ಡಿಕೆಶಿ ಭೇಟಿಯಾದ ರೇಣುಕಾಚಾರ್ಯ: ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿದ್ದಿಷ್ಟು!
ಮಾಜಿ ಸಚಿವ, ಬಿಜೆಪಿ ಮುಖಂಡ ರೇಣುಕಾಚಾರ್ಯ ಇಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳ್ಳಿ ಕ್ಷೇತ್ರದಲ್ಲಿ ಸೋತಿರುವ ರೇಣುಕಾಚಾರ್ಯ, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಡಿಕೆ ಶಿವಕುಮಾರ್ ಅವರ ಭೇಟಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ಇದೊಂದು ಸೌಹಾರ್ದ ಭೇಟಿ, ಡಿಕೆ ಶಿವಕುಮಾರ್ ನಮಗೆ ಆಪ್ತರು, ಉತ್ತಮ ಬಾಂಧವ್ಯ ಇದೆ ಆ ಕಾರಣಕ್ಕೆ ಭೇಟಿ ಮಾಡಿದ್ದೇನೆ, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

"ರಾಜಕೀಯ ಹೊರತುಪಡಿಸಿ ನಮ್ಮ ಅವರ ಸ್ನೇಹ ಇದೆ, ಹಿಂದೆ ಕೂಡ ಅನೇಕ ಬಾರಿ ಭೇಟಿ ಮಾಡಿದ್ದೇನೆ. ಹೊನ್ನಾಳಿ ಕೃಷಿ ಮೇಳಕ್ಕೆ ಆಹ್ವಾನ ನೀಡಿದ್ದೆ, ಇದು ಕೂಡ ಸೌಜನ್ಯದ ಭೇಟಿಯಷ್ಟೆ ಬೇರೆ ಯಾವುದೇ ಉದ್ದೇಶ ಇಲ್ಲ" ಎಂದು ಹೇಳಿದರು.
ಹೊಂದಾಣಿಕೆ ರಾಜಕಾರಣದ ಬಗ್ಗೆ ರೇಣುಕಾಚಾರ್ಯ ಪ್ರತಿಕ್ರಿಯೆ
ಇನ್ನು ಪ್ರತಾಪ್ ಸಿಂಹ ಮತ್ತು ಸಿಟಿ ರವಿ ಮಾಡಿರುವ ಮಾಡಿರುವ ಬಿಜೆಪಿ-ಕಾಂಗ್ರೆಸ್ ನಾಯಕರ ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಟಿ ರವಿ, ಪ್ರತಾಪ್ ಸಿಂಹ ಅವರನ್ನೇ ಕೇಳಬೇಕು, ನನಗೆ ಮಾಹಿತಿ ಇಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೆ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲ, ಅವರನ್ನೇ ಕೇಳಿ" ಎಂದು ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಹಿರಿಯನ ನಾಯಕರ ಮೌನದ ಬಗ್ಗೆ ಟೀಕೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಹಿರಿಯ ನಾಯಕರು ಸುಮ್ಮನಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವುದಾಗಲಿ, ಟೀಕಿಸುವುದಾಗಲಿ ಮಾಡುತ್ತಿಲ್ಲ. ಅನೇಕ ಹಿರಿಯ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಜೊತೆ ಶಾಮೀಲಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮತ್ತು ಸಿ.ಟಿ. ರವಿ ಆರೋಪ ಮಾಡಿದ್ದರು.
ಎರಡೂ ಪಕ್ಷದ ನಾಯಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾ ಬಿಜೆಪಿ ನಾಯಕರನ್ನು ಅಕ್ರಮ ಮಾಡಿದ್ದಾರೆ, ತನಿಖೆ ಮಾಡುತ್ತೇವೆ ಎಂದು ಹೆದರಿಸಿದರೆ, ಬಿಜೆಪಿ ಕೂಡ ಅಧಿಕಾರಕ್ಕೆ ಬಂದಾಗ ತನಿಖೆ ಮಾಡುವುದಾಗಿ ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತದೆ, ಆದರೆ ತನಿಖೆ ಮಾಡಲ್ಲ ಎಂದು ಪ್ರತಾಪ್ ಸಿಂಹ ಕಿಡಿ ಕಾರಿದ್ದರು.
ಪ್ರತಾಪ್ ಸಿಂಹ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಟ್ವೀಟ್ ಮಾಡಿ "ಪ್ರತಾಪ್ ಸಿಂಹ ಮತ್ತು ಸಿಟಿ ರವಿ ಅವರು, ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಅವರು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.












Click it and Unblock the Notifications