ನಾವು 70 ವರ್ಷದಲ್ಲಿ ಏನೂ ಮಾಡದಿದ್ದರೆ ದೇಶ ಗಟ್ಟಿಯಾಗುತ್ತಿರಲಿಲ್ಲ: ಖರ್ಗೆ
ಬೆಂಗಳೂರು, ನ.06: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ನಡೆಸಲಾಗಿದೆ.
ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ನಾವು ನಮ್ಮ ಸ್ವಂತ ಶಕ್ತಿ ಮೇಲೆ ಮುಂದೆ ಬಂದಾಗ ಬೇರೆಯವರು ಅದನ್ನು ಗುರುತಿಸುತ್ತಾರೆ. ನಿಮ್ಮಲ್ಲಿರುವ ಶಕ್ತಿಗೆ ಬೆಂಬಲ ಸಿಗುತ್ತದೆ" ಎಂದು ಹೇಳಿದ್ದಾರೆ.
ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ: ಡಿಕೆಶಿ
"ನಾನು ಒಬ್ಬ ಕಾರ್ಮಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು, ವಿದ್ಯಾರ್ಥಿ ಸಂಘಟನೆ ಕಟ್ಟಿ ಅದರ ಅಧ್ಯಕ್ಷನಾಗಿ ಜವಳಿ ಕಾರ್ಮಿಕರ ಸಂಘಗಳ ಜತೆ ಕೆಲಸ ಮಾಡಿ ಅಲ್ಲಿ ಆರಿಸಿ ಬಂದಿದ್ದೆ. ನನ್ನ ಸಂಘಟನೆ ನೋಡಿ ಕಾಂಗ್ರೆಸ್ 1969ರಲ್ಲಿ ಇಬ್ಭಾಗ ಆದಾಗ ನಮ್ಮ ಜಿಲ್ಲೆಯ ಕನ್ವೀನರ್ ಧರ್ಮರಾವ್ ಅವರು ಗುಲ್ಬರ್ಗಾ ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಕಟ್ಟಲು ನೇರವಾಗಿ. ನಿಮಗೆ ಇತ್ತ ಭವಿಷ್ಯ ಇದೆ ಎಂದು ಪ್ರೋತ್ಸಾಹ ನೀಡಿದರು" ಎಂದು ನೆನಪಿಸಿಕೊಂಡರು.
"ದೇಶದಲ್ಲಿ ಕಾಂಗ್ರೆಸ್ ಬಲವಾಗಿ ಅಧಿಕಾರಕ್ಕೆ ಬರಲಿದೆ. ಇಂದಿರಾ ಗಾಂಧಿ ಅವರು ಬೆಳೆಯುತ್ತಾರೆ. ನೀವು ಪ್ರಮುಖರಾಗಿ ಇರಬೇಕು ಎಂದರು. ದೇವರಾಜ ಅರಸು ಅವರು ಕನ್ವೀನರ್ ಆಗಿದ್ದಾಗ ನಾನು, ಧರ್ಮ ಸಿಂಗ್ ಸೇರಿದಂತೆ 10-15 ಯುವಕರನ್ನು ಕರೆದು ಪಕ್ಷದ ಕೆಲಸ ಮಾಡಿ ನಿಮಗೆ ಪಕ್ಷದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು. 1969ರಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದೆ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ, ಸಿಡಬ್ಲ್ಯೂಸಿ ಸದಸ್ಯನಾಗಿ ಹಾಗೂ ಈಗ ಎಐಸಿಸಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ" ಎಂದರು.
ನಾನು ಹಂತ ಹಂತವಾಗಿ ಬೆಳೆದಿದ್ದೇನೆ: ಖರ್ಗೆ
"ನಾನು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ. ಹಂತ ಹಂತವಾಗಿ ಬೆಳೆದಿದ್ದೇನೆ. ಎಲ್ಲವೂ ಒಂದೇ ಬಾರಿಗೆ ಆಗುವುದಿಲ್ಲ. ಇಂತಹ ಚಿಂತನೆ ಇರಬಾರದು. ಸೇವೆ ಮಾಡಬೇಕು, ಗುರಿ ಇಟ್ಟುಕೊಳ್ಳಬೇಕು. ನಾವು ಅಧಿಕಾರಕ್ಕೆ ಪಕ್ಷ ಸೇರುವುದಿಲ್ಲ. ಪಕ್ಷದ ತತ್ವ ಸಿದ್ಧಾಂತ ಅರಿತು ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೊಳಿಸಲು ಕೆಲಸ ಮಾಡಬೇಕು. ಪಕ್ಷದ ತತ್ವ ಸಿದ್ಧಾಂತ ಬೆಳೆಸಲು ಶ್ರಮಿಸಬೇಕು. ನೆಹರೂ, ಅಂಬೇಡ್ಕರ್, ಗಾಂಧಿ ಅವರ ವಿಚಾರ ಅರಿಯದಿದ್ದರೆ ಮನಬಂದಂತೆ ನಡೆದುಕೊಳ್ಳುತ್ತಾರೆ. ಯಾರಿಗೆ ಬದ್ಧತೆ, ನಂಬಿಕೆ ಇರುತ್ತದೆಯೋ ಅವರು ಎಂದಿಗೂ ಪಕ್ಷ ಬಿಡುವುದಿಲ್ಲ. ಹಲವು ಜನ ಮಂತ್ರಿ ಸ್ಥಾನ, ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಡುತ್ತಾರೆ. ನಾವು ಕುರ್ಚಿಗಾಗಿ ಪಕ್ಷ ಸೇರಬಾರದು" ಎಂದು ಕಿವಿ ಮಾತು ಹೇಳಿದರು.
"ಬಹಳ ಮಂದಿ ನೀವು 70 ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಕೇಳುತ್ತಾರೆ. ನಾವು 70 ವರ್ಷದಲ್ಲಿ ಏನೂ ಮಾಡದಿದ್ದರೆ ದೇಶ ಇಷ್ಟು ಗಟ್ಟಿಯಾಗಿ ಒಂದಾಗಿರಲು ಸಾಧ್ಯವಾಗುತ್ತಿರಲಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿರುವುದು, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಉಳಿಯಬೇಕು. ಆಗ ಮೋದಿ, ಶಾ ಉಳಿಯುತ್ತಾರೆ. ನಿಮಗೆ ಹಕ್ಕು, ಮೂಲಭೂತ ಅಧಿಕಾರ ಸಿಗುತ್ತದೆ. ನಾವು ಹೆದರಿ ಮನೆಯಲ್ಲಿ ಕೂತರೆ ಏನೂ ಆಗುವುದಿಲ್ಲ. ಈ ದೇಶ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕಾದರೆ ನೀವು ಜನರನ್ನು ಸಂಘಟಿಸಬೇಕು. ಆಗ ದೇಶದಲ್ಲಿರುವ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಾಧ್ಯ" ಎಂದರು.
ಸೋನಿಯಾ ಗಾಂಧಿಯವರ ತ್ಯಾಗ ನೀವು ಮಾಡಿಲ್ಲ: ಖರ್ಗೆ
"ಮೋದಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮನಬಂದಂತೆ ಮಾತನಾಡುತ್ತಾರೆ. ಇವರು ಮೋದಿ ಅವರ ಶಾಲೆಯಲ್ಲಿ ಕಲಿತವರೆ..? ಇವರು ನಾವು ಮಾಡಿರುವ ಶಾಲೆ, ಕಾಲೇಜಿನಲ್ಲಿ ಓದಿ, ನಮ್ಮ ಸಾರ್ವಜನಿಕ ಉದ್ದಿಮೆಯಲ್ಲಿ ದುಡಿದು ಬೆಳೆದಿದ್ದಾರೆ. ಆದರೂ ಇವರು ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ದೇಶ ರಕ್ಷಣೆ ಮಾಡಿ ದೇಶವನ್ನು ಒಗ್ಗಟ್ಟಾಗಿ ಇಟ್ಟಿದ್ದೇವೆ. ಬಾಂಗ್ಲಾ ಪ್ರತ್ಯೇಕ ದೇಶ ಮಾಡಿದ್ದು ಇಂದಿರಾ ಗಾಂಧಿ. ದೇಶದ ವಿದೇಶಾಂಗ ನೀತಿ ಮಾಡಿದ್ದು ನೆಹರೂ ಅವರು. ಪದೇ ಪದೇ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿದ್ದಾರೆ ಎಂದು ಟೀಕೆ ಮಾಡುವುದಲ್ಲ. ಸೋನಿಯಾ ಗಾಂಧಿ ಅವರು ಮಾಡಿರುವ ತ್ಯಾಗ ನೀವು ಮಾಡಿಲ್ಲ. ನಾವು ಒಂದು ಚೇರ್ಮನ್, ಮಂತ್ರಿ ಸ್ಥಾನ, ಪಕ್ಷದ ಹುದ್ದೆ ಸಿಗಲಿಲ್ಲ ಎಂದರೆ ಮುನಿಸಿಕೊಳ್ಳುತ್ತೇವೆ. ಆ ಕುಟುಂಬದ ತ್ಯಾಗ ಬಲಿದಾನ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಾಣತ್ಯಾಗ, ರಾಜಕೀಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ಅವರು ಪ್ರಧಾನಿ ಆಗಬಹುದಿತ್ತು ಆದರೆ ಆಗಲಿಲ್ಲ. ಗಾಂಧಿ ಕುಟುಂಬ ಸದಸ್ಯರೇ ಅಧ್ಯಕ್ಷರಾಗಿ ಇರಬೇಕು ಎಂದು ಕೇಳಿದೆವು. ಆಗ ನಾವು ಆಗುವುದಿಲ್ಲ. ನೀವು ಚುನಾವಣೆ ನಡೆಸಿ ಅಲ್ಲಿ ಗೆಲ್ಲುವವರು ಪಕ್ಷದ ಅಧ್ಯಕ್ಷರಾಗುತ್ತಾರೆ. ಹೀಗೆ ತ್ಯಾಗಮೂರ್ತಿ ಸೋನಿಯಾ ಗಾಂಧಿಯವರು" ಎಂದರು.
ಕಾಂಗ್ರೆಸ್ ಒಟ್ಟಾಗಿದೆ, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ
"ಗುಜರಾತ್ ಚುನಾವಣೆಯಲ್ಲಿ ಕಳೆದ 9 ದಿನದಿಂದ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಯಾವ ಮಟ್ಟಕ್ಕೆ ಎಂದರೆ ಮೋರ್ಬಿ ಸೇತುವೆ ರಿಪೇರಿಗೆ 2 ಕೋಟಿ ನೀಡಲಾಗಿತ್ತು. ಇವರು 2 ಕೋಟಿ ಯೋಜನೆ ಉದ್ಘಾಟನೆ ಮಾಡಿದರು. ಇವರ ಕೈಗುಣವೋ ಏನೋ ಉದ್ಘಾಟನೆ ಮಾಡಿದ 5 ದಿನದಲ್ಲೇ ಸೇತುವೆ ಬಿದ್ದು ಹೋಯಿತು. 138 ಜನ ಸತ್ತರು. ಇದಕ್ಕೆ ಯಾರು ಜವಾಬ್ದಾರಿ ಹೊತ್ತರು? ಯಾರಾದರೂ ರಾಜೀನಾಮೆ ಕೊಟ್ಟರು? ಅದೇ ಪಶ್ಚಿಮ ಬಂಗಾಲದಲ್ಲಿ ಸೇತುವೆ ಬಿದ್ದಾಗ ದೇವರು ಇವರ ಆಡಳಿತ ನೋಡಿ ಬೇಸತ್ತು ಸೇತುವೆ ಕೆಡವಿದ್ದಾನೆ" ಎಂದು ಹೇಳಿದ್ದರು.
"ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 3,500 ಕಿಮೀ ಪಾದಯಾತ್ರೆ ಆರಂಭಿಸಿದ ನಂತರ ಬಿಜೆಪಿಗೆ ನಡುಕ ಹುಟ್ಟಿದೆ. ಈಗ ರಾಹುಲ್ ಗಾಂಧಿ ಅವರ ಬಗ್ಗೆ ಜನರ ಪ್ರೀತಿ ಕಂಡು ದಿಗಿಲು ಹುಟ್ಟಿದೆ. ನೀವು ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚಿಸಬೇಡಿ. ನಾವು ಒಟ್ಟಾಗಿದ್ದೇವೆ. ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ" ಎಂದರು.
ಮಾಧ್ಯಮಗಳಲ್ಲಿ ನಮ್ಮ ವಿಚಾರ ಹೆಚ್ಚು ಪ್ರಚಾರ ಆಗುವುದಿಲ್ಲ
"ನನಗೆ ಇಂದು ನೀವು ಗೌರವಿಸಿ ಅಭಿನಂದಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ನೀವು ನನಗೆ ಯಾವಾಗ ಗೌರವ ನೀಡುತ್ತೀರಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಗೌರವ ಸಲ್ಲಿಸಿದಂತೆ ಆಗುತ್ತದೆ. ಈ ಹಾರ ತುರಾಯಿ ಸಾಮಾನ್ಯ. ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಈ ಸರ್ಕಾರ 40% ಕಮಿಷನ್ ಸರ್ಕಾರ ಕಿತ್ತೊಗೆಯಲು ನಮ್ಮ ಸರ್ಕಾರ ಬರಬೇಕು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ್ದೀರಿ. ಈಗ ಮತ್ತೆ ಅದೇ ಕೆಲಸ ಮಾಡಬೇಕು" ಎಂದರು.
"ನಾವು ಒಗ್ಗಟ್ಟಾಗಿ ಮುಂದೆ ಸಾಗಿದರೆ ಇದನ್ನು ಸಾಧಿಸಬಹುದು. ಮುನಿಸಿಕೊಂಡಿರುವವರು, ನಮ್ಮಿಂದ ದೂರ ಆಗಿರುವವರು, ಹೊಸ ಯುವಕರನ್ನು ಪಕ್ಷಕ್ಕೆ ಕರೆ ತನ್ನಿ. ಪಕ್ಷದ ಅಧ್ಯಕ್ಷನಾದ ನಂತರ ನಾನು ಮಾಡಬೇಕಾದ ಕೆಲಸಗಳು ಇವೆ. ಉದಯಪುರ ಸಭೆ ನಿರ್ಣಯಗಳನ್ನು ಕಾರ್ಯಕ್ರಮಗಳನ್ನು ಜಾರಿ ತರಲು ಆರಂಭಿಸಿದ್ದು, ಎಲ್ಲವನ್ನೂ ಒಂದೊಂದಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದೇನೆ. ಯುವಕರಿಗೆ 50%, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲಾ ಘಟಕಗಳಿಗೆ ಜವಾಬ್ದಾರಿ ನೀಡಿ. ಸಂಘಟನೆಗೆ ಅವಕಾಶ ನೀಡಿ" ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ನಮ್ಮ ವಿಚಾರ ಹೆಚ್ಚು ಪ್ರಚಾರ ಆಗುವುದಿಲ್ಲ. ಹೀಗಾಗಿ ಮನೆ ಮನೆಗೆ ಹೋಗಿ ಪಕ್ಷದ ಪರ ಪ್ರಚಾರ ಮಾಡಿ. ನಾವು ಪಟ್ಟಣ ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಜನರಿಗೆ ಮನವರಿಕೆ ಮಾಡಿದಾಗ ಮಾತ್ರ ಬಿಜೆಪಿ ಎದುರಿಸಲು ಸಾಧ್ಯ. ಪಕ್ಷಕ್ಕೆ ಶಕ್ತಿ ತುಂಬಲು ಸಾಧ್ಯ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ಸಿಗುತ್ತಿರುವ ಲಾಭವನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಜ್ಯದ ಯಾತ್ರೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದ ಮಲ್ಲಿಕಾರ್ಜುನ ಖರ್ಗೆ ಅದ್ದೂರಿ ಸ್ವಾಗತ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.