ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ: ಡಿಕೆಶಿ

ಬೆಂಗಳೂರು, ನ.06: "ಕಾರ್ಮಿಕರ ಪುತ್ರನಾಗಿ ಕುಗ್ರಾಮದಿಂದ ಬಂದು ದೆಹಲಿವರೆಗೂ ಬೆಳೆದು ನಿಂತಿದ್ದಾರೆ. ಪಕ್ಷ ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ" ಎಂದು ಸರ್ವೋದಯ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

"ಮಹಾತ್ಮ ಗಾಂಧಿ ಪ್ರಾರಂಭಿಸಿದ ಸರ್ವೋದಯ ಹೋರಾಟ ಹಾಗೂ ಧ್ವನಿ ಮೇಲೆ ಖರ್ಗೆ ಅವರು ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸರ್ವೋದಯ ಸಮಾವೇಶ ಎಂದು ಹೆಸರಿಟ್ಟಿದ್ದೇವೆ. 52 ವರ್ಷಗಳ ನಂತರ ರಾಜ್ಯದ ನಾಯಕರು ಎಐಸಿಸಿ ಅಧ್ಯಕ್ಷರಾಗಿದ್ದಾರೆ" ಎಂದರು.

"ರಾಜ್ಯದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತೇನೆ. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ ಎಂದು. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾವು ತ್ರಿವರ್ಣ ಧ್ವಜದ ಆಶ್ರಯದಲ್ಲಿ ದೇಶಕ್ಕೆ ಸ್ವಾತಂತ್ರ್ಯ, ಶಕ್ತಿ ತಂದುಕೊಟ್ಟಿದ್ದೇವೆ" ಎಂದು ಹೇಳಿದರು.

ದೊಡ್ಡವರು ಅಲಂಕರಿಸಿದ ಸ್ಥಾನದಲ್ಲಿ ಖರ್ಗೆ ಕೂತಿದ್ದಾರೆ

ದೊಡ್ಡವರು ಅಲಂಕರಿಸಿದ ಸ್ಥಾನದಲ್ಲಿ ಖರ್ಗೆ ಕೂತಿದ್ದಾರೆ

"ಮಲ್ಲಿಕಾರ್ಜುನ ಖರ್ಗೆ ಅವರ ಈ ಜವಾಬ್ದಾರಿ ಮಹತ್ವವಾಗಿದೆ. ಗಾಂಧಿ, ಸುಭಾಷ್ ಚಂದ್ರ ಬೋಸ್, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನಿಜಲಿಂಗಪ್ಪ, ರಾಹುಲ್ ಗಾಂಧಿ ಅವರು ಅಲಂಕರಿಸಿದ ಸ್ಥಾನದಲ್ಲಿ ಖರ್ಗೆ ಅವರು ಕೂತಿದ್ದಾರೆ. ಕಾರ್ಮಿಕರ ಪುತ್ರನಾಗಿ ಕುಗ್ರಾಮದಿಂದ ಬಂದು ದೆಹಲಿವರೆಗೂ ಬೆಳೆದು ನಿಂತಿದ್ದಾರೆ. ಪಕ್ಷ ನಿಷ್ಠೆ, ಪ್ರಾಮಾಣಿಕತೆ, ತ್ಯಾಗಕ್ಕೆ ಮತ್ತೊಂದು ಹೆಸರು ಮಲ್ಲಿಕಾರ್ಜುನ ಖರ್ಗೆ ಅವರು" ಎಂದು ಶ್ಲಾಘಿಸಿದರು.

"ನಾನು ಅವರೊಂದಿಗೆ 1980 ರಿಂದ ಒಡನಾಟ ಹೊಂದಿದ್ದೇನೆ. ಪಕ್ಷ ನಿಷ್ಟೆಗಾಗಿ ಎಷ್ಟೇ ನೋವು ಇದ್ದರೂ ಒಂದು ದಿನವೂ ಮಾಧ್ಯಮದ ಮುಂದೆ ಹೇಳದೆ ಸಾಕಷ್ಟು ತ್ಯಾಗ ಮಾಡಿದ್ದಾರೆ" ಎಂದರು.

"ಮಲ್ಲಿಕಾರ್ಜುನ ಖರ್ಗೆ ಅವರು ಈ ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ಅವರ ತ್ಯಾಗದ ಗುಣದಿಂದ ಈ ಸ್ಥಾನವೇ ಅವರನ್ನು ಹುಡುಕಿಕೊಂಡು ಬಂದಿದೆ. ಅವರು ಜಾತಿ, ಧರ್ಮದ ಮೇಲೆ ನಂಬಿಕೆ ಇಟ್ಟವರಲ್ಲ. ಪರಿಶಿಷ್ಟ ಜಾತಿ ಆಧಾರದ ಮೇಲೆ ಅಧಿಕಾರ ಸಿಗಬೇಕು ಎಂದು ಬಯಸಿದವರಲ್ಲ. ಸಚಿವ ಸಂಪುಟದಲ್ಲಿ, ಅವರ ನೇತೃತ್ವದ ವಿರೋಧ ಪಕ್ಷದಲ್ಲಿ, ಅವರ ಅಧ್ಯಕ್ಷತೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಈಗ ಅವರು ಎಐಸಿಸಿ ಅಧ್ಯಕ್ಷರಾಗಿರುವಾಗ ಅವರ ಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ" ಎಂದು ಹೇಳಿದರು.

"ಪಕ್ಷ ನಿಷ್ಠೆ, ತ್ಯಾಗದ ಜತೆಗೆ ಸಮಾಜದವರಿಗೂ ನ್ಯಾಯ ಒದಗಿಸಲು ಕೆಲಸ ಮಾಡಿಕೊಂಡು ಬಂದಿದ್ದಾರೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ದೇಶದ 90ರಷ್ಟು ಮಂದಿ ಖರ್ಗೆ ಪರ ಮತ ಹಾಕಿದರು

ಈ ದೇಶದ 90ರಷ್ಟು ಮಂದಿ ಖರ್ಗೆ ಪರ ಮತ ಹಾಕಿದರು

"ನನ್ನ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರು ಇಂದು ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ದಾರೆ. ನಾನು ಹಾಗೂ ಸಂಸದ ಸುರೇಶ್ ಅವರು ಅವರನ್ನು ಭೇಟಿಯಾಗಿ 1 ಗಂಟೆ ಕಾಲ ಚರ್ಚೆ ಮಾಡಿದೆವು. ಗಾಂಧಿ ಕುಟುಂಬ ಇಲ್ಲದೇ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಬಗ್ಗೆ ಮಾತನಾಡಿದೆವು. ಭಾರತ ಐಕ್ಯತಾ ಯಾತ್ರೆ ಉದ್ಘಾಟನೆಗೆ ಆಹ್ವಾನ ಕೊಟ್ಟೆವು. ದಸರಾ ಹಬ್ಬದ ಸಮಯದಲ್ಲಿ ಅವರು ರಾಜ್ಯಕ್ಕೆ ಆಗಮಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಶಕ್ತಿ ತುಂಬಿದರು" ಎಂದು ಹೇಳಿದರು.

"ರಾಹುಲ್ ಗಾಂಧಿ ಅವರು ದೇಶದ ಏಕತೆ, ಸಮಗ್ರತೆ, ಐಕ್ಯತೆ, ಶಾಂತಿ, ನಿರುದ್ಯೋಗಿ ಯುವಕರು, ರೈತರು, ಕಾರ್ಮಿಕರಿಗೆ ಶಕ್ತಿ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಹೆಜ್ಜೆ ಹಾಕುವ ಸಮಯದಲ್ಲಿ ಈ ಚುನಾವಣೆ ನಡೆಯಿತು. ನಮ್ಮ ರಾಜ್ಯದ ನಾಯಕರನ್ನು ಈ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೆಸರು ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು. ಈ ದೇಶದ 90ರಷ್ಟು ಮಂದಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ಮತ ಹಾಕಿದರು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. ಯಾತ್ರೆ ರಾಜ್ಯದಲ್ಲಿ ಮುಕ್ತಾಯ ಆಗುವ ಹೊತ್ತಿಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ" ಎಂದು ಡಿಕೆಶಿ ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371ಜೆ ತಂದದ್ದು ಖರ್ಗೆ

ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371ಜೆ ತಂದದ್ದು ಖರ್ಗೆ

"ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಮಾತ್ರ ಅಲ್ಲ, ಇಡೀ ರಾಷ್ಟ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ. ಸೋನಿಯಾ ಗಾಂಧಿ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು ಬಡವರ ಪರವಾಗಿ ಬಂಡೆಯಂತೆ ಕೆಲಸ ಮಾಡುವ ನಾಯಕ. ರೈಲ್ವೆ, ಕಾರ್ಮಿಕ ಸಚಿವರಾಗಿ ಇತಿಹಾಸ ನಿರ್ಮಿಸಿದ್ದಾರೆ. ಕಾರ್ಮಿಕರಿಗೆ ಸಾಂವಿಧಾನಿಕ ಹಕ್ಕು ನೀಡಿದ್ದಾರೆ. ಇಎಸ್‌ಐ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಮಾಡಿ ಕಾರ್ಮಿಕರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗುವಂತೆ ಮಾಡಿರುವುದು ಮಲ್ಲಿಕಾರ್ಜುನ ಖರ್ಗೆ" ಎಂದರು.

"ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಮತ್ತೊಂದು ಇತಿಹಾಸ ಎಂದರೆ ಅವರು ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371ಜೆ ತಂದದ್ದು. ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಲು ಆಗುವುದಿಲ್ಲ ಎಂದು ಹೇಳಿತ್ತು. ಆದರೆ ಈ ಹಿಂದುಳಿದ ಪ್ರದೇಶ, ಜನರಿಗೆ ನ್ಯಾಯ ಒದಗಿಸಲು ಖರ್ಗೆ ಅವರು ಹೋರಾಟ ಮಾಡಿದರು. ಅವರು ದೆಹಲಿಗೆ ಸಂಸತ್ ಸದಸ್ಯರಾಗಿ ಹೋದಾಗ, ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರನ್ನು ಒಪ್ಪಿಸಿ ಇತರೆ ವಿರೋಧ ಪಕ್ಷಗಳ ಬೆಂಬಲ ಪಡೆದು ವಿಶೇಷ ಸ್ಥಾನ ಮಾನ ಸಿಗುವಂತೆ ಮಾಡಿದರು. ಇದು ಖರ್ಗೆ ಅವರ ಜೀವನ ಸಾಧನೆಯ ಸಾಕ್ಷಿಗುಡ್ಡೆ. ನಾವು ಎಷ್ಟು ದಿನ ಬದುಕುತ್ತೇವೆ, ಅಧಿಕಾರದಲ್ಲಿ ಇರುತ್ತೇವೆ ಎಂಬುದು ಮುಖ್ಯವಲ್ಲ. ಏನು ಮಾಡಿದ್ದೇವೆ ಎಂದು ಮುಖ್ಯ" ಎಂದು ಡಿಕೆ ಶಿವಕುಮಾರ್ ತಿಳಿಸಿದರು.

40% ಲಂಚ ಪಡೆಯುತ್ತಿದ್ದೆ ಬಿಜೆಪಿ ಸರ್ಕಾರ: ಡಿಕೆಶಿ

40% ಲಂಚ ಪಡೆಯುತ್ತಿದ್ದೆ ಬಿಜೆಪಿ ಸರ್ಕಾರ: ಡಿಕೆಶಿ

"ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರು ಚುನಾವಣೆ ಸಮಯದಲ್ಲಿ 600 ಭರವಸೆ ನೀಡಿದ್ದು, ಅದರಲ್ಲಿ 550 ಈಡೇರಿಸಿಲ್ಲ. ನಾವು ದಿನನಿತ್ಯ ಪ್ರಶ್ನೆ ಹಾಕಿ ಅವರಿಂದ ಉತ್ತರ ಕೇಳುತ್ತಿದ್ದೇವೆ. ಆದರೆ ಇದುವರೆಗೂ ಒಂದೂ ಪ್ರಶ್ನೆಗೂ ಉತ್ತರ ನೀಡಲು ಆಗಿಲ್ಲ. ಡಬಲ್ ಇಂಜಿನ್ ಸರ್ಕಾರ ನೀರಾವರಿ ಯೋಜನೆ ಬಗ್ಗೆ ಕೊಟ್ಟ ಭರವಸೆ ಏನಾಯ್ತು..? ನುಡಿದಂತೆ ನಡೆಯಲು ನಿಮ್ಮಿಂದ ಆಗಲಿಲ್ಲ. ಪಂಪ್ ಸೆಟ್ ಗೆ ಸೋಲಾರ್ ಹಾಕುವ ರೈತರಿಗೆ ಶೆ.100ರಷ್ಟು ಸಬ್ಸಿಡಿ ನೀಡುತ್ತೇವೆ ಎಂದಿರಿ, ಅದು ಏನಾಯ್ತು..? ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಆಧಾರದ ಮೇಲೆ ಬಜೆಟ್ ಅನುದಾನ ನೀಡಲು ಕಾನೂನು ತೆಗೆದುಕೊಂಡು ಬಂದೆವು. ಆದರೆ ನೀವು ಅವರಿಗೆ ರಕ್ಷಣೆ ನೀಡಲಿಲ್ಲ. ಮದಕರಿ ನಾಯಕರ ಹೆಸರಲ್ಲಿ ಮನೆ ನಿರ್ಮಾಣ ಯೋಜನೆಗೆ 6500 ಕೋಟಿ ನೀಡುವುದಾಗಿ ಹೇಳಿದ್ದೀರಿ. ಅದನ್ನು ಮಾಡಲಿಲ್ಲ" ಎಂದರು.

"ಪ್ರಧಾನ ಮಂತ್ರಿ ಅವರು ಹೇಳಿದಂತೆ ರೈತರ ಆದಾಯ ಡಬಲ್ ಆಯಿತೆ? ರೈತರಿಗೆ ನೇರ ಮಾರುಕಟ್ಟೆ ನಿರ್ಮಾಣ ಎಂದಿರಿ. ಅವರಿಗೆ ಸಹಾಯ ಮಾಡಲು ಆಗಲಿಲ್ಲ. ರೈತನಿಗೆ ಪಿಂಚಣಿ, ನಿವೃತ್ತಿ, ಬಡ್ತಿ, ಲಂಚ ಇಲ್ಲ. ಆದರೆ ನಿಮ್ಮ ಸರ್ಕಾರ 40% ಲಂಚ ಪಡೆಯುತ್ತಿದೆ. ರೈತರ ಬೆಳೆಗೆ ಉತ್ತಮ ಬೆಲೆ ನೀಡಲಿಲ್ಲ. ಆದಾಯ ಪಾತಾಳ ಸೇರಿದ್ದು, ಬೆಲೆ ಗಗನಕ್ಕೇರಿದೆ. ರಾಹುಲ್ ಗಾಂಧಿ ಅವರು ರೇಷ್ಮೆ ಕೃಷಿಕರ ಜತೆ ಮಾತುಕತೆ ಮಾಡಿದರು. ನೀವು ರೇಷ್ಮೆ ರೈತರಿಗೆ 1700 ಕೋಟಿ ನೀಡುವುದಾಗಿ ಹೇಳಿದ್ದೀರಿ. 1 ಕೋಟಿಯನ್ನು ಕೊಡಲಿಲ್ಲ. ಹೀಗೆ ನೀವು ನುಡಿದಂತೆ ನಡೆಯಲಿಲ್ಲ. ವಚನಭ್ರಷ್ಟರಾಗಿದ್ದೀರಿ" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+