ಇಬ್ಬರು ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಂದ ತಂದೆ

ಮೊನಿಷಾ (11) ಹಾಗೂ ಮೋನಿಕಾ (9) ಕೊಲೆಯಾದ ನತದೃಷ್ಟ ಮಕ್ಕಳು. ಮತ್ತೊಬ್ಬ ಬಾಲಕಿ ಧರಣಿ (14) ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ರಮೇಶ್(45) ಮಕ್ಕಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಂದ ಬಳಿಕ, ತಾನೂ ಹಲ್ಲೆ ಮಾಡಿಕೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ರಮೇಶ್ ಆಟೋ ಚಾಲಕನಾಗಿದ್ದು ಗೌರಮ್ಮ ಎಂಬವರನ್ನು ಮದುವೆಯಾಗಿದ್ದು ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಗೌರಮ್ಮ ಅವರು ಸುಂಕದಕಟ್ಟೆ ಬಳಿ ಮೂರುನಾಲ್ಕು ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಸಾಲ ಮಾಡಿ ಮಾಡಿ ಆಟೋ ಖರೀದಿಸಿದ್ದ ರಮೇಶ್, ಸಾಲವನ್ನು ತೀರಿಸದ ಕಾರಣ ಸಾಲ ನೀಡಿದ್ದ ಹಣಕಾಸು ಸಂಸ್ಥೆಯು ಆಟೊವನ್ನು ವಶಕ್ಕೆ ಪಡೆದಿತ್ತು. ನಂತರ ಬೇರೊಂದು ಕಡೆ ಸಾಲ ಮಾಡಿ, ಆಟೋವನ್ನು ಹಿಂಪಡೆದಿದ್ದ. ಆದರೆ ಅದನ್ನೂ ತೀರಿಸದ ಕಾರಣ ಪುನಃ ಆಟೊವನ್ನು ಹಣಕಾಸಿನ ಸಂಸ್ಥೆ ವಶಕ್ಕೆ ಪಡೆದಿತ್ತು.
ಈ ಘಟನೆಯಿಂದ ನೊಂದಿದ್ದ ರಮೇಶ್ ನನಗೆ ಯಾರೋ ಮಾಟ ಮಾಡಿರಬೇಕು ಎಂದು ಬೇಸರದಲ್ಲಿದ್ದ. ಜೊತೆಗೆ ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಅವರ ವಿವಾಹದ ಬಗ್ಗೆ ಚಿಂತಿಸಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ.
ಸೋಮವಾರ ಸಂಜೆ ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಮೂವರು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಈ ಹೆಣ್ಣು ಮಕ್ಕಳಿಂದಾಗಿ ಭವಿಷ್ಯದಲ್ಲಿ ಏನೆಲ್ಲಾ ಕಷ್ಟಗಳು ಬರಬಹುದು ಎಂದು ಊಹಿಸಿ ಮನೆಯಲ್ಲಿದ್ದ ಮಚ್ಚನ್ನು ತೆಗೆದು ಮೂವರ ಮೇಲೆ ಹಲ್ಲೆ ಮಾಡಿದ್ದಾನೆ.[ಮಗಳನ್ನು ಮುದ್ದೆಕೋಲಿನಿಂದ ಚಚ್ಚಿ ಕೊಂದ ಪಾಪಿ]
ಮಕ್ಕಳ ಕಿರುಚಾಟದ ಶಬ್ದ ಕೇಳಿ ಮನೆಯ ಬಂದ ಮಾಲೀಕರು ರಮೇಶ್ರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಮೇಶ್ ಮನೆಗೆ ಬೀಗ ಹಾಕಿ ಅವರನ್ನು ಕೆಳಗೆ ತಳ್ಳಿ ಓಡಿ ಹೋಗಿದ್ದಾನೆ. ಮನೆಯ ಮಾಲೀಕರು ಸ್ಥಳೀಯರ ಸಹಾಯ ಪಡೆದು ಮನೆ ಬಾಗಿಲನ್ನು ತೆರೆದಾಗ ಮೂವರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಈ ಹೊತ್ತಿಗೆ ಮೋನಿಕಾ ಮತ್ತು ಮೊನಿಷಾಳ ಪ್ರಾಣಪಕ್ಷಿ ಹಾರಿಹೋಗಿದೆ. ಉಸಿರಾಡುತ್ತಿದ್ದ ಧರಣಿಯನ್ನು ಕೂಡಲೇ ಆಸ್ಪತ್ರೆಗೆ ಸ್ಥಳೀಯರು ಸೇರಿಸಿದ್ದಾರೆ.
ರಮೇಶ್ ಓಡಿಹೋಗಿ ಮೋರಿ ಬಳಿ ಅವಿತು ಕುಳಿತ್ತಿದ್ದ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ತಾವರಕೆರೆ ಪೊಲೀಸರು ರಮೇಶ್ನನ್ನು ಬಂಧಿಸಿದ್ದಾರೆ. ಮನೆಯಲ್ಲಿ ಬಡತನ ಹಾಗೂ ಸಾಲದ ಸಮಸ್ಯೆಯಿಂದಾಗಿ ರಮೇಶ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications