ಕೆರೆ ಒತ್ತುವರಿ ತೆರವಿಗೆ ಲೋಕಾಯುಕ್ತರಿಂದ ಬಿಬಿಎಂಪಿಗೆ 2 ತಿಂಗಳ ಗಡುವು
ಬೆಂಗಳೂರು, ಜನವರಿ 18: ಕೆರೆಗಳ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಲೋಕಾಯುಕ್ತರು ಎರಡು ತಿಂಗಳ ಗಡುವು ನೀಡಿದ್ದಾರೆ.
ಬೆಂಗಳೂರಿನ ಕೆರೆಗಳ ಸಂಬಂಧ 'ಯುನೈಟೆಡ್ ಬೆಂಗಳೂರು' ಸಲ್ಲಿಸಿದ ದೂರಿನ ಎರಡನೇ ವಿಚಾರಣೆ ಬುಧವಾರ ನಡೆಯಿತು. ಈ ವಿಚಾರಣೆ ವೇಳೆ ಲೋಕಾಯುಕ್ತರು ಈ ಆದೇಶ ನೀಡಿದ್ದಾರೆ.
ವಿಚಾರಣೆ ವೇಳೆ ಕೆರೆಗಳ ಒತ್ತುವರಿಯಾಗಿರುವುದನ್ನು ಮತ್ತು ಮಾಲಿನ್ಯಗೊಂಡಿರುವುದನ್ನು ಬಿಡಿಎ, ಬಿಬಿಎಂಪಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಸಂದರ್ಭ ಕೆರೆಗಳ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಬಿಡಿಎಗೆ ಮೂರು ತಿಂಗಳು ಹಾಗೂ ಬಿಬಿಎಂಪಿಗೆ 2 ತಿಂಗಳ ಗಡುವು ನೀಡಿ ಲೋಕಾಯುಕ್ತರು ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ ಕೊಳಚೆ ನೀರು ಕೆರೆಗಳಿಗೆ ಸೇರುವುದನ್ನು ತಡೆಯಲು ರೂಪಿಸಿರುವ ಯೋಜನೆಯ ವರದಿ ನೀಡುವಂತೆ ಜಲಮಂಡಳಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಇದಲ್ಲದೆ ಲೋಕಾಯುಕ್ತರು ಏಪ್ರಿಲ್ 15ರ ವಿಚಾರಣೆಗೆ ಮೊದಲು ಖುದ್ದಾಗಿ ಕೆರೆಗಳ ತಪಾಸಣೆ ನಡೆಸಲಿದ್ದಾರೆ. ಯುನೈಟೆಡ್ ಬೆಂಗಳೂರು ಪ್ರತಿನಿಧಿಗಳು, ಅಧಿಕಾರಿಗಳ ಜತೆ ಅವರು ಮೊದಲ ಹಂತದ ವೀಕ್ಷಣೆಯನ್ನು ಜನವರಿ 31ರಂದು ಬೈರಮಂಗಲ ಜಲಾಶಯ, ವೃಷಭಾವತಿ ಕರೆಯಲ್ಲಿ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಫೆಬ್ರವರಿ 2ರಂದು ತಲಘಟ್ಟಪುರ, ಸೋಮಪುರ, ಗುಬ್ಬಾಲಾಳ, ವಸಂತಪುರ, ಸಾರಕ್ಕಿ ಕೆರೆಗಳ ಪರಿಶೀಲನೆ ನಡೆಸಲಿದ್ದಾರೆ.
ಪ್ರತೀ ಕೆರೆಯ ಪುನರುಜ್ಜೀವನ ಸಂಬಂಧ ರೂಪಿಸಿರುವ ಯೋಜನೆಯ ವರದಿ ನೀಡುವಂತೆ ಯುನೈಟಡ್ ಬೆಂಗಳೂರಿಗೆ ಲೋಕಾಯುಕ್ತರು 2 ರಿಂದ 3 ತಿಂಗಳ ಸಮಯ ನೀಡಿದ್ದಾರೆ.
ಲೋಕಾಯುಕ್ತರ ಆದೇಶಕ್ಕೆ 'ಯುನೈಟೆಡ್ ಬೆಂಗಳೂರು' ಮಾರ್ಗದರ್ಶಕರಾದ ಹಿರಿಯ ಸ್ವಾತಂತ್ರ್ಯ ಹೋರಾಟ ಎಚ್.ಎಸ್. ದೊರೆಸ್ವಾಮಿ ಹಾಗೂ ಸಂಸ್ಥೆಯ ಪೋಷಕರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ತಜ್ಞರ ಜತೆ ಸೇರಿ ಕೆರೆ ಪುಜರುಜ್ಜೀವನ ಯೋಜನೆ ರೂಪಿಸಿ ಲೋಕಾಯುಕ್ತರಿಗೆ ವರದಿ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications