ಫೆ.4ರಂದು ಬೆಂಗಳೂರು ಬಂದ್ ಇಲ್ಲ : ವಾಟಾಳ್
ಬೆಂಗಳೂರು, ಫೆಬ್ರವರಿ 02 : 'ಫೆಬ್ರವರಿ 4ರಂದು ಬೆಂಗಳೂರು ಬಂದ್ ಇಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಬಂದ್ ವಾಪಸ್ ಪಡೆದಿದ್ದೇವೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಮಾತನಾಡಿದ ವಾಟಾಳ್ ನಾಗರಾಜ್, 'ನಮ್ಮ ಜೊತೆಗೆ ಇದ್ದವರೇ ಮಿರ್ ಸಾಧಿಕ್ ರೀತಿ ವರ್ತಿಸಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ' ಎಂದು ಹೇಳಿದರು.

'ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ಫೆ.4ರ ಬೆಂಗಳೂರು ಬಂದ್ ವಾಪಸ್ ಪಡೆಯಲಾಗಿದೆ. ಆದರೆ, ಅಂದು ಕರಾಳ ದಿನಾಚರಣೆಯನ್ನು ಮಾಡುತ್ತೇವೆ' ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, 'ನರೇಂದ್ರ ಮೋದಿ ಅವರ ಬಳಿ ಮಾತನಾಡಲು ಅವರಿಗೆ ಏಕೆ ಸಾಧ್ಯವಿಲ್ಲ?. ನಿಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ' ಎಂದರು.
ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಫೆ.4ರಂದು ಬೆಂಗಳೂರು ಬಂದ್ ಕರೆ ನೀಡಲಾಗಿತ್ತು. ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೋದಿ ಅಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.












Click it and Unblock the Notifications