ಲಾಕ್ಡೌನ್ ತೆರವು; ಬಿಬಿಎಂಪಿಗೆ ಶುರುವಾಯಿತು ಪರಿಸರ ಮಾಲಿನ್ಯದ ಆತಂಕ
ಬೆಂಗಳೂರು, ಮೇ 14: ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಸಂಬಂಧ ಕೂಡಲೇ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ತಿಳಿಸಿದ್ದಾರೆ.
Recommended Video
ಪರಿಸರ ಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಮಂಗಳವಾರ ಪಾಲಿಕೆ ಕೇಂದ್ರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ಯಾಕೇಜ್ ಟೀಕೆಸಿದ್ರೆ ದೇಶದ್ರೋಹಿಗಳಂತೆ ಬಿಂಬಿಸುತ್ತಾರೆ- ಕುಮಾರಸ್ವಾಮಿ
ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿದ್ದ ವೇಳೆ ಕೈಗಾರಿಗೆಗಳು ಸ್ಥಗಿತವಾಗಿದ್ದ ಪರಿಣಾಮ ಮಲಿನ ನೀರು ಕೆರೆಗಳಿಗೆ ಸೇರದೆ ಶುಚಿತ್ವವಾಗಿರುವುದನ್ನು ಕಾಣಬಹುದಾಗಿದೆ ಎಂಬ ಅಭಿಪ್ರಾಯವನ್ನು ಮೇಯರ್ ವ್ಯಕ್ತಪಡಿಸಿದರು.
ಎಲ್ಲ ಪ್ರಕಾರದ ಪರಿಸರ ಮಾಲಿನ್ಯ ತಡೆಗಟ್ಟಬೇಕು
ಎಲ್ಲ ಪ್ರಕಾರದ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಬಿಡಿಎ, ಪೊಲೀಸ್ ಹಾಗೂ ಬೆಸ್ಕಾಂ ಇಲಾಖೆಗಳ ಸಮನ್ವತೆಯಿಂದ ಕಾರ್ಯನಿರ್ವಹಿಸಿ ಪರಿಸರ ಮಾಲಿನ್ಯ ಆಗುವುದನ್ನು ತಡೆಯಲು ಸೂಕ್ತ ಕ್ರಮ ವಹಿಸಬೇಕಿದೆ ಎಂದು ಅಧಿಕಾರಿಗಳಿಗೆ ಮೇಯರ್ ಹೇಳಿದರು.
ಕೆರೆಗಳು ಹಾಳಾಗುತ್ತಿವೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ವೃಷಭಾವತಿ ವ್ಯಾಲಿ, ಹೆಬ್ಬಾಳ ವ್ಯಾಲಿ, ಚೆಲ್ಲಘಟ್ಟ ಹಾಗೂ ಕೋರಮಂಗಲ ವ್ಯಾಲಿ ಮತ್ತು ನೀರುಗಾಲುವೆಗಳಿಗೆ ಕೈಗಾರಿಕೆಗಳು ಮಲಿನ ರಾಸಾಯನಿಕ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೆರೆಗಳು ಹಾಳಾಗುತ್ತಿವೆ ಎಂದು ಮೇಯರ್ ಹೇಳಿದರು.
ಕಾರ್ಖಾನೆಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು
ಪರಿಸರ ಹಾಗೂ ಕೆರೆಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ. ಕೈಗಾರಿಕೆಗಳಿಂದ ರಾಸಯನಿಕಯುಕ್ತ ನೀರನ್ನು ಸಂಸ್ಕರಿಸದೆ ಕಲುಷಿತ ನೀರನ್ನು ಕೆರೆಗಳಿಗೆ ಬಿಟ್ಟರೆ ಅಂತಹ ಕಾರ್ಖಾನೆಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದರು.
ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ವಿಜಯ್ ಕುಮಾರ್ ಗೋಗಿ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ, ಲಾಕ್ಡೌನ್ ಆಗಿದ್ದರಿಂದ ಕೈಗಾರಿಕೆಗಳು, ಹೋಟೆಲ್ಗಳು, ಉದ್ಯಮಗಳು ಕಾರ್ಯನಿರ್ವಹಿಸದ ಪರಿಣಾಮ ವಿಷಪೂರಿತ ಹೊಗೆ ಪರಿಸರಕ್ಕೆ ಸೇರುವ ಪ್ರಮಾಣ ಕಡಿಮೆಯಾಗಿದ್ದು, ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.