ಸಿದ್ದರಾಮಯ್ಯಗೆ ಅನಂತಮೂರ್ತಿ ಸಲಹೆ ಏನು?
ಬೆಂಗಳೂರು, ಅ,22 : "ಸ್ವಂತದೊಂದು ಇ-ಮೇಲ್ ಐಡಿ ಸೃಷ್ಟಿಸಿಕೊಳ್ಳಿ ಜೊತೆಗೆ ಸೈಬರ್ ಸೇನೆ ಇಟ್ಟುಕೊಳ್ಳಿ" ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ದೇಶದ ಶೇಷ್ಠ ಸಿಎಂ ಎಂಬ ಹೆಗ್ಗಳಿಗೆ ಪಡೆಯಬೇಕು ಎಂದು ಈ ಮಾತು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಮ ಸಮಾಜ ವೇದಿಕೆ ಮತ್ತು ಕಲಾಕೃತಿ ಪ್ರಕಾಶನ ಸಂಸ್ಥೆ ಆಶ್ರಯದಲ್ಲಿ ನಡೆದ '2013 ಬಜೆಟ್ ಚರ್ಚೆ' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅನಂತಮೂರ್ತಿ, ಸಿಎಂ ಸಿದ್ದರಾಮಯ್ಯ ಇತ್ತಿಚೆಗೆ ಜನರ ಕೈಗೆ ಸಿಗುತ್ತಿಲ್ಲ ಎಂಬ ಮಾತಿದೆ. ಈ ಬಗ್ಗೆ ಅವರು ಗಮನ ಹರಿಸಬೇಕು ಎಂದು ಅನಂತಮೂರ್ತಿ ಹೇಳಿದರು.

ಜನರ ಸಮಸ್ಯೆಗಳಿಗೆ ಅಥವಾ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸುವ ದೃಷ್ಟಿಯಿಂದ ಸ್ವಂತದೊಂದು ಇ-ಮೇಲ್ ವಿಳಾಸ ಸೃಷ್ಟಿಸಿಕೊಂಡರೆ ಉತ್ತಮ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶದಲ್ಲೇ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆಯಬೇಕು ಎಂಬ ಉದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ ಎಂದರು.
ಸೈಬರ್ ಸೇನೆ : ಇಂದಿನ ದಿನಗಳಲ್ಲಿ ಸೈಬರ್ ಲೋಕ ಒಂದು ಅದ್ಭುತವಾದ ಪ್ರಪಂಚ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಹೇಳಿಕೆ ನೀಡಿದಾಗ ದೇಶಾದ್ಯಂತ ಅಂತರ್ಜಾಲ ತಾಣದಲ್ಲಿ ಮೋದಿ ಸೇನೆ ಸದಸ್ಯರು ಟೀಕಿಸಿದರು. ಹೀಗೆಯೇ ಸಿದ್ದರಾಮಯ್ಯ ಸೈಬರ್ಸೇನೆ ಇಟ್ಟುಕೊಳ್ಳಬೇಕು. ಇದಕ್ಕೂ ಮೊದಲು ಇ ಮೇಲ್ ಖಾತೆ ತೆರೆಯಬೇಕು ಎಂದು ತಿಳಿಸಿದರು. (ಮೋದಿಯ ಭಾರತದಲ್ಲಿ ನಾನಿರೋಲ್ಲ : ಅನಂತಮೂರ್ತಿ)
ಸಿದ್ದರಾಮಯ್ಯ ಈ ಹಿಂದೆ ರಾಜ್ಯದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೆಲವರು, 100 ಕುರಿ ಕಾಯುವ ಸಾಮರ್ಥ್ಯ ಇಲ್ಲದವರು ರಾಜ್ಯದ ಹಣಕಾಸು ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಆದರೆ, ಕುರಿ ಕಾಯುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೂ ವೃತ್ತಿ ಪರತೆ ಬೇಕು. ಇಂಥ ಟೀಕೆಗಳೆಲ್ಲವನ್ನೂ ಸಹಿಸಿಕೊಂಡು ಅವರು ಹಣಕಾಸು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಅನಂತಮೂರ್ತಿ ಶ್ಲಾಘಿಸಿದರು.
ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಉದ್ಯೋಗ ನೀಡುವಂತಹ ಕೈಗಾರಿಕೆಗಳನ್ನು ನಿರ್ಮಿಸಬೇಕು. ಎಸ್ಎಸ್ಎಲ್ಸಿ ಪೂರ್ಣಗೊಳಿಸಿದವರಿಗೂ ಉದ್ಯೋಗ ದೊರೆಯುವ ವಾತಾವರಣ ಸೃಷ್ಟಿಯಾಗಬೇಕು ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರು ತಮ್ಮ ನೈಜತೆಯನ್ನು ಕೆಲಮಟ್ಟಿಗೆ ಕಳೆದುಕೊಂಡಿದ್ದಾರೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಹಿತಿ ಮರುಳ ಸಿದ್ದಪ್ಪ ಮಾತನಾಡಿ, ನಾವು ಮುಖ್ಯಮಂತ್ರಿಗಳನ್ನು ಓಲೈಕೆ ಮಾಡುತ್ತಿದ್ದೇವೆ ಎಂದು ಟೀಕೆಗಳು ಕೇಳಿ ಬರುತ್ತಿವೆ. ನಮಗೆ ಕುರ್ಚಿಯ ವ್ಯಾಮೋಹವಿಲ್ಲ. ಆದ್ದರಿಂದ ಓಲೈಕೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ದೇಗುಲ ಮತ್ತು ಹೊಟೇಲ್ನಲ್ಲಿ ಮೇಲ್ವರ್ಗದವರು ಹೊಂದಿರುವ ಹಿಡಿತ ತಪ್ಪಿಸಿದರೆ ದೊಡ್ಡ ಕ್ರಾಂತಿ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. [ಸಿದ್ದರಾಮಯ್ಯ ಮಹಾ ಬುದ್ಧಿವಂತ]












Click it and Unblock the Notifications