ಹಣ ಕೊಟ್ಟು ಹೆಂಡತಿ ಕೊಲ್ಲಿಸಿದವನ ಬಂಧನ:ಕೊಲೆಗೆ ಹಾಕಿದ್ದ ಭಾರಿ ಸ್ಕೆಚ್
ಬೆಂಗಳೂರು, ಡಿಸೆಂಬರ್ 24: ಬಾಡಿಗೆ ಕೊಲೆಗಾರರಿಗೆ ಹಣ ಕೊಟ್ಟು ಹೆಂಡತಿಯನ್ನೇ ಕೊಲ್ಲಿಸಿದ ಭೂಪ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಣ, ಆಸ್ತಿ ಆಸೆಗೆ ಬಿದ್ದು ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಲು ಸುಫಾರಿ ನೀಡಿದ್ದ ಬೆಂಗಳೂರಿನ ನರೇಂದ್ರ ಬಾಬು ವೈಯಾಲಿಕಾವಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ನರೇಂದ್ರ ಬಾಬು, ವಿನುತಾ ಎಂಬುವರನ್ನು 12 ವರ್ಷದ ಹಿಂದೆ ಮದುವೆ ಆಗಿದ್ದರು. ಅವರಿಗೆ ಒಂದು ಮಗುವೂ ಇತ್ತು. ವರ್ಷಗಳು ಕಳೆದಂತೆ ವಿನುತಾ ಹಾಗೂ ನರೇಂದ್ರ ಬಾಬು ನಡುವೆ ಆಸ್ತಿ ವಿಷಯಕ್ಕೆ ಜಗಳಗಳಾದವು, ಇಬ್ಬರೂ ಪರಸ್ಪರ ದೂರು ದಾಖಲಿಸಿಕೊಂಡು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.

ಹೆಂಡತಿಯನ್ನು ಕೊಲ್ಲಿಸಿ ಆಸ್ತಿಯನ್ನು ತನ್ನ ವಶ ಮಾಡಿಕೊಳ್ಳುವ ಇರಾದೆಯಿಂದ ಸ್ನೇಹಿತರ ಸಹಾಯದಿಂದ ಇಬ್ಬರು ಸುಫಾರಿ ಕೊಲೆಗಾರರಿಗೆ ಐದು ಲಕ್ಷ ಹಣ ನೀಡಿ ಹೆಂಡತಿ ವಿನುತಾಳನ್ನು ಕೊಲ್ಲುವಂತೆ ಸುಫಾರಿ ನೀಡಿದ್ದ.
ಅದರಂತೆ ಡಿಸೆಂಬರ್ 20 ರಂದು ವಿನುತಾ ಅವರು ವೈಯಾಲಿಕಾವಲ್ ನ ತಮ್ಮ ನಿವಾಸದಿಂದ ಬೆಳಿಗ್ಗೆ ಹೊರಗೆ ಹೋದಾಗ, ಕಿಟಕಿ ಸರಳು ಮುರಿದು ಒಳಗೆ ನುಗ್ಗಿದ ಇಬ್ಬರು ಸುಫಾರಿ ಕೊಲೆಗಾರರು ವಿನುತಾ ಮರಳಿ ಬರಲು ಕಾಯುತ್ತಾ ಮನೆ ಒಳಗೆ ಅಡಗಿ ಕುಳಿತಿದ್ದರು.
ಮಧ್ಯಾಹ್ನದ ವೇಳೆಗೆ ವಿನುತಾ ಮನೆಗೆ ಮರಳಿದಾಗ ಒಳಗೆ ಅಡಗಿ ಕೂತಿದ್ದ ಕಿರಾಕರು ದೊಣ್ಣೆಯಿಂದ ವಿನುತಾ ತಲೆಗೆ ಹೊಡೆದು ಕೊಂದಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿನುತಾ ಅವರ ಅಕ್ಕ-ಪಕ್ಕದ ಮನೆಯವರೇ ವಿನುತಾ ಗಂಡನ ಮೇಲೆ ಅನುಮಾನ ಇರುವುದಾಗಿ ಹೇಳಿದ್ದರು. ಅದರಂತೆಯೇ ನರೇಂದ್ರ ಬಾಬು ಅನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ನರೇಂದ್ರ ಬಾಬು ಮತ್ತು ಕೊಲೆ ಮಾಡಿದ ಹೊಸಕೋಟೆಯ ಪ್ರಶಾಂತ್, ಕೆಂಪಾಪುರದ ಜಗನ್ನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.












Click it and Unblock the Notifications