ಮತದಾರರಿಗೆ ಶಿವಕುಮಾರ ಸ್ವಾಮಿಗಳು ಆದರ್ಶವಾಗಲಿ

ಬೆಂಗಳೂರು, ಏಪ್ರಿಲ್ 17 : ಅಹಿತಕರ ಘಟನೆಗಳು ನಡೆಯದೆ ಮತದಾನ ಶಾಂತಿಯುತವಾಗಿದೆ. ಆದರೆ ಹೆಚ್ಚು ಮತದಾನ ಆಗಿಲ್ಲ ಎಂಬುದೇ ಅಹಿತಕರ

ಮತದಾನ ನೀರಸ, ಮಳೆ ಆಟ-ಕಾಟ ಶುರು: ರಾಜ್ಯದಲ್ಲಿ ಮತದಾನ ತೀರಾ ನೀರಸವಾಗಿ ಸಾಗುತ್ತಿದೆ. ಎದ್ದೇಳಿ ಮತದಾರರೇ ಇನ್ನಾದರೂ ಮತಗಟ್ಟೆಗೆ ಬನ್ನಿ... ತಡವಾಗಿಯಾದರೂ ಬನ್ನಿ ಇನ್ನೂ 10 ನಿಮಿಷ ಹೆಚ್ಚಿಗೆ ನಿಮಗಾಗಿ ಕಾಯುವೆವು ಎಂದು ಚುನಾವಣಾ ಆಯೋಗದವರು ಹೇಳುತ್ತಿದ್ದಾರೆ.

ಅಂದರೆ ಮತ ಹಾಕುವ ಸಮಯವನ್ನು ಸಂಜೆ 6 ಗಂಟೆಯ ನಂತರ ಇನ್ನೂ 10 ನಿಮಿಷ ವಿಸ್ತರಿಸಲಾಗಿದೆ. ಮತ ಹಾಕಿ. ಈ ಮಧ್ಯೆ ಅಲ್ಲಲ್ಲಿ ಮಳೆ ಆಟ-ಕಾಟ ಶುರುವಾಗಿದೆ.

Lok Sabha Election 2014 Phase 5 polling in Karnataka- April 17
ಬಿಡದಿ ನಿತ್ಯಾನಂದ ಆಶ್ರಮದ ನಿತ್ಯಾನಂದ ಸ್ವಾಮಿ ರಾಮನಗರದಲ್ಲಿ ಮತದಾನ ಮಾಡಿದ್ದಾರೆ. 'ಇದು ತನ್ನ ಆದ್ಯ ಕರ್ತವ್ಯ. ಹಾಗಾಗಿ ಮತ ಚಲಾಯಿಸಿದ್ದೇನೆ' ಎಂದು ತಿಳಿಸಿದ್ದಾರೆ.

ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ದಂಪತಿ ಸಮೇತ ಮತ ಚಲಾಯಿಸಿದ್ದಾರೆ. ಹಾವೇರಿಯ ಬಂಕಾಪುರದಲ್ಲಿ ಮತಗಟ್ಟೆ ಬಳಿ ವಾಮಾಚಾರ ನಡೆದಿದೆ.

ಈ ಮಧ್ಯೆ, ಕೋಲಾರದಲ್ಲಿ ಕೇಂದ್ರ ಮಂತ್ರಿ ಕೆಎಚ್ ಮುನಿಯಪ್ಪ ಅವರು ಮತಗಟ್ಟೆಯಲ್ಲಿ ಮತಯಂತ್ರವನ್ನು ಬದಲಾಯಿಸಿ ಅವಿವೇಕತನ ತೋರಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ತಕ್ಷಣ ಮತಗಟ್ಟೆ ಅಧಿಕಾರಿ ಮಂಜುಳಾ ಅವರನ್ನು ಬದಲಾಯಿಸಿದ್ದು, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿದೆ.

ಬಿಡದಿ ಬಳಿ ಮಾಯಾಂಗಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರು ಮತದಾರರಿಗೆ ಹಣ ಹಂಚುತ್ತಿದ್ದು ಅದನ್ನು ತಡೆಯಲು/ ಚಿಡಿಯೋ ಚಿತ್ರೀಕರಣ ಮಾಡಲು ನಮ್ಮ ಪ್ರತಿನಿಧಿಗಳು ಮುಂದಾದಾಗ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಎಪಿ ಪಕ್ಷದ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಆರೋಪಿಸಿದ್ದಾರೆ.

ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಯಳಂದೂರು ತಾಲೂಕಿನ ಬಸವೇಶ್ವರ ನಗರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಇಲ್ಲಿ 1000ಕ್ಕೂ ಅಧಿಕ ಮತಗಳಿದ್ದು, ಮತಗಟ್ಟೆ ಖಾಲಿಯಾಗಿದೆ. ಇದುವರೆಗೂ ಕೇವಲ ಒಬ್ಬರು ಮಾತ್ರ ಮತಚಲಾವಣೆ ಮಾಡಿದ್ದಾರೆ.

ಮತಯಂತ್ರದ ಮೇಲೆ ವಾಂತಿ : ಸಕಲೇಶಪುರದ ಮಂಜನಹಳ್ಳಿಯಲ್ಲಿ ಮತದಾನ ಮಾಡಲು ಬಂದ ವ್ಯಕ್ತಿ ಮತಯಂತ್ರದ ಮೇಲೆಯೇ ವಾಂತಿ ಮಾಡಿದ ಘಟನೆ ನಡೆಸಿದೆ. ಇದರಿಂದ ಮತದಾನ ಕೆಲಕಾಲ ಸ್ಥಗಿತಗೊಂಡಿತ್ತು. ಸದ್ಯ ಮತಯಂತ್ರವನ್ನು ಬದಲಾವಣೆ ಮಾಡಿರುವ ಚುನಾವಣಾ ಸಿಬ್ಬಂದಿ ಪುನಃ ಮತದಾನಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಮುನಿಯಪ್ಪಗೆ ವಾಸ್ತು ದೋಷ : ಕೇಂದ್ರ ಸಚಿವ ಮತ್ತು ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಾಸ್ತು ದೋಷದ ಭಯದಿಂದ ಮತಯಂತ್ರದ ದಿಕ್ಕು ಬದಲಾವಣೆ ಮಾಡಿ ಮತಚಲಾಯಿಸಿದ ಘಟನೆ ನಡೆಸಿದೆ. ಹಾರೋಹಳ್ಳಿಯ ಬೂತ್ ನಂ.230ರಲ್ಲಿ ಮತ ಚಲಾವಣೆ ಮಾಡಲು ಪತ್ನಿಯೊಂದಿಗೆ ಆಗಮಿಸಿದ ಮುನಿಯಪ್ಪ ದಕ್ಷಿಣ ದಿಕ್ಕಿಗೆ ಇದ್ದ ಮತಯಂತ್ರವನ್ನು ಪೂರ್ವ ದಿಕ್ಕಿಗೆ ತಿರುಗಿಸಿ ಮತದಾನ ಮಾಡಿದರು. ತಕ್ಷಣ ಚುನಾವಣಾ ಸಿಬ್ಬಂದಿ ಮತಯಂತ್ರವನ್ನು ಮೊದಲಿದ್ದಂತೆ ತಿರುಗಿಸಿ ಇಟ್ಟರು.

ಸಿ.ನಾರಾಯಣ ಸ್ವಾಮಿ ಮತದಾನ : ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.

ಮತದಾನದ ಪ್ರಮಾಣ : ಬೆಳಗ್ಗೆ ಏಳು ಗಂಟೆಯಿಂದಲೇ ಜನರು ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ ಇದುವರೆಗೂ ಶೇ. 16ರಷ್ಟು ಮತದಾನವಾಗಿದೆ.

ಕಾರ್ಯಕರ್ತರ ನಡುವೆ ಘರ್ಷಣೆ : ದೊಡ್ಡಬಳ್ಳಾಪುರದ ಆಡುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಳ್ಳವಳ್ಳಿ ಮತಗಟ್ಟೆಯಲ್ಲಿ ಹಣ ಹಂಚುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಚುನವಣಾ ಸಿಬ್ಬಂದಿ ಸಾವು : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೂಗಕೋಡಿನಲ್ಲಿ ಕರ್ತವ್ಯ ನಿರತರಾಗಿದ್ದ ಚುನಾವಣಾ ಸಿಬ್ಬಂದಿ ಬಷೀರ್ ಸಾಬ್ ಜಾರಿಯಾ(52) ಮತ್ತು ತುರುವೇಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿಬ್ಬಂದಿ ಗಂಗಯ್ಯ(57) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮತದಾನ ಬಹಿಷ್ಕಾರ : ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಕೊಳ್ಳೇಗಾಲದ ದೊಡ್ಡಾಣೆಯಲ್ಲಿ 450ಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕರಿಸಿದ್ದಾರೆ.

ಬೆಳಗಿನ ಸುದ್ದಿ: ಕರ್ನಾಟಕದಲ್ಲಿ ಇಂದು ಹಬ್ಬದ ವಾತಾವರಣ. ಇದು ದೇಶಹಬ್ಬ. 16ನೇ ಲೋಕಸಭೆಗೆ ರಾಜ್ಯದಿಂದ 28 ಮಂದಿಯನ್ನು ಆರಿಸಿ ಕಳುಹಿಸಬೇಕಾದ ಮಹತ್ವದ ಜವಾಬ್ದಾರಿ ರಾಜ್ಯದ ಮತದಾರರ ಮೇಲಿದೆ. ಹಾಗಾಗಿ ತಡಮಾಡದೆ ಈಗಲೇ ಮನೆಯಿಂದ ಹೊರಟು ಮೊದಲು ಮತ ಚಲಾಯಿಸಿ ಬನ್ನಿ.

ಹವಾ ಚೆನ್ನಾಗಿದೆ. ಕೂಲ್ ಕೂಲ್. ಸೂರ್ಯ ನೆತ್ತಿಗೇರುತ್ತಿದ್ದಂತೆ ಚುನಾವಣೆ ಕಾವು ಏರುತ್ತದೆ. ಹಾಗಾಗಿ ತಡಮಾಡದೆ ಆದಷ್ಟು ಬೇಗ ಮತ ಚಲಾಯಿಸಿ. NOTA ಇದೆ ಎಂದು ತುಂಬಾ ಸ್ಮಾರ್ಟ್ ಆಗಬೇಡಿ. ನೋಟ ಇರುವುದು ಚುನಾವಣಾ ಆಯೋಗದ ಪ್ರಯೋಗಕ್ಕೆ.

ನೋಟ ಬೀರಕ್ಕೆ ಇನ್ನೂ ಮುಂದೆ ಕಾಲ ಇದೆ. ದೇಶಕ್ಕೆ ಈಗ ಬೇಕಿರುವುದು ನೋಟ ಅಲ್ಲ. ಸದೃಢ ಸರಕಾರ. ಹಾಗಾಗಿ ಇರುವ ನಾಲ್ಕಾರು ಅಭ್ಯರ್ಥಿಗಳ ಪೈಕಿ ಒಬ್ಬ ಉತ್ತಮರನ್ನು ಆರಿಸಿಕೊಂಡು, ಅವರಿಗೇ ಮತ ಹಾಕಿ ಬನ್ನಿ. ಅಂತಿಮ ನಗು ನಿಮ್ಮದಾಗಲಿ. All the Best! (16ನೆ ಲೋಕಸಭೆಗೆ ನಡೆಯಲಿದೆ ನಿರ್ಣಾಯಕ ಮತದಾನ!)

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇ. 72ರಷ್ಟು ಮತದಾನವಾಗಿತ್ತು. ಆ ದಾಖಲೆ ಮುರಿಯಲಿ. ಈ ಬಾರಿ ಮತದಾನ ಶೆ. 80ರಷ್ಟು ದಾಟಲಿ ಎಂಬ ಸದಾಶಯವಿದೆ.
ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದಗೌಡರು ಮತ್ನಿ ಮತ್ತು ಪುತ್ರ ಜತೆ ಪುತ್ತೂರಿನಲ್ಲಿ ಮತಗಟ್ಟೆಗೆ ತೆರಳಿ ಮತ ಹಾಕಿ ಬಂದಿದ್ದಾರೆ. ಅದೇ ರೀತಿ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರು ಸಕುಟುಂಬ ಪರಿವಾರ ಸಮೇತ ಮತ ಚಲಾಯಿಸಿದ್ದಾರೆ. (ಮತದಾನದ ಚಿತ್ರಗಳು ಇಲ್ಲಿವೆ)

ಮತದಾರರಿಗೆ ಶಿವಕುಮಾರ ಸ್ವಾಮಿಗಳು ಆದರ್ಶವಾಗಲಿ:
ನಡೆದಾಡುವ ಹಿರಿಯ ಚೇತನ, ತುಮಕೂರು ಸಿದ್ಧಗಂಗಾ ಮಠದ 107 ವರ್ಷದ ಶಿವಕುಮಾರ ಸ್ವಾಮಿಗಳು ನಾಡಿನ ಯುವ ಮತದಾರರಿಗೆ ಮಾದರಿಯಾಗುವಂತೆ ಅವರೇ ಮತಗಟ್ಟೆವರೆಗೂ ನಡದುಹೋಗಿ ಮತ ಹಾಕಿ ಬಂದಿದ್ದಾರೆ. ಸೋ ತಡ ಏಕೆ ನೀವೂ ಮತ ಮಾಡಿಬನ್ನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+