ಸಚಿವರ ಮನೆ ಸುತ್ತ ಕಸ ಎತ್ತಿ ಲೋಕಸತ್ತಾ ಪ್ರತಿಭಟನೆ
ಬೆಂಗಳೂರು, ಜೂ.9: ಬಿಬಿಎಂಪಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸೋತು, ದಬ್ಬಾಳಿಕೆಯ ಮೂಲಕ ಮಂಡೂರಿನ ಜನರ ಮೇಲೆ ಕಸ ಸುರಿಯುತ್ತಿರುವುದನ್ನು ವಿರೋಧಿಸಿ ಲೋಕಸತ್ತಾ ಪಕ್ಷವು ಬೆಂಗಳೂರು ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಮನೆ ಬಳಿ ಜೂ.8 ಭಾನುವಾರ ಪ್ರತಿಭಟನೆ ನಡೆಸಿತು.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಪ್ರತಿಭಟನೆ, ಸಚಿವರ ನೆರೆಹೊರೆಯಲ್ಲಿ ಮನೆ ಮನೆಯಿಂದ ಬೇರ್ಪಡಿಸಿದ ಕಸವನ್ನು ಮಾತ್ರ ಪಡೆದು, ಮಂಡೂರಿನ ಜನತೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕರಪತ್ರ ಹಂಚಿ ಮತ್ತು ಘೋಷಣೆ ಕೂಗುವ ಮೂಲಕ ಜನರಿಗೆ ತಿಳಿಸಿ ಹೇಳಲಾಯಿತು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಸ್.ಮುಕುಂದ ಅವರು ಮಾತನಾಡಿ ಸಮಸ್ಯೆಗೆ ಪರಿಸರ ಸ್ನೇಹಿ ಮತ್ತು ಕಡಿಮೆ ಖರ್ಚಿನ ಕಸ ನಿರ್ವಹಣೆ ವಿಧಾನ ಇದ್ದರೂ ಅವೈಜ್ಞಾನಿಕ ಪದ್ದತಿಯನ್ನು ಪಾಲಿಕೆ ಬೇಕಂತಲೇ ಅನುಸರಿಸುತ್ತಿದೆ. ಇದು ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರರಿಗೆ ಲಾಭ ಮಾಡಿಕೊಡಲು ಪಾಲಿಕೆ ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.[ಮಂಡೂರು ಜನತೆ ಅನುಭವಿಸುವ ಕಷ್ಟ ಓದಿ]
ಬಿಬಿಎಂಪಿ ಗುತ್ತಿಗೆದಾರರ, ಕಸದ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ಏಜೆಂಟುರುಗಳ ಕಪಿ ಮುಷ್ಟಿಯಲ್ಲಿದ್ದು, ಈ ಕಾರಣಕ್ಕಾಗಿ ಸಾಲದ ಸಂಕೋಲೆಯಲ್ಲಿರುವ ಪಾಲಿಕೆಯು ನಗರದ ಅನೇಕ ಕಟ್ಟಡಗಳನ್ನು ಒತ್ತೆ ಇಡಬೇಕಾಗಿ ಬಂದಿದೆ.ಇದೇ ರೀತಿ ಮುಂದುವರೆದರೆ,ಮುಂದೆ ಇಡೀ ಪಾಲಿಕೆಯನ್ನೇ ಹರಾಜಿಗೆ ಇಡಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಸತ್ತಾ ಪಕ್ಷದ ವತಿಯಿಂದ ಪ್ರಸ್ತಾಪಿಸಲಾಗಿರುವ 'ಡಂಪಿಂಗ್ ಸಾಕು' ಕರಡು ಮಸೂದೆಯ ಪ್ರತಿಯನ್ನು ಮನವಿಪತ್ರವನ್ನು ಸಚಿವರ ಆಪ್ತ ಸಹಾಯಕರಿಗೆ ನೀಡಲಾಯಿತು.
ಕಸದ ಸಮಸ್ಯೆ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಡಾ. ಮೀನಾಕ್ಷಿ ಭರತ್ ಮಾತನಾಡಿ, ನಗರದಲ್ಲಿ ಮೂಲದಲ್ಲಿಯೇ ಬೇರ್ಪಡಿಸಿದ ಕಸ ಪಡೆದು, ಸ್ಥಳೀಯವಾಗಿ ಸಂಸ್ಕರಿಸುವುದು, ಪ್ಲಾಸ್ಟಿಕ್, ಕಾಗದ ಮತ್ತು ಇತ್ಯಾದಿಗಳನ್ನು ಮರುಬಳೆಕೆ ಮಾಡುವ ವಿಧಾನವನ್ನು ಅನುಸರಿಸಲು ಪಾಲಿಕೆಯು ಗಂಭೀರ ಪ್ರಯತ್ನ ಮಾಡಬೇಕು. ಪಾಲಿಕೆಯು ಗಂಭೀರವಾಗಿ ಪ್ರಯತ್ನಿಸುವುದಾದರೆ, ಪಕ್ಷದ ಕಾರ್ಯಕರ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದಾಗಿ ಸಚಿವರಿಗೆ ಈ ಸಂದರ್ಭದಲ್ಲಿ ತಿಳಿಸಲಾಯಿತು.
ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ದೀಪಕ್ ಸಿ.ಎನ್, ಕಾರ್ಯದರ್ಶಿ ರವಿ ಕುಮಾರ್ ಎಸ್, ಹಲವಾರು ಕಾರ್ಯಕರ್ತರು ನಗರದ ಅನೇಕ ನಾಗರಿಕರು ಭಾಗವಹಿಸಿದ್ದರು.