ಮಂಡೂರು ಜನತೆ ಜೊತೆ ಸಂಧಾನ ವಿಫಲ
ಬೆಂಗಳೂರು,ಜೂ.10: ಆರು ತಿಂಗಳ ಕಾಲ ಮಂಡೂರು ಘಟಕಕ್ಕೆ ಕಸ ಸಾಗಿಸಲು ಕಾಲಾವಕಾಶ ನೀಡುವಂತೆ ಮೇಯರ್ ಮತ್ತು ಆಯುಕ್ತರು ಮಾಡಿದ ಮನವಿಯನ್ನು ಮಂಡೂರು ಗ್ರಾಮಸ್ಥರು ತಿರಸ್ಕರಿಸಿದ್ದು ಕಸ ಸಾಗಾಣೆ ಕುರಿತ ಅನಿಶ್ಚಿತತೆ ಮುಂದವರಿದಿದೆ.
ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ 5ರಿಂದ ರಾತ್ರಿ 8-30ರವರೆಗೆ ಸುಮಾರು ಮೂರೂವರೆ ಗಂಟೆ ಕಾಲ ಸುದೀರ್ಘ ಸಭೆ ನಡೆದರೂ ಮಂಡೂರು ಗ್ರಾಮಸ್ಥರು ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕಸ ಸಾಗಣೆ ಸಾಗಾಣೆ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ನಾವು ಅನುಭವಿಸುತ್ತಿರುವ ಕಷ್ಟವನ್ನು ತಡೆಗಟ್ಟಲು ಮನವಿ ಮಾಡಿದ್ದು ತಪ್ಪೇ ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಶ್ನಿಸಿದ್ದಾರೆ.[ಬಿಬಿಎಂಪಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರು]
ಮಂಡೂರಿನ ಕಷ್ಟ ನಿಮಗೆ ಗೊತ್ತಗಾಬೇಕಾದರೆ ನಮ್ಮ ಪತ್ನಿ ಮಕ್ಕಳನ್ನು ಮಂಡೂರಿಗೆ ಕರೆ ತನ್ನಿ. ನಂತರ ಅವರ ಅಭಿಪ್ರಾಯವನ್ನು ಪಡೆದು ನೀವೇ ಕಸ ಸುರಿಯುವುದರ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದ್ದಾರೆ.

ಸಭೆ ಬಳಿಕ ಮೇಯರ್ ಬಿಎಸ್ ಸತ್ಯನಾರಯಣ ಮಾತನಾಡಿ ಮಂಡೂರು ಜನತೆ ಕಷ್ಟ ನಮಗೆಲ್ಲ ಅರಿವಾಗಿದೆ. ಮುಂದೆ ಎಂಟು ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ಗಳು ಸರದಿಯಂತೆ ಮಂಡೂರಿಗೆ ನಿತ್ಯ ಭೇಟಿ ನೀಡಲಿದ್ದಾರೆ. ಅಲ್ಲೇ ಪಾಲಿಕೆ ಕಚೇರಿ ತೆರೆದು ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಮಂಡೂರು ಜನತೆಗೆ ಭರವಸೆ ನೀಡಿದರು.
ಆಯುಕ್ತ ಲಕ್ಷ್ಮೀನಾರಾಯಣ್ ಮಾತನಾಡಿ ಕಸವನ್ನು ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸಲು ಪಾಲಿಕೆ ಯೋಜನೆ ರೂಪಿಸಿದೆ. ಕಸದ ಪ್ರಮಾಣ ಕಡಿಮೆ ಮಾಡಿ ದುರ್ನಾತ ತಡೆಯಲು ಕ್ರಮ ಕೈಗೊಳ್ಳಲಾಗುವುದು. ನಮ್ಮ ಮೇಲೆ ನಂಬಿಕೆ ಇಡಿ ಎಂದು ಮಂಡೂರು ಗ್ರಾಮಸ್ಥರಲ್ಲಿ ವಿನಂತಿಸಿದರು.
ಮೇಯರ್ ಮತ್ತು ಆಯುಕ್ತರು ಈ ಹಿಂದಿನಿಂದಲೂ ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಅದರೆ ಅವರ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಕಾನೂನಿಗೆ ಗೌರವ ನೀಡಿ ನಿಷೇಧಾಜ್ಞೆ ಇರುವುದರಿಂದ ಪ್ರತಿಭಟನೆ ನಡೆಸುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.












Click it and Unblock the Notifications