಾಗಿ ರೌಡಿ ಪಡೆಗಳ ನಡುವಿನ ವೈಮನಸ್ಯ ಕೃತ್ಯ ಎಸಗಲಿಕ್ಕೆ ಲೋಕಲ್ ರೌಡಿಗಳು ಭಯ ಬೀಳುತ್ತಿದ್ದಾರೆ. ಹೀಗಾಗಿ ಈ ಜಾಗಕ್ಕೆ ಹೊಸದಾಗಿ ಕಡಲ ತೀರದ ಕುಡಿಗಳು ಎಂಟ್ರಿ ಕೊಟ್ಟಿವೆ.
ಮನೀಷ್ ಶೆಟ್ಟಿ ಕೊಲೆ ಪ್ರಕರಣ
ಕಳೆದ ವರ್ಷ ಪಬ್ ಮಾಲೀಕ ಮನೀಷ್ ಶೆಟ್ಟಿ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಬಂಟ್ವಾಳ ಮೂಲದ ರೌಡಿ ಅಕ್ಷಯ್, ಮತ್ತು ಮಂಗಳೂರು ಮೂಲದ ಗಣೇಶ್ ಬಂಧನಕ್ಕೆ ಒಳಗಾಗಿದ್ದರು. ಸುಪಾರಿ ಪಡೆದು ರಾಜದಾನಿಯಲ್ಲಿ ಹಾಡ ಹಗಲೇ ಪಬ್ ಮಾಲೀಕ ಮನೀಷ್ ಶೆಟ್ಟಿಯನ್ನು ಹತ್ಯೆ ಮಾಡಿದ್ದರು. ಮಂಗಳೂರಿನ ಹಿಡಿಯಡ್ಕದಲ್ಲಿ ನಡೆದಿದ್ದ ಕಿಶನ್ ಹೆಗ್ಡೆ ಹತ್ಯೆಗೆ ಮನೀಶ್ ಶೆಟ್ಟಿ ಸುಪಾರಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುನ್ನ ಅಲಿಯಾಸ್ ಶಶಿಕಿರಣ್ ಮನೀಶ್ ಶೆಟ್ಟಿಗೆ ಹತ್ಯೆಗೆ ಸುಪಾರಿ ನೀಡಿದ್ದ. ಅದರಂತೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಮನೀಷ್ ಶೇಟ್ಟಿಯನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಇದರಲ್ಲಿ ಬಂಧಿತ ನಾಲ್ವರು ಕೂಡ ಕಡಲತೀರದ ಕುಡಿಗಳೇ .
ಡ್ರಗ್ ಡೀಲ್ ನಲ್ಲಿ ರಶೀದ್ ಮಲಬಾರಿ ಆಪ್ತ
ಇನ್ನು ಇತ್ತೀಚೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಅಸ್ಲರ್ ಆಲಿ ಕೂಡ ಮೂಲತಃ ಮಂಗಳೂರಿನವ. ಡ್ರಗ್ ಡೀಲ್ ಪ್ರಕರಣದಲ್ಲಿ ಈತ ಬಂಧನಕ್ಕೆ ಒಳಗಾಗಿದ್ದು, ವಿಚಾರಣೆ ವೇಳೆ ಭೂಗತ ಪಾತಕಿ ರಶೀದ್ ಮಲಬಾರಿ ಆಪ್ತ ಎಂಬುದು ಗೊತ್ತಾಗಿತ್ತು. ರಾಜಧಾನಿಯ ಡ್ರಗ್ ಡೀಲ್ ನಲ್ಲಿ ಕೂಡ ಮಂಗಳೂರು ಪಾತಕಿಗಳು ಸಕ್ರಿಯವಾಗುರುವುದಕ್ಕೆ ಪೊಲೀಸರಿಗೆ ಸಾಕ್ಷ್ಯ ದೊರೆತಂತಾಗಿತ್ತು.
Recommended Video
ಗ್ಯಾಂಗ್ ವಾರ್ ನಲ್ಲಿ ರೌಡಿಗಳು
ಕಾಡುಬಿಸನಹಳ್ಳಿ ಸೋಮ ಮತ್ತು ರೋಹಿತ್ ಎಂಬ ರೌಡಿಗಳ ನಡುವೆ ವೈಮನಸ್ಯ ಉಂಟಾಗಿತ್ತು. ಈ ವೇಳೆ ಕಾಡುಬಿಸನಹಳ್ಳಿ ಸೋಮನನ್ನು ಮುಗಿಸಲಿಕ್ಕೆ ಮಂಗಳೂರು ರೌಡಿ ವಿಶ್ವನಾಥ್ ಭಂಡಾರಿ ಹಾಗೂ ಕಿರಣ್ ಎಂಬುವರಿಗೆ ಸುಪಾರಿ ನೀಡಿದ್ದ. ಕಳೆದ ಇಪ್ಪತ್ತು ದಿನಗಳಿಂದ ಕಾಡುಬಿಸನಹಳ್ಳಿ ಸೋಮನ ಹತ್ಯೆಗೆ ಹೊಂಚು ಹಾಕಿದ್ದ ಗ್ಯಾಂಗ್ ನಲ್ಲಿ ಮಂಗಳೂರು ರೌಡಿಗಳು ಇರುವುದು ಗೊತ್ತಾಗಿದೆ. ಬಂಧಿತ ವಿಶ್ವನಾಥ್ ಭಂಡಾರಿ ಹಾಗೂ ಕಿರಣ್ ವಿರುದ್ಧ ಹತ್ತಕ್ಕೂ ಹೆಚ್ಚು ಅಪರಾಧ ಕೃತ್ಯಗಳು ದಾಖಲಾಗಿವೆ. ಅಂತೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಾತಕ ಕೃತ್ಯಗಳಿಗೆ ಮಂಗಳೂರು ರೌಡಿಗಳು ಎಂಟ್ರಿ ಕೊಟ್ಟಿದ್ದಾರೆ. ಇದು ಪೊಲೀಸರ ನಿದ್ದೆ ಗೆಡಿಸಿದ್ದು, ಹದ್ದಿನ ಕಣ್ಣಿಟ್ಟಿದ್ದಾರೆ.