Get Updates
Get notified of breaking news, exclusive insights, and must-see stories!

ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ಇಲ್ಲ: GBA ಆದೇಶ

ಬೆಂಗಳೂರು: ಹಿಂದುಗಳ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯ ಪ್ರಯುಕ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಗುರುವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಫೆಬ್ರವರಿ 15ರಂದು (ಭಾನುವಾರ) ನಗರದಾದ್ಯಂತ ಕಸಾಯಿ ಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದೆ.

ಹಬ್ಬದ ದಿನದಂದು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಹಬ್ಬಹರಿದಿನಗಳಲ್ಲಿ ಅಥವಾ ಜಯಂತಿಗಳಂದು ಇಂತಹ ನಿಷೇಧ ಹೇರುವುದು ವಾಡಿಕೆ, ಅದರಂತೆ ಈ ಬಾರಿಯ ಮಹಾಶಿವರಾತ್ರಿಗೂ ಈ ನಿಯಮ ಅನ್ವಯವಾಗಲಿದೆ.

Mahashivratri

ಆದೇಶದಲ್ಲಿ ಏನಿದೆ?

ಜಿಬಿಎ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಸಾಯಿ ಖಾನೆಗಳಲ್ಲಿ ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ. ಹಾಗೆಯೇ, ಚಿಕನ್, ಮಟನ್, ಫಿಶ್ ಸೇರಿದಂತೆ ಯಾವುದೇ ರೀತಿಯ ಹಸಿ ಮಾಂಸವನ್ನು ಮಾರಾಟ ಮಾಡುವ ಅಂಗಡಿಗಳನ್ನು ಫೆಬ್ರವರಿ 15ರಂದು ತೆರೆಯುವಂತಿಲ್ಲ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾಂಸದ ಅಡುಗೆಗೆ ನಿಷೇಧವಿಲ್ಲದಿದ್ದರೂ, ಕಚ್ಚಾ ಮಾಂಸದ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಭಾನುವಾರ ಸಾಮಾನ್ಯವಾಗಿ ಮಾಂಸಹಾರಿಗಳಿಗೆ 'ಬಾಡೂಟ'ದ ದಿನವಾಗಿರುತ್ತದೆ, ಆದರೆ ಈ ಬಾರಿ ಭಾನುವಾರವೇ ಶಿವರಾತ್ರಿ ಬಂದಿರುವುದರಿಂದ ಮಾಂಸಪ್ರಿಯರು ಸಸ್ಯಾಹಾರಿಗಳಾಗಬೇಕಿದೆ. ನಿಯಮ ಉಲ್ಲಂಘಿಸಿ ಕದ್ದುಮುಚ್ಚಿ ಮಾಂಸ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮಹಾಶಿವರಾತ್ರಿಯ ಮಹತ್ವ

ಮಹಾಶಿವರಾತ್ರಿ ಹಿಂದುಗಳ ಪಾಲಿಗೆ ಅತ್ಯಂತ ಶ್ರೇಷ್ಠವಾದ ಹಬ್ಬ. ಇದು ಕೇವಲ ಆಚರಣೆಯಲ್ಲ, ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗುವ ಹಾದಿ ಎಂದು ನಂಬಲಾಗಿದೆ. ಶಿವ ಮತ್ತು ಪಾರ್ವತಿಯರ ದಿವ್ಯ ವಿವಾಹದ ಸಂಕೇತವಾಗಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಭಕ್ತರು ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಶಿವನ ಧ್ಯಾನದಲ್ಲಿ ತೊಡಗುತ್ತಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತವೆ. ಇಂತಹ ಪವಿತ್ರ ದಿನದಂದು ಸಾತ್ವಿಕ ವಾತಾವರಣ ನಿರ್ಮಿಸಲು ಮಾಂಸ ಮಾರಾಟ ನಿಷೇಧ ಸಹಕಾರಿಯಾಗುತ್ತದೆ ಎಂಬುದು ಆಡಳಿತ ಮಂಡಳಿಯ ಅಭಿಪ್ರಾಯ.

ದೇಶಾದ್ಯಂತ ಇದೇ ಮಾದರಿ ಕ್ರಮಗಳು

ಕೇವಲ ಬೆಂಗಳೂರು ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿಯೂ ಧಾರ್ಮಿಕ ಮತ್ತು ರಾಷ್ಟ್ರೀಯ ದಿನಗಳಂದು ಮಾಂಸ ಮಾರಾಟದ ಮೇಲೆ ನಿಷೇಧ ಹೇರುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಉದಾಹರಣೆಗೆ, ಪವಿತ್ರ ಯಾತ್ರಾ ಸ್ಥಳವಾದ ಅಯೋಧ್ಯೆಯಲ್ಲಿ ಇತ್ತೀಚೆಗೆ ಸ್ಥಳೀಯಾಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿತ್ತು. ಅಲ್ಲಿನ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾಂಸಹಾರ ನಿಷೇಧಿಸಿದ್ದಲ್ಲದೆ, ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ಗಳ ಮೂಲಕವೂ ಮಾಂಸಹಾರ ಸರಬರಾಜು ಮಾಡುವುದನ್ನು ನಿರ್ಬಂಧಿಸಲಾಗಿತ್ತು.

ಬೆಂಗಳೂರಿನ ನಾಗರಿಕರು ಮತ್ತು ಮಾಂಸದ ವ್ಯಾಪಾರಿಗಳು ಜಿಬಿಎ ಆದೇಶವನ್ನು ಪಾಲಿಸುವ ಮೂಲಕ ಹಬ್ಬದ ಆಚರಣೆಗೆ ಸಹಕರಿಸಬೇಕು ಎಂದು ಜಿಬಿಎ ಮನವಿ ಮಾಡಿಕೊಂಡಿದೆ. ಸೋಮವಾರದಿಂದ ಎಂದಿನಂತೆ ವ್ಯಾಪಾರ ವಹಿವಾಟು ಮುಂದುವರಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+